ಬೆಳಕಿಗೆ ಬಂತು ಬಿಸ್ಲೆ ಘಾಟ್ ಭೀಕರ ಜಲಪ್ರಳಯ ದೃಶ್ಯಗಳು
ಮಂಗಳೂರು, ಆಗಸ್ಟ್ 20: ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗ ಕೊಡಗಿನ ಜೋಡುಪಾಳ ಹಾಗು ಮದೆನಾಡು ಪ್ರದೇಶದಲ್ಲಾದ ನಾಶಕ್ಕಿಂತಲೂ ಬಿಸ್ಲೆ ಘಾಟ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ದುರಂತ ಸಂಭವಿಸಿರುವುದು ಬೆಳಕಿಗೆ ಬರುತ್ತಿದೆ. ಹೌದು, ಜೋಡುಪಾಳ ಹಾಗು ಮದೆನಾಡಿನಂತೆ ಕೊಚ್ಚಿ ಹೋಗಿದೆ ಬಿಸ್ಲೆ ಘಾಟ್.
ಇತ್ತೀಚೆಗೆ ಬಿಸ್ಲೆ ಘಾಟ್ ನಲ್ಲಿ ಸಂಭವಿಸಿದ ಭೀಕರ ಜಲಪ್ರಳಯ ದೃಶ್ಯಗಳು ಒಂದೊಂದಾಗಿ ಈಗ ಬೆಳಕಿಗೆ ಬರುತ್ತಿವೆ. ಬೆಟ್ಟ ಬಿರುಕೊಡೆದು ಭಾರೀ ಪ್ರಮಾಣದ ನೀರು ಹರಿದಿದೆ. ನೀರಿನ ರಭಸಕ್ಕೆ ಗಜಗಾತ್ರದ ಮರಗಳೂ ಬುಡ ಸಮೇತ ಕೊಚ್ಚಿಹೋಗಿವೆ.
ಮುಳ್ಳಯ್ಯನಗಿರಿ ದತ್ತಪೀಠದ ರಸ್ತೆ ಮಾರ್ಗ ಸಂಪೂರ್ಣ ಬಂದ್
ಸುಬ್ರಹ್ಮಣ್ಯದಿಂದ ಸಕಲೇಶಪುರ-ಬೆಂಗಳೂರು ಸಂಪರ್ಕ ಕಲ್ಪಿಸುವ ಬಿಸ್ಲೆ ಘಾಟ್ ರಸ್ತೆ ಕೊಚ್ಚಿಹೋಗಿದ್ದು, ಇಲ್ಲಿ ರಾಜ್ಯ ಹೆದ್ದಾರಿ ಒಂದಿತ್ತೇ ಅನ್ನುವ ಕುರುಹು ಕೂಡ ಇಲ್ಲದಂತಾಗಿದೆ.
ಈ ಬಿಸ್ಲೆ ಘಾಟ್ ಪರಿಸರದಲ್ಲಿ ಯಾವುದೇ ಜನ ವಸತಿ ಇಲ್ಲದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಲಾಗಿದೆ. ಬೆಟ್ಟದ ಮೇಲಿನ ಹರಿದು ಬಂದ ನೀರು ನದಿಯಾಗಿ ರೂಪಾಂತರಗೊಂಡು ತನ್ನ ಮುಂದೆ ಸಿಕ್ಕಿದ್ದೆಲ್ಲವನ್ನು ಕೊಚ್ಚಿಕೊಂಡು ಹೋಗಿದೆ.
ನೀರಿನ ರಭಸಕ್ಕೆ ಸಂಪರ್ಕ ಸೇತುವೆ ಕೊಚ್ಚಿಹೋಗಿದೆ. ಇನ್ನೊಂದೆಡೆ ಭೂಕುಸಿತ ಮುಂದೆ ಸಿಕ್ಕಿದೆಲ್ಲವನ್ನು ನಾಶ ಮಾಡಿದೆ. ಈ ಭಾಗದಲ್ಲಿ ಬೆಟ್ಟದ ಮೇಲೆ ಕದ್ದುಮುಚ್ಚಿ ನಡೆಯುತ್ತಿದ್ದ ಹರಳು ಕಲ್ಲು ಗಣಿಗಾರಿಕೆ ಕೂಡ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.