ಬಾಂಬರ್ ಆದಿತ್ಯ ರಾವ್ ಬದಲಿಸಿದ್ದ ಉದ್ಯೋಗಗಳ ಪಟ್ಟಿ ಹನುಮಂತನ ಬಾಲ
ಮಂಗಳೂರು, ಜನವರಿ 23: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಆದಿತ್ಯ ರಾವ್ ಈಗ ಮಂಗಳೂರು ಪೊಲೀಸರ ವಶದಲ್ಲಿದ್ದು, ಆತನ ಬಗ್ಗೆ ವಿವರವಾದ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.
ಆತನ ಜನ್ಮ ಸ್ಥಳ, ಶಿಕ್ಷಣ, ಉದ್ಯೋಗ ಇನ್ನು ಹಲವು ಮಾಹಿತಿಗಳನ್ನು ಆದಿತ್ಯ ರಾವ್ ನಿಂದ ಕೇಳಿ ಪಡೆದು, ಸ್ವ ಇಚ್ಛಾ ಹೇಳಿಕೆಯಲ್ಲಿ ದಾಖಲಿಸಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಈ ಬಗ್ಗೆ ವಿವರವಾಗಿ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪೂರೈಸಿರುವ ಆದಿತ್ಯ ರಾವ್ ಬದಲಿಸಿರುವ ಉದ್ಯೋಗಗಳ ಪಟ್ಟಿ ಹನುಮಂತನ ಬಾಲದಂತೆ ಉದ್ದವಿದೆ. ಆದಿತ್ಯ ರಾವ್ ಕೆಲಸ ಬದಲಿಸಿರುವ ವೇಗ ತೆಲುಗಿನ 'ಕಿಕ್' ಸಿನಿಮಾದ ನಾಯಕನನ್ನು ನೆನಪಿಸುವಂತಿದೆ.
ಮಣಿಪಾಲದ ಆದಿತ್ಯ ರಾವ್ ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ್ದಾನೆ. ನಂತರ ಮತ್ತೊಂದು ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಎ ಮಾರ್ಕೆಟಿಂಗ್ ಆಂಡ್ ಆಪರೇಷನ್ ಸ್ನಾತಕೋತ್ತರ ಪದವಿ ಪಡೆದಿದ್ದಾನೆ.

ಟಾಪ್ ಹಣಕಾಸು ಸಂಸ್ಥೆಗಳಲ್ಲಿ ಉದ್ಯೋಗ ಮಾಡಿದ್ದ
ಮೊದಲಿಗೆ ಎಂಬಿಎ ಶಿಕ್ಷಣ ಆಧರಿಸಿ ಹಣಕಾಸು, ವಿಮೆ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಆದಿತ್ಯ ರಾವ್, ದೊಡ್ಡ-ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾನೆ. ಐಸಿಐಸಿಐ ಪ್ರ್ಯುಡೆನ್ಶಿಯಲ್, ಎಚ್ಎಸ್ಬಿಸಿ, ಎಚ್ಡಿಎಫ್ಸಿ ಲೈಫ್, ಐಸಿಐಸಿಐ ಲೊಂಬಾರ್ಡ್, ಬಿರ್ಲಾ ಸನ್ ಲೈಫ್ ಇನ್ನೂ ಹಲವು ಹಣಕಾಸು ಸಂಬಂಧಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾನೆ. ಇಲ್ಲಿ ಉತ್ತಮ ಸಂಬಳವನ್ನೂ ಆತ ಪಡೆಯುತ್ತಿದ್ದನಂತೆ.

ಕ್ಷುಲ್ಲಕ ಕಾರಣಕ್ಕೆ ಬ್ಯಾಂಕಿಂಗ್ ಉದ್ಯೋಗ ತೊರೆದಿದ್ದ
ಆದರೆ ಎಸಿ ಯಿಂದ ಆರೋಗ್ಯಕ್ಕೆ ಸಮಸ್ಯೆ ಆಗುತ್ತಿದೆ ಎಂದು ಕಚೇರಿ ಒಳಗೆ ಕೂತು ಮಾಡುವ ಕೆಲಸಗಳು ಬೇಡವೆಂದು ನಿರ್ಧರಿಸಿ ಹಣಕಾಸು, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕೆಲಸ ಮಾಡುವುದು ಬೇಡವೆಂದು ನಿರ್ಧರಿಸಿದ್ದಾನೆ.

ಪ್ರತಿಷ್ಠಿತ ಆಟೋಮೊಬೈಲ್ ಸಂಸ್ಥೆಗಳಲ್ಲಿ ಕೆಲಸ
ನಂತರ ತನ್ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ಶಿಕ್ಷಣ ಆಧರಿಸಿ ಕೆಲಸಗಳನ್ನು ಹುಡುಕಲು ಆರಂಭಿಸಿದ ಆದಿತ್ಯ ರಾವ್, ಪೀಣ್ಯದಲ್ಲಿರುವ ಕಾಮಧೇನು ಆಟೋ ಸಿಎನ್ಸಿ ಎಂಬ ಆಟೋಮೊಬೈಲ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ್ದಾನೆ. ನಂತರ ಬಿಡದಿಯಲ್ಲಿರುವ ಪ್ರತಿಷ್ಠಿತ ಟೊಯೋಟಾ ಸಂಸ್ಥೆಗೆ ಸಂದರ್ಶನ ನೀಡಿ ಆಯ್ಕೆಯಾಗಿದ್ದಾನೆ. ಆದರೆ ಅಲ್ಲಿ ತನ್ನ ಉದ್ಯೋಗಾನುನುಭವದ ಬಗ್ಗೆ ಸುಳ್ಳು ದಾಖಲಾತಿ ನೀಡಿದ್ದಾನೆ. ಅದು ಎಲ್ಲಿ ಸಂಸ್ಥೆಗೆ ಗೊತ್ತಾಗಿಬಿಡುತ್ತದೆಯೋ ಎಂದು ಹೆದರಿ ಎರಡೇ ತಿಂಗಳಲ್ಲಿ ಕೆಲಸ ಬಿಟ್ಟಿದ್ದಾನೆ. ನಂತರ ಸ್ನೋ ಸೆನ್ಸ್, ಎಲ್ ಡಿಸೈನ್ ಸೇರಿ ಇನ್ನೂ ಕೆಲವು ಆಟೋಮೊಬೈಲ್ ಕಂಪೆನಿಗಳಲ್ಲಿ ಕೆಲಸ ಮಾಡಿದ್ದಾನೆ.

ಹಲವು ಕಡೆ ಸೆಕ್ಯುರಿಟಿ ಗಾರ್ಡ್ ಉದ್ಯೋಗ
ನಂತರ ವೈಟ್ ಕಾಲರ್ ಉದ್ಯೋಗಗಳ ಸಹವಾಸವೇ ಬೇಡವೆಂದು ಹೆಚ್ಚೇನೂ ಒತ್ತಡದ ಕೆಲಸವಲ್ಲದ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಸೇರಿಕೊಂಡಿದ್ದಾನೆ. 2012-13 ರಲ್ಲಿ ಆಳ್ವಾಸ್ ಕಾಲೇಜನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಉದ್ಯೋಗಕ್ಕೆ ಸೇರಿದ್ದಾನೆ ನಂತರ ಧರ್ಮಸ್ಥಳ ಉಜಿರಿಯೆ ಎಸ್ಡಿಎಂ ಕಾಲೇಜು, ಎಂಐಟಿ ಮೂಡಬಿದಿರಿ ಕಾಲೇಜು ಸೇರಿ ಅದೇ ಭಾಗದ ಇನ್ನೂ ಕೆಲವು ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಉದ್ಯೋಗ ಮಾಡಿದ್ದಾನೆ.

ಊಟ-ವಸತಿ ಸಿಗುವ ಉದ್ಯೋಗ ಅರಸಲು ಪ್ರಾರಭ
ನಂತರ ಆತನ ಯೋಚನಾ ಲಹರಿ ಬದಲಾಗಿ ವಸತಿ, ಊಟ ಎರಡೂ ಸಿಗುವ ಕೆಲಸಗಳನ್ನು ಮಾಡುವ ಮನಸ್ಸು ಮಾಡಿ ಆಶ್ಲೇಷಾ ಬಾರ್ನಲ್ಲಿ ಕೆಲಸ ಮಾಡಿದ್ದಾನೆ ನಂತರ ಆ ಕೆಲಸವನ್ನೂ ತೊರೆದು ಅಲ್ಲಿಂದ ಬೆಂಗಳೂರಿಗೆ ವಾಪಸ್ಸು ಬಂದಿದ್ದಾನೆ.

ಪ್ರತಿಷ್ಠಿತ ಹೋಟೆಲ್ಗಳಲ್ಲಿ ಉದ್ಯೋಗ
ಬೆಂಗಳೂರಿನ ವೈಟ್ಫೀಲ್ಡ್ ನಲ್ಲಿ ಕೃಷ್ಣ ಗ್ರ್ಯಾಂಡ್, ನಂತರ ಅಕ್ಷಯ ಗ್ರಾಂಡ್, ಗೋಕುಲ ಗ್ರಾಂಡ್, ಎಂಟಿಆರ್ ಹೋಟೆಲ್, ಡಾಮಿನೋಜ್ ಪಿಜ್ಜಾ ನಲ್ಲಿ ಕೆಲಸ ಮಾಡಿದ್ದಾನೆ. ಇವುಗಳ ಜೊತೆ ಇನ್ನೂ ಕೆಲವು ಹೋಟೆಲ್ಗಳಲ್ಲಿ ಕೆಲಸ ಮಾಡಿದ್ದಾನೆ.

ಬೆಂಗಳೂರು ಅಂತರರಾಷ್ಟ್ರೀಯ ವಿ.ನಿಲ್ದಾಣದಲ್ಲಿ ಕೆಲಸಕ್ಕೆ ಅರ್ಜಿಸ
ನಂತರ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ ಉದ್ಯೋಗಕ್ಕೆ ಅರ್ಜಿ ಹಾಕಿದ್ದಾನೆ. ಆದರೆ ಇಲ್ಲಿ ಉದ್ಯೋಗ ದೊರೆತಿಲ್ಲ. ಒಂದು ವರ್ಷ ಜೈಲಿನಲ್ಲಿದ್ದು ಹೊರಗೆ ಬಂದು ಮತ್ತೆ ಹೋಟೆಲ್ ಬಾರ್ ಉದ್ಯೋಗದತ್ತ ಮುಖ ಮಾಡಿ ಮಂಗಳೂರಿನ ಕುಡ್ಲ ಬಾರ್ ಆಂಡ್ ರೆಸ್ಟೋರೆಂಟ್ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ನಂತರ ಇಲ್ಲಿಯೂ ಕೆಲಸ ಬಿಟ್ಟು ಕಾರ್ಕಳಕ್ಕೆ ಹೋಗಿ ಅಲ್ಲಿ ಕಿಂಗ್ಸ್ ಕೋರ್ಟ್ ಹೋಟೆಲ್ ಗೆ ಸೇರಿಕೊಳ್ಳುತ್ತಾನೆ. ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಾಂಬ್ ಇಡಲು ಕಾರ್ಕಳದಿಂದಲೇ ಆತ ಬಂದಿದ್ದ.












Click it and Unblock the Notifications