ಲೋಕಸಭಾ ಚುನಾವಣೆ ಹಿನ್ನೆಲೆ:ದಕ್ಷಿಣ ಕನ್ನಡದ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ
ಮಂಗಳೂರು, ಮಾರ್ಚ್ 21: ಲೋಕಸಭೆ ಚುನಾವಣೆ ವೇದಿಕೆ ಸಜ್ಜಾಗಿದೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಕಸರತ್ತಿನಲ್ಲಿದ್ದರೆ, ಇನ್ನೊಂದೆಡೆ ಚುನಾವಣಾ ಆಯೋಗ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಸಜ್ಜಾಗಿ ನಿಂತಿದೆ.
ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಹಣ ಹಾಗೂ ಸರಕು ಸಾಗಾಟ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲೆಯ ಅಂತಾರಾಜ್ಯ ಗಡಿ ಪ್ರದೇಶದಲ್ಲಿ ತೀವ್ರ ಕಣ್ಗಾವಲು ಇಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕೇರಳ ಗಡಿ ಪ್ರದೇಶದಲ್ಲಿ ಸುಮಾರು 12 ಅಂತರಾಜ್ಯ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ. ಇಲ್ಲಿ ಉಭಯ ರಾಜ್ಯಗಳ ಪೊಲೀಸರು ದಿನದ 24 ಗಂಟೆಯೂ ಚೆಕ್ ಪೋಸ್ಟ್ ಗಳಲ್ಲಿ ಕಟ್ಟೆಚ್ಚರ ವಹಿಸುತ್ತಿದ್ದಾರೆ.ಹವಾಲಾ ಹಣ ಸಾಗಾಟ ನಿಯಂತ್ರಿಸುವುದು ಕೂಡ ಇದರ ಮುಖ್ಯ ಉದ್ದೇಶವಾಗಿದೆ.

ಚುನಾವಣೆ ಸಂದರ್ಭ ಶಂಕಾಸ್ಪದವಾಗಿ ತಿರುಗಾಡುವ ಸರಕು ಹಾಗೂ ಇತರ ವಾಹನಗಳನ್ನು ತಪಾಸಣೆ ನಡೆಸುವುದು ಚೆಕ್ಪೋಸ್ಟ್ಗಳ ಮುಖ್ಯ ಉದ್ದೇಶವಾಗಿದೆ. ಚುನಾವಣಾ ದಿನದಂದು ಕೇರಳ ವ್ಯಾಪ್ತಿಯ ನಿವಾಸಿಗಳು ಕರ್ನಾಟಕದಲ್ಲಿ ಬಂದು ನಕಲಿ ಮತದಾನ ಮಾಡದಂತೆ ಹಾಗೆಯೇ ಕರ್ನಾಟಕ ಗಡಿ ಪ್ರದೇಶದ ಮಂದಿ ಕೇರಳದಲ್ಲಿ ಮತ ಚಲಾಯಿಸದಂತೆ ಜಿಲ್ಲಾಡಳಿತ ಎಚ್ಚರವಹಿಸಿದೆ.
ಕರ್ನಾಟಕ-ಕೇರಳ ಜಿಲ್ಲಾಡಳಿತ ನಡುವೆ ಸಮರ್ಪಕ ಮಾಹಿತಿ ವಿನಿಮಯ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಪೊಲೀಸ್, ಆರ್ಟಿಒ, ವಾಣಿಜ್ಯ ತೆರಿಗೆ, ಅರಣ್ಯ ಮತ್ತಿತರ ಇಲಾಖೆಗಳ ನಡುವೆ ಹೆಚ್ಚಿನ ಸಮನ್ವತೆಗೆ ಸೂಚಿಸಲಾಗುವುದು. ಗಡಿ ದಾಟಿ ಚುನಾವಣೆ ಅಕ್ರಮಗಳು ಆಗದಂತೆ ಒತ್ತು ನೀಡಲಾಗಿದೆ.
ಕರಾವಳಿಯ ತೀರ ಪ್ರದೇಶದಲ್ಲಿಯೂ ಭದ್ರತೆಯ ಕುರಿತು ಹೆಚ್ಚಿನ ನಿಗಾ ವಹಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾಡಳಿತ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳ ಬಳಕೆಗೂ ನಿರ್ಬಂಧಿಸಿದೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯ ಚುನಾವಣಾ ಖರ್ಚುವೆಚ್ಚಗಳನ್ನು ಪರಿಶೀಲಿಸಲು ಜಿಲ್ಲೆಯಲ್ಲಿ 73 ಫ್ಲೈಯಿಂಗ್ ಸ್ಕ್ವಾಡ್ ತಂಡಗಳು, 62 ಮೇಲ್ವಿಚಾರಣಾ ತಂಡಗಳು, 25 ವೀಡಿಯೋ ಮೇಲ್ವಿಚಾರಣಾ ತಂಡಗಳು ಕಾರ್ಯನಿರ್ವಹಿಸುತ್ತಿವೆ.












Click it and Unblock the Notifications