ಇನ್ನು ಮುಂದೆ ಸೈಕ್ಲೋನ್ ಕಡಲತಡಿಗೆ ಅಪ್ಪಳಿಸುವ ಮುಂಚೆಯೇ ಮೊಳಗಲಿದೆ ಸೈರನ್!
ಮಂಗಳೂರು, ನವೆಂಬರ್. 21: ಅರಬ್ಬೀ ಸಮುದ್ರ ಸೇರಿದಂತೆ ಬಂಗಾಳ ಕೊಲ್ಲಿಯಲ್ಲಿ ಪದೇ ಪದೆ ಉಂಟಾಗುವ ವಾಯುಭಾರ ಕುಸಿತದಿಂದ ಸೃಷ್ಟಿಯಾಗುವ ಸೈಕ್ಲೋನ್ ಗೆ ಕರಾವಳಿಯ ಜನರು ಇನ್ನು ಕಂಗೆಡುವ ಅವಶ್ಯಕತೆ ಇಲ್ಲ. ಯಾಕೆಂದರೆ ಸೈಕ್ಲೋನ್ ಕಡಲತಡಿಗೆ ಅಪ್ಪಳಿಸುವ ಮುಂಚಿತವಾಗಿ ರಾಜ್ಯ ಕರಾವಳಿಯಲ್ಲಿ ಸೈರನ್ ಮೊಳಗಲಿದೆ.
ಚಂಡಮಾರುತ ಸುಳಿಯಿಂದ ಪಾರಾಗಲು ಕೇಂದ್ರ ಸರ್ಕಾರದ ನೇತೃತ್ವದಲ್ಲಿ, ಕರ್ನಾಟಕ ಸೇರಿದಂತೆ ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆ ಯೋಜನೆ ಕೈಗೊಳ್ಳಲಾಗುತ್ತಿದೆ. ಚಂಡಮಾರುತ ಅಪ್ಪಳಿಸುವ ಮುನ್ನ ಕರಾವಳಿಯ ಜನರನ್ನು ಯಾವ ರೀತಿ ಎಚ್ಚರಿಸುವುದು ಎಂಬುದೇ ಈ ಯೋಜನೆಯ ಉದ್ದೇಶವಾಗಿದೆ.
ಸೈಕ್ಲೋನ್ ಬೀಸಿದಾಗ ಕಾಪಾಡಿಕೊಳ್ಳುವುದರ ಬಗ್ಗೆ, 320 ಕಿ.ಮೀ.ಉದ್ದದ ಕರಾವಳಿ ಹೊಂದಿರುವ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಸೈಕ್ಲೋನ್ ಶೆಲ್ಟರ್ ನಿರ್ಮಾಣ, ಸೈಕ್ಲೋನ್ ಸೈರನ್ ಟವರ್ ರಚನೆ, ಯಾವುದೇ ಸಂಪರ್ಕ ವ್ಯವಸ್ಥೆ ಹದಗೆಟ್ಟರೆ ಬಳಕೆ ಮಾಡುವಂತಹ ಆಧುನಿಕ ಸ್ಯಾಟಲೈಟ್ ಫೋನ್, ಡಿಜಿಟಲ್ ರೇಡಿಯೊ ಸಹಿತ ಹಲವು ಅಂಶಗಳನ್ನು ಈ ಯೋಜನೆ ಒಳಗೊಂಡಿದೆ.

ಈ ಯೋಜನೆಯಡಿ ಸೈಕ್ಲೋನ್ ಬೀಸುವ ಪೂರ್ವದಲ್ಲೇ ಕಡಲ ತೀರದ ಜನರಿಗೆ ಹಾಗೂ ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡುವಂತಹ ಸೈಕ್ಲೋನ್ ಸೈರನ್ ಟವರ್ಸ್ ನಿರ್ಮಾಣಗೊಳ್ಳಲಿದೆ.ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಉಸ್ತುವಾರಿಯಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 13, ಉಡುಪಿಯಲ್ಲಿ 6 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಸೇರಿದಂತೆ ರಾಜ್ಯ ಕರಾವಳಿಯಲ್ಲಿ ಒಟ್ಟು 26 ಸೈಕ್ಲೋನ್ ಸೈರನ್ ಟವರ್ಗಳು ನಿರ್ಮಾಣಗೊಳ್ಳಲಿವೆ.
ಕೇಂದ್ರ-ರಾಜ್ಯ ಸಹಕಾರದಲ್ಲಿ ಒಟ್ಟು 128 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ , ಹೆಚ್ಚಾಗಿ ಚಂಡಮಾರುತ ಎದುರಿಸುವ ಪೂರ್ವ ಕರಾವಳಿಗೆ ಹೆಚ್ಚಿನ ಮೊತ್ತ ಮೀಸಲಿಡಲಾಗಿದೆ.












Click it and Unblock the Notifications