ತಟ್ಟಿದ ನೀತಿ ಸಂಹಿತೆ ಬಿಸಿ, ಬಸ್ ಏರಿದ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ
ಮಂಗಳೂರು, ಮಾರ್ಚ್ 28: ರಾಜ್ಯ ವಿಧಾನ ಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣಾ ನೀತಿ ಸಂಹಿತೆಯ ಬಿಸಿ ರಾಜಕಾರಣಿಗಳಿಗೆ ತಟ್ಟಿದೆ. ಸರಕಾರದಿಂದ ನೀಡಲಾಗಿದ್ದ ಎಲ್ಲಾ ಸೌಲಭ್ಯಗಳನ್ನು ತಕ್ಷಣದಿಂದ ಹಿಂಪಡೆಯಲಾಗಿದೆ.
ಚುನಾವಣೆ ನೀತಿ ಸಂಹಿತೆಯ ಬಿಸಿ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಅವರಿಗೆ ಮಂಗಳವಾರ ತಟ್ಟಿತು. ಶಾಸಕಿ ಶಕುಂತಲಾ ಶೆಟ್ಟಿ , ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಸರಕಾರಿ ಕಾರು ನೀಡಲಾಗಿತ್ತು. ಆದರೆ ಚುನಾವಣಾ ನೀತಿಸಂಹಿತೆ ಪರಿಣಾಮ ಶಕುಂತಲಾ ಶೆಟ್ಟಿ ಸರಕಾರಿ ಕಾರು ಬಿಟ್ಟು ಬಸ್ಸಿನಲ್ಲಿ ಪ್ರಯಾಣಿಸಿದ ಪ್ರಸಂಗ ಬೆಳಕಿಗೆ ಬಂದಿದೆ.

ಪುತ್ತೂರಿನ ಬೆಟ್ಟಂಪಾಡಿ ಎಂಬಲ್ಲಿಗೆ ಕಾರ್ಯಕ್ರಮಕ್ಕೆ ಶಾಸಕಿ ಶಕುಂತಲಾ ಶೆಟ್ಟಿ ತೆರಳಿದ್ದರು. ಆದರೆ ಈ ನಡುವೆ ಚುನಾವಣಾ ದಿನಾಂಕ ಘೋಷಣೆಯಾದ ಪರಿಣಾಮ ಕಾರ್ಯಕ್ರಮ ಮುಗಿಸಿ ಕಾರು ಏರದೆ ಶಾಸಕಿ ಕಾರ್ಯಕ್ರಮದ ಸ್ಥಳದಿಂದ ಬಸ್ಸಿನಲ್ಲಿ ಹಿಂತಿರುಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸಚಿವರುಗಳಿಗೆ ಒದಗಿಸಲಾದ ಎಲ್ಲಾ ವಾಹನ ಸೌಲಭ್ಯ ಈಗಾಗಲೇ ಹಿಂಪಡೆಯಲಾಗಿದೆ . ಅನುಮತಿ ಹೊಂದಿರದ ಯಾವುದೇ ಬ್ಯಾನರ್ ಹಾಗೂ ಪೋಸ್ಟರ್ ಗಳನ್ನು ತೆಗೆಯಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಪುತ್ತೂರು ಕ್ಷೇತ್ರದ ಶಾಸಕಿ ಶಕುಂತಳಾ ಶೆಟ್ಟಿ ಅವರ ಮಾದರಿ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.












Click it and Unblock the Notifications