ದಕ್ಷಿಣ ಕನ್ನಡದ 8 ಕ್ಷೇತ್ರದಲ್ಲೂ ಬಿಜೆಪಿ ಜಯಭೇರಿ: ನಳಿನ್ ಕುಮಾರ್ ಕಟೀಲ್
ಮಂಗಳೂರು, ಮೇ 03: ಸ್ಮಾರ್ಟ್ ಸಿಟಿ ಯೋಜನೆಗೆ ಮಂಗಳೂರು ಆಯ್ಕೆಯಾದರೂ ನಿಧಾನಗತಿಯ ಕಾಮಗಾರಿ ಮಾಡುವ ಮೂಲಕ ಕಾಂಗ್ರೆಸ್ ಅಸೂಯೆಯ ರಾಜಕಾರಣ ಮಾಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಮಾರ್ಟ್ ಸಿಟಿಯ ಯಾವುದೇ ಸಭೆಗಳಿಗೆ ಸಂಸದನಾದ ನನ್ನನ್ನು ಅಹ್ವಾನಿಸಿಲ್ಲ. ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನವಾದರೆ ಕೇಂದ್ರ ಸರ್ಕಾರಕ್ಕೆ ಪ್ಲಸ್ ಆಗುವ ಸಾಧ್ಯತೆಯಿದೆ. ಈ ಕಾರಣಕ್ಕೆ ಕಾಂಗ್ರೆಸ್ ಅಸೂಯೆಯಿಂದ ನಿಧಾನಗತಿ ಕಾರ್ಯ ಮಾಡಿದೆ ಎಂದು ಅವರು ಆರೋಪಿಸಿದರು.
ನಳಿನ್ ಗೆ ಬಿಜೆಪಿ ಕಾರ್ಯಕರ್ತರೇ ವಿಶ್ರಾಂತಿ ನೀಡಲಿದ್ದಾರೆ: ರಮಾನಾಥ್ ರೈ
ಮಂಗಳೂರು ನಗರದ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ ಬಂದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಲ್ಲ ಎಂದು ದೂರಿದ ಅವರು, ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಮಂಗಳೂರು ಅಭಿವೃದ್ದಿಗೆ 200 ಕೋಟಿ ರೂಪಾಯಿಯನ್ನು ನೀಡಿದ್ದರು. ಆದರೆ ಕಾಂಗ್ರೆಸ್ ಸರಕಾರ ನೀಡಿದ್ದು ಕೇವಲ 58 ಕೋಟಿ ರೂಪಾಯಿ ಎಂದು ಕಿಡಿಕಾರಿದರು.
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ . ಲೋಬೊ ಕೇಂದ್ರ ಸರಕಾರ ನೀಡಿದ ಅನುದಾನದಿಂದ ನೆರವೇರಿಸಿದ ಅಭಿವೃದ್ಧಿಕಾರ್ಯವನ್ನು ತನ್ನ ಸಾಧನೆ ಎಂದು ಪ್ರಚಾರ ಪಡಿಸುತ್ತಿದ್ದಾರೆ. ಈಗಾಗಲೇ ನಡೆದ ಅಭಿವೃದ್ಧಿ ಕಾಮಗಾರಿಯ ಟೇಪ್ ಕತ್ತರಿಸಿ ತನ್ನ ಸಾಧನೆ ಎಂದು ಬೀಗುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಪಾಲೇಮಾರ್ ಗೆ ಟಿಕೆಟ್ ಕೈ ತಪ್ಪುವ ಹಿಂದೆ ನನ್ನ ಕೈವಾಡವಿಲ್ಲ: ನಳಿನ್
ಇನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರ ಪತ್ನಿ ಗಂಡನ ಪರ ಚುನಾವಣಾ ಪ್ರಚಾರ ನಡೆಸುವ ಬಗ್ಗೆ ನಟ ಪ್ರಕಾಶ್ ರೈ ಟೀಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಕಾಶ್ ರೈ ಬಿಜೆಪಿ ವಿಚಾರದಲ್ಲಿ ಮೂಗು ತೂರಿಸುವ ಅಗತ್ಯ ಇಲ್ಲ. ವಿಚಾರವಾದಿಯಂತೆ ಪೋಸ್ ನೀಡುತ್ತಿರುವ ರೈ ಮೊದಲು ಹಿಂದೂ ಧರ್ಮವನ್ನು ಅವಹೇಳನ ಮಾಡುವುದನ್ನು ನಿಲ್ಲಿಸಲಿ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದೆ . ಮೇ 5 ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ಪ್ರಚಾರ ಸಭೆ ನಡೆಸುವ ಮೂಲಕ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವುದಕ್ಕೆ ವಾತಾವರಣ ಪೂರಕವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.