'ಇವತ್ತು ಡಿಕೆ ಶಿವಕುಮಾರ್, ನಾಳೆ ಪೂಜಾರಿ, ನಾಡಿದ್ದು ಸೋನಿಯಾ ಗಾಂಧಿ'
ಮಂಗಳೂರು, ಆಗಸ್ಟ್ 02 : ರಾಜ್ಯ ಇಂಧನ ಸಚಿವ ಡಿಕೆ ಶಿವಕುಮಾರ್ ಮೇಲಿನ ಐಟಿ ದಾಳಿ ಕೇಂದ್ರ ಸರಕಾರದ ಹೀನ ಕೃತ್ಯ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಕಿಡಿಕಾರಿದ್ದಾರೆ.
ಬುಧವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಇವತ್ತು ಶಿವಕುಮಾರ್, ನಾಳೆ ಪೂಜಾರಿ, ನಾಡಿದ್ದು ಸೋನಿಯಾ ಗಾಂಧಿ, ಆ ಬಳಿಕ ರಾಹುಲ್ ಗಾಂಧಿ ಮೇಲೂ ಐಟಿ ದಾಳಿ ಮಾಡವ ಇರಾದೆ ಮೋದಿ ಅವರಿಗಿದೆ. ಆದರೆ, ಜನರು ಇದನ್ನೆಲ್ಲಾ ಗಮನಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.

"ಆದಾಯ ತೆರಿಗೆ ಇಲಾಖೆ ಯಾವ ಪಕ್ಷ ಇಲಾಖೆಯಲ್ಲ, ಯಾವ ವ್ಯಕ್ತಿಗೂ ಸೇರಿದ ಇಲಾಖೆ ಅಲ್ಲ. ಅದನ್ನು ತಮ್ಮಿಚ್ಛೆಯಂತೆ ಬಳಸುತ್ತಿರುವುದು ಸರಿಯಲ್ಲ. ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಗುರಿ ಮಾಡಿಕೊಂಡು 39 ಕಡೆ ದಾಳಿ ನಡೆಸಲಾಗಿದೆ. ಐಟಿ ದಾಳಿಗೆ ಸೇನೆಯ ಭಾಗವಾಗಿರುವ ಸಿಆರ್ ಪಿಎಫ್ ಪಡೆಯನ್ನು ಬಳಸಿಕೊಡಿರುವುದು ಡಿಕೆಶಿ ಅವರೇನು ಉಗ್ರಗಾಮಿಯೇ ಎಂದು ಅವರು ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವರನ್ನು ಯಾರು ಪ್ರಶ್ನಿಸುವಂತಿಲ್ಲವೆ. ಪ್ರಜಾಪ್ರಭುತ್ವ ಎಂದರೇ ಇದೇ ನಾ ಎಂದು ಪ್ರಶ್ನಿಸಿದ ಪೂಜಾರಿ, ಐಟಿ ದಾಳಿಗೆ ಮುನ್ನ ಕೆಲವೊಂದು ಕಾನೂನು ಪ್ರಕ್ರಿಯೆ ನಡೆಸಬೇಕಿತ್ತು. ಆದರೆ ಅದ್ಯಾವುದನ್ನು ಇಲ್ಲಿ ಮಾಡಲಾಗಿಲ್ಲ ಎಂದು ಕಿಡಿಕಾರಿದರು.
ರಾಜ್ಯಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಈ ದಾಳಿ ನಡೆಸಲಾಗಿದೆ. ಮೋದಿ ಅಧಿಕಾರಕ್ಕೆ ಬಂದ ಬಳಿಕ ಈವರೆಗೆ 1038 ಕಡೆ ದಾಳಿ ಮಾಡಲಾಗಿದೆ. ಈ ದಾಳಿಗಳಲ್ಲಿ ಈ ವರೆಗೆ ಎಷ್ಟು ಮೊತ್ತವನ್ನು ಸಂಗ್ರಹಿಸಲಾಗಿದೆ ಎಂದು ಅವರು ಪ್ರಶ್ನಿಸಿದರು.












Click it and Unblock the Notifications