Get Updates
Get notified of breaking news, exclusive insights, and must-see stories!

ಬೀಡಾ ಕಟ್ಟುತ್ತಿದ್ದ ಪವರ್ ಲಿಫ್ಟರ್ ಈಗ ಉಳ್ಳಾಲ ನಗರಸಭೆ ಸದಸ್ಯೆ

ಮಂಗಳೂರು, ಸೆಪ್ಟೆಂಬರ್.06: ಒಂದು ಕಾಲದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಈಗ ನಗರಸಭೆಯ ಸದಸ್ಯೆ. ಹೌದು, ಬಿಜೆಪಿಯಿಂದ ಈ ಬಾರಿ ಸ್ಪರ್ಧಿಸಿದ್ದ ಮಾಜಿ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಗೀತಾ ಬಾಯಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಗೀತಾ ಬಾಯಿ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಬಿಜೆಪಿಯಲ್ಲಿಯೇ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಈ ಮಧ್ಯೆಯೂ ಕಾಂಗ್ರೆಸ್ ನ ಅಕ್ಷತಾ ವಿರುದ್ಧ ಗೀತಾಬಾಯಿ ಗೆಲುವು ಸಾಧಿಸಿದ್ದಾರೆ.

ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಪ್ರತಿಕ್ರಿಯಿಸಿದ್ದ ಗೀತಾಬಾಯಿ "ಕೆಲವರ ಅಸಮಾಧಾನದ ನಡುವೆಯೂ ಜನರು ನನ್ನ ಕೈಬಿಟ್ಟಿಲ್ಲ. ಪಕ್ಷ ನನ್ನ ಮೇಲೆ ವಿಶ್ವಾಸವಿರಿಸಿ ಟಿಕೆಟ್ ನೀಡಿತ್ತು. ಮುಂದೆ ವಾರ್ಡ್ ನ ಜನರ ಅಭಿವೃದ್ಧಿಗೆ ಶ್ರಮಿಸುವೆ" ಎಂದು ಹೇಳಿದ್ದರು.

ಅಂತರಾಷ್ಟ್ರೀಯ ವೇಟ್ ಲಿಫ್ಟಿಂಗ್ ಹಾಗೂ ಪವರ್ ಲಿಫ್ಟಿಂಗ್ ನಲ್ಲಿ ಸಾಧನೆ ಮಾಡಿದ ಈಗ ಉಳ್ಳಾಲ ನಗರಸಭೆಗೆ ಆಯ್ಕೆಯಾಗಿರುವ ಗೀತಾಬಾಯಿ ಅವರದ್ದು ಸಂಘರ್ಷಮಯ ಜೀವನ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದರೂ ಗೀತಾಬಾಯಿ ಅವರತ್ತ ಸರಕಾರ ತಿರುಗಿಯೂ ನೋಡಿರಲಿಲ್ಲ.

ಅವರಿಗೆ ಯಾವುದೇ ಸರಕಾರಿ ಅಥವಾ ಕಾರ್ಪೊರೇಟ್ ಸಂಸ್ಥೆಗಳು ಉದ್ಯೋಗ ನೀಡಲಿಲ್ಲ . ಹಾಗಂತ ಗೀತಾ ಬಾಯಿ ಸುಮ್ಮನೇ ಕೂರಲಿಲ್ಲ. ಜೀವನ ನಿರ್ವಣೆಗೆ ಗೀತಾಬಾಯಿ ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ ಎಲೆ-ಅಡಕೆ ಬೀಡಾ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.

ಇಷ್ಟೇ ಅಲ್ಲ, ಸಾಕಷ್ಟು ಶ್ರಮ ಬೇಡುವ ಕೆಲಸಗಳನ್ನ ಮಾಡಿರುವ ಗೀತಾಬಾಯಿ ಅವರು ತಮ್ಮ ಮನದಾಳದ ಅನಿಸಿಕೆಯನ್ನು ಒನ್ ಇಂಡಿಯಾ ಜೊತೆ ಹಂಚಿಕೊಂಡಿದ್ದು ಹೀಗೆ.

 ಬೀಡಾ ಕಟ್ಟುತ್ತಿದ್ದ ಗೀತಾಬಾಯಿ

ಬೀಡಾ ಕಟ್ಟುತ್ತಿದ್ದ ಗೀತಾಬಾಯಿ

ಗೀತಾಬಾಯಿ ಅಡಕೆ ಬೀಡಾ ಕಟ್ಟುವ ಕಾಯಕ ಮಾತ್ರವಲ್ಲದೆ ಥರ್ಮಾಕೋಲ್ ಬಾಕ್ಸ್, ಪ್ಯಾಕಿಂಗ್ ಟೇಪ್ ಮತ್ತು ಹಗ್ಗ ಮಾರಾಟ ಮಾಡುತ್ತಿದ್ದರು. ಜೊತೆಗೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಬಟ್ಟೆ ಹಾಗೂ ನೈಲಾನ್ ಕೈ ಚೀಲಗಳ ಮಾರಾಟವನ್ನೂ ಮಾಡಿದರು.

ಮಂಗಳೂರಿನ ಹಂಪನಕಟ್ಟೆಯ ಮೀನಿನ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಪ್ಲಾಸ್ಟಿಕ್ ಚೀಲಗಳನ್ನು ಮಾರಾಟ ಮಾಡಿದ ಗೀತಾ ಬಾಯಿ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧಗೊಂಡ ಬಳಿಕ ಪರ್ಯಾಯ ಉದ್ಯೋಗದತ್ತ ಚಿಂತೆ ಮಾಡಿ ಪಾನ್ ಬೀಡಾ ವ್ಯಾಪಾರ ಶುರು ಮಾಡಿದರು.

ತಮ್ಮ ತೋಳ್ಬಲಗಳಿಂದ ನೂರಾರು ಕೆಜಿ ಭಾರ ಎತ್ತುತ್ತಿದ್ದ ಗೀತಾ ಬಾಯಿ ಅವರ ಕೈಗಳು ದಿನಕ್ಕೆ ನೂರು ಬೀಡಾಗಳನ್ನು ಕಟ್ಟುತ್ತಿದ್ದವು.

 ಮೂರು ಚಿನ್ನದ ಪದಕ, 11 ಬೆಳ್ಳಿ ಪದಕ

ಮೂರು ಚಿನ್ನದ ಪದಕ, 11 ಬೆಳ್ಳಿ ಪದಕ

ಅಂತರಾಷ್ಟ್ರೀಯ ,ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಮೂರು ಚಿನ್ನದ ಪದಕ, 11 ಬೆಳ್ಳಿ ಪದಕ ಮತ್ತು 16 ಕಂಚಿನ ಪದಕಗಳನ್ನು ಪಡೆದಿರುವ ಗೀತಾ ಬಾಯಿ ಅವರನ್ನು ಸಂಘ ಸಂಸ್ಥೆಗಳು ಸನ್ಮಾನಿಸಿದ್ದರೂ ರಾಜ್ಯ , ಕೇಂದ್ರ ಸರಕಾರ ಮಾತ್ರ ಗುರುತಿಸಿ ಸೂಕ್ತ ಸ್ಥಾನಮಾನ, ಉದ್ಯೋಗ ನೀಡಲಿಲ್ಲ.

ಫಿನ್ಲೆಂಡ್ ನಲ್ಲಿ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆಯುವ ಸಮೀಪಕ್ಕೆ ಬರುವಲ್ಲಿ ಸಫಲರಾಗಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಆದರೆ ಜಪಾನ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು.

16 ಬಾರಿ ಇಂಟರ್ ನ್ಯಾಷನಲ್ ಈವೆಂಟ್ ಗಳಲ್ಲಿ ಭಾಗವಹಿಸುವ ಅವಕಾಶವಿದ್ದರೂ ಹಣಕಾಸಿನ ಅಡಚಣೆ, ಪ್ರವರ್ತಕರ ಕೊರತೆಯಿಂದಾಗಿ ಆ ಯೋಜನೆಗಳು ನನಸಾಗಿರಲಿಲ್ಲ .

 ಹಳೆ ಕಾಯಕ ಮುಂದುವರೆಯುತ್ತದೆ

ಹಳೆ ಕಾಯಕ ಮುಂದುವರೆಯುತ್ತದೆ

ಸೂಕ್ತ ವಿದ್ಯಾಭ್ಯಾಸ ಇಲ್ಲ ಎಂಬ ಕಾರಣಕ್ಕೆ ಸರಕಾರಿ ನೌಕರಿ ಗೀತಾಬಾಯಿ ಪಾಲಿಗೆ ಮರೀಚಿಕೆಯಾಗಿಯೇ ಉಳಿಯಿತು. ರೈಲ್ವೇ ನಿಲ್ದಾಣದಲ್ಲಿ ಕನಿಷ್ಠ ತನಗೊಂದು ಗೇಟ್ ಕಾಯುವ ಕೆಲಸವಾದರೂ ಸಿಗಲಿ ಎಂಬ ನಿರೀಕ್ಷೆಯೊಂದಿಗೆ ಕಳೆದ ಹಲವಾರು ವರ್ಷಗಳಿಂದ ಸಚಿವರಿಗೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಫಲತೆ ಸಿಗಲಿಲ್ಲ.

ಕಡು ಬಡತನದಲ್ಲಿ ಜೀವಿಸಿದ ಗೀತಾಬಾಯಿ ಈಗ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ಉಳ್ಳಾಲ ನಗರಸಭೆ ಚುನಾವಣೆಯಲ್ಲಿ ಗೆದ್ದು ಜನ ಪ್ರತಿನಿಧಿಯಾಗಿದ್ದಾರೆ. ಉಳ್ಳಾಲ ನಗರಸಭೆಯ ಸದಸ್ಯೆಯಾದರೂ ತಮ್ಮ ಪ್ಲಾಸ್ಟಿಕ್ ಕೈ ಚೀಲ, ಪಾನ್ ಬೀಡ ಮಾರುವ ಕಾಯಕ ಮುಂದುವರೆಸುವ ಬಗ್ಗೆ ತಿಳಿಸಿದ್ದಾರೆ.

 ವಿಷಾದ ವ್ಯಕ್ತಪಡಿಸಿದ ಗೀತಾಬಾಯಿ

ವಿಷಾದ ವ್ಯಕ್ತಪಡಿಸಿದ ಗೀತಾಬಾಯಿ

ನಗರಸಭೆಯ ಸದಸ್ಯೆಯಾದರೂ ಹೊಟ್ಟೆಪಾಡಿಗೆ ಏನಾದರೂ ಉದ್ಯೋಗ ಮಾಡಲೇಬೇಕಲ್ಲ ಎನ್ನುವ ಗೀತಾಬಾಯಿ "ಸದಸ್ಯೆಯಾಗಿ ನನ್ನ ಕೈಲಾದಷ್ಟು ಜನರ ಸೇವೆ ಮಾಡುತ್ತೇನೆ. ಆದರೆ ಹೊಟ್ಟೆಯೊಂದಿದೆಯಲ್ಲ. ಅದನ್ನ ತುಂಬಿಸಿಕೊಳ್ಳಲು ಏನಾದರೂ ಕಾಯಕ ಮಾಡಲೇಬೇಕು. ಶ್ರಮ ಪಡಲೇಬೇಕು. ರಾಜಕೀಯದ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ .

ಜನರ ಸೇವೆ ಮಾಡುವ ದೃಢ ನಿರ್ಧಾರ ಮಾಡಿದ್ದೇನೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಸುಧೀರ್ಘ 18 ವರ್ಷ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದೆ. ಪವರ್ ಲಿಫ್ಟಿಂಗ್, ವೇಟ್ ಲಿಫ್ಟಿಂಗ್ , ಕಬ್ಬಡಿ, ಹಗ್ಗ ಜಗ್ಗಾಟ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದೆ. ಸರಕಾರದಿಂದ ಕೋಚ್ ಆಗಿ ನೇಮಕಗೊಂಡು ಬೆಳೆಯುತ್ತಿರುವ ಪ್ರತಿಭೆಗಳಿಗೆ ತರಬೇತಿ ನೀಡಬೇಕು ಎಂದಿದ್ದೆ.

ಒಲಂಪಿಕ್ಸ್ ನಲ್ಲಿ ದೇಶಕ್ಕಾಗಿ ಪದಕ ಗೆಲ್ಲಬಲ್ಲ ಪ್ರತಿಭೆಗಳನ್ನು ಗುರುತಿಸಿ ತರಬೇತುಗೊಳಿಸಬೇಕೆಂಬ ಮಹದಾಸೆ ಹೊಂದಿದ್ದೆ ಆದರೆ ಯಾವುದೂ ಕೈಗೋಡಲಿಲ್ಲ" ಎಂದು ಗೀತಾಬಾಯಿ ವಿಷಾದಿಸಿದರು.

 ಯುವಕರ ಶ್ರಮಕ್ಕೆ ಮೆಚ್ಚುಗೆ

ಯುವಕರ ಶ್ರಮಕ್ಕೆ ಮೆಚ್ಚುಗೆ

ಈಗ ರಾಜಕೀಯಕ್ಕೆ ಎಂಟ್ರಿ ನೀಡಿದ್ದೇನೆ. ನಗರಸಭೆ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದ ಜನರಿಗಾಗಿ ಕೈಲಾದಷ್ಟು ಕೆಲಸ ಮಾಡಬೇಕು ಅಂದುಕೊಂಡಿದ್ದೇನೆ. ಚುನಾವಣೆಗೆ ನಿಲ್ಲುವ ಸಂದರ್ಭದಲ್ಲಿ ಕೈಯ್ಯಲ್ಲಿ ಬಿಡಿಗಾಸು ಇರಲಿಲ್ಲ. ಆದರೆ ನನ್ನ ಗೆಲುವಿನ ಬೆನ್ನಿಗೆ ನಿಂತವರು ನನ್ನ ವಾರ್ಡ್ ನ ಯುವಕರು.

ಬಡತನದಲ್ಲೇ ದಿನ ದೂಡುತ್ತಿರುವ ನನ್ನ ಮೇಲೆ ಬಿಜೆಪಿ ಪಕ್ಷ ವಿಶ್ವಾಸವಿಟ್ಟಿತ್ತು. ಯುವಕರ ಎಬಿಸಿ ಕ್ಲಬ್, ಶಿವಾಜಿ ಯುವಕ ವೃಂದ, ನಿತ್ಯಾನಂದ ಯುವಕ ವೃಂದದ ಸದಸ್ಯರು ಹಗಲಿರುಳು ನಿಸ್ವಾರ್ಥವಾಗಿ ಶ್ರಮಿಸಿದ್ದಾರೆ.

ಪ್ರಚಾರ ಸಂದರ್ಭದಲ್ಲಿ ಅವರಿಗೆ ಒಂದು ಟೀ ಕುಡಿಸುವಷ್ಟು ನನ್ನಲ್ಲಿ ಹಣವಿಲ್ಲದಿದ್ದರೂ ನನಗಾಗಿ ಅವರು ಶ್ರಮಿಸಿದ್ದಾರೆ ಎಂದು ಹೇಳಿದರು. ಇನ್ನು ಕೆಲವೇ ದಿನಗಳಲ್ಲಿ ಮತ್ತೆ ನಗರ ಹಂಪನ ಕಟ್ಟೆಯ ಮೀನು ಮಾರುಕಟ್ಟೆ ಹೊರಗೆ ಪಾನ್ ಬೀಡಾ , ಪ್ಲಾಸ್ಟಿಕ್ ಕೈ ಚೀಲ ಮಾರಾಟ ಮಾಡುವ ವೃತ್ತಿ ಮುಂದುವರೆಸುತ್ತೇನೆ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+