ಆಳ ಸಮುದ್ರದಲ್ಲಿ ಅಪಾಯದಲ್ಲಿದ್ದ 15 ಮೀನುಗಾರರನ್ನು ರಕ್ಷಿಸಿದ ಭಾರತೀಯ ತಟರಕ್ಷಣಾ ಪಡೆ
ಮಂಗಳೂರು, ಡಿಸೆಂಬರ್ 07: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಮುದ್ರ ಪಾಲಾದ ತಮಿಳುನಾಡು ಮೂಲದ ಮೀನುಗಾರನೊಬ್ಬನ ಮೃತ ದೇಹವನ್ನು ಭಾರತೀಯ ತಟರಕ್ಷಣಾ ಪಡೆ ಪತ್ತೆ ಹಚ್ಚಿದ್ದು, ಮೀನುಗಾರಿಕಾ ದೋಣಿಯಲ್ಲಿ ಅಪಾಯದಲ್ಲಿದ್ದ 15 ಜನ ಮೀನುಗಾರರನ್ನೂ ರಕ್ಷಿಸಿದೆ.
ಕೇರಳದ ಬೇಕೂರಿನಿಂದ ಮೀನುಗಾರಿಕೆಗೆ 16 ಜನ ಮೀನುಗಾರರು ತೆರಳಿದ್ದರು. ಗೈನ್ ಹೆಸರಿನ ಬೋಟ್ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟ್ನಲ್ಲಿದ್ದ ಕಾರ್ಮಿಕ ತಮಿಳುನಾಡಿನ ಕನ್ಯಾಕುಮಾರಿ ನಿವಾಸಿ 61 ವರ್ಷದ ಸೆಲುವಾಯ್ ಡಿಕ್ರೂಸ್ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದರು ಎನ್ನಲಾಗಿದೆ.
ಘಟನೆಯಿಂದ ಕಂಗಾಲಾದ ಬೋಟ್ನಲ್ಲಿದ್ದ ಉಳಿದ ಕಾರ್ಮಿಕರು ಒತ್ತಡ ಹಾಗೂ ಸಂಕಷ್ಟಕ್ಕೆ ಸಿಲುಕಿದ್ದರು. ಅದನ್ನು ಅರಿತ ಬೋಟ್ ಮಾಲೀಕ ನಿಸಾರ್ ಹನೀಫ್ ಕೋಸ್ಟ್ ಗಾರ್ಡ್ ಅಧಿಕಾರಿಗಳ ಸಹಾಯ ಯಾಚಿಸಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಕೋಸ್ಟ್ ಗಾರ್ಡ್ ಅಧಿಕಾರಿಗಳು ಆಳ ಸಮುದ್ರದಲ್ಲಿ ಗಸ್ತಿನಲ್ಲಿದ್ದ ಐ ಎನ್ ಎಸ್ ಅಮರ್ತ್ಯ ಹೆಸರಿನ ಹಡಗಿನ ಮೂಲಕ ಘಟನಾ ಸ್ಥಳಕ್ಕೆ ತೆರಳಿ ಸಂಕಷ್ಟಲ್ಲಿದ್ದ ಉಳಿದ 15 ಮಂದಿ ಮೀನಗಾರರನ್ನು ರಕ್ಷಣೆ ಮಾಡಿದ್ದಾರೆ.
ಮಂಗಳೂರಿನಿಂದ 6 ನಾಟಿಕಲ್ ಮೈಲು ದೂರದಲ್ಲಿ ಕಾಣೆಯಾಗಿದ್ದ ಸೆಲುವಾಯ್ ಅವರ ಮೃತ ದೇಹ ಪತ್ತೆ ಮಾಡಲಾಗಿದ್ದು, ರಕ್ಷಣೆ ಮಾಡಲಾದ ಮೀನುಗಾರರನ್ನು ಕೇರಳದ ಕಣ್ಣೂರಿನ ಸುರಕ್ಷಿತ ಸ್ಥಳದಲ್ಲಿ ಬಿಡಲಾಗಿದೆ.












Click it and Unblock the Notifications