ಡಿ.15ರವರೆಗೆ ಭಾರಿ ಮಳೆ ಮುನ್ಸೂಚನೆ: ಮೀನುಗಾರರಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಮಂಗಳೂರು, ಡಿಸೆಂಬರ್12: ಚಂಡಮಾರುತ ಮತ್ತು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದ ಕರಾವಳಿಯಲ್ಲಿ ಮಳೆ ಮುಂದುವರಿದಿದೆ. ಸಂಜೆಯಾಗುತ್ತಿದ್ದಂತೆಯೇ ದಟ್ಟ ಮಂಜು ಆವರಿಸಿ ಮಳೆ ಸುರಿಯಲಾರಂಭಿಸುತ್ತಿದೆ.
ಭಾರಿ ಮಳೆ ಡಿಸೆಂಬರ್15ರವರೆಗೆ ಮುಂದುವರಿಯುವ ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯುವಾಗ ಎಚ್ಚರ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Breaking: ಕರ್ನಾಟಕದಲ್ಲಿ ಮಂಗಳವಾರ ನಂತರ ಮಳೆ ಕ್ಷೀಣ, ಇಂದು 12 ಜಿಲ್ಲೆಗೆ ಯೆಲ್ಲೋ ಅಲರ್ಟ್
ಇನ್ನು ಅರಬ್ಬೀ ಸಮುದ್ರದಲ್ಲಿ ಡಿಸೆಂಬರ್ 13ರಿಂದ ವಾಯುಭಾರ ಕುಸಿತವಾಗಲಿದ್ದು, ಎರಡು ದಿನ ಭಾರಿ ಮಳೆಯಾಗುವ ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ 65ಮಿ.ಮಿ ನಿಂದ 115ಮಿ.ಮಿವರೆಗೆ ಮಳೆ ಸುರಿಯಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗವಾದ ಬೆಳ್ತಂಗಡಿ, ಸುಳ್ಯ, ಪುತ್ತೂರು ಸೇರಿದಂತೆ ಹಲವು ಭಾಗಗಳಲ್ಲಿ ಸಂಪೂರ್ಣ ಮೋಡ ಕವಿದ ವಾತಾವರಣ ಕಂಡುಬಂದಿದೆ. ಸಂಜೆಯಾಗುತ್ತಿದ್ದಂಯತೆಯೇ ಮಂಜು ಆವರಿಸಿ ತುಂತುರು ಮಳೆ ಸುರಿಯಲಾರಂಭಿಸಿದೆ. ಮಳೆ ಭೂಮಿಯನ್ನು ತಂಪು ಮಾಡಿದರೂ ಅಪಾರ ಬೆಳೆ ನಷ್ಟವಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ.
ಕರಾವಳಿಯಲ್ಲಿ ಈಗ ಅಡಿಕೆ ಕೊಯ್ಲಿನ ಸಮಯವಾಗಿದ್ದು, ಕೊಯ್ಲು ಆದ ಅಡಿಕೆ ಅಂಗಳದಲ್ಲಿ ಮಳೆಗೆ ಕೊಳೆಯುತ್ತಿದೆ. ಇತ್ತ ಅಡಿಕೆ ಬಿಡುವ ಕಾಲದಲ್ಲೇ ಅಕಾಲಿಕ ಮಳೆಗೆ ಬೆಳೆ ಕೊಳೆಯುವ ಭೀತಿ ರೈತರದ್ದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಶಿರಾಡಿ, ಚಾರ್ಮಾಡಿ ಘಾಟ್ನಲ್ಲೂ ಹವಾಮಾನ ವೈಪರೀತ್ಯದಿಂದ ದಟ್ಟ ಮಂಜು ಮಳೆಯ ವಾತಾವರಣ ಕಂಡು ಬಂದಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಭಾರಿ ಚಳಿಯ ವಾತಾವರಣ ಏರ್ಪಟ್ಟಿದ್ದು, ಮಂಜು ಮುಸುಕಿದ ವಾತಾವರಣ ಎಲ್ಲೆಡೆ ಕಂಡುಬಂದಿದೆ.