ನಿಷೇಧಾಜ್ಞೆ ನಡುವೆಯೂ 'ಮಂಗಳೂರು ಚಲೋ' ಯಶಸ್ವಿ
ಮಂಗಳೂರು, ಸೆಪ್ಟೆಂಬರ್ 07 : ಪೊಲೀಸ್ ಅನುಮತಿಯ ನಿರಾಕರಣೆ ನಡುವೆಯೂ ಬಿಜೆಪಿ 'ಮಂಗಳೂರು ಚಲೋ' ಯಶಸ್ವಿಯಾಗಿ ನಡೆಸುವ ಮೂಲಕ ರಾಜ್ಯ ಸರಕಾರಕ್ಕೆ ಸೆಡ್ಡು ಹೊಡೆದರು.
ಇಂದು (ಸೆ.07) ಬಿಜೆಪಿ ಯುವಮೋರ್ಚಾ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ 'ಮಂಗಳೂರು ಚಲೋ' ಬೈಕ್ ಜಾಥಾ ಕಾರ್ಯಕ್ರಮ ಪೊಲೀಸರ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ನೂಕಾಟ-ತಳ್ಳಾಟಕ್ಕೂ ವೇದಿಕೆಯಾಯಿತು.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 35(3) ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಬೈಕ್ ಜಾಥಾ ಹಾಗೂ ಪಾದಯಾತ್ರೆ ಪ್ರತಿಭಟನಾ ಸಭೆ ಮತ್ತು ಪಾದಯಾತ್ರೆ ನಡೆಸಿವ ಮೂಲಕ ರಾಜ್ಯ ಸರಕಾರಕ್ಕೆ ತಿರುಗೇಟು ನೀಡಿತು..
ರಾಜ್ಯದಲ್ಲಿ ಈ ವರೆಗೆ ನಡೆದಿರುವ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಬೇಕು , ಪಿಎಫ್ಐ ಸಂಘಟನೆಯನ್ನು ನಿಷೇಧಿಸಬೇಕು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ರಾಜೀನಾಮೆ ಈ ಮೂರು ಬೇಡಿಕೆಗೆ ಒತ್ತಾಯಿಸಿ ಬಿಜೆಪಿ ಒತ್ತಾಯಿಸಿತು.

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನ
ಪ್ರತಿಭಟನ ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ಪೋಲೀಸರು ಬಂಧಿಸಿದ ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್, ಸುನಿಲ್ ಕುಮಾರ್ ಸೇರಿದಂತೆ ಹಲವು ಕಾರ್ಯಕರ್ತರು ಬೈಕ್ ಜಾಥಾ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ಯಡಿಯೂರಪ್ಪ, ಸಂಸದೆ ಶೋಭಾಕರಂದ್ಲಜೆ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ತಡೆದು ಬಂಧಿಸಿದರು.

ಪೊಲೀಸರ-ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಕಾರ್ಯಕರ್ತರನ್ನು ಪೊಲೀಸರು ಬಂಧಿಸುವ ಸಂದರ್ಭದಲ್ಲಿ ಪೋಲೀಸನೋರ್ವ ಕಾರ್ಯಕರ್ತನ ತಲೆಗೆ ಲಾಠಿಯಿಂದ ಹೊಡೆದ ಪರಿಣಾಮ ಕಾರ್ಯಕರ್ತನ ತಲೆಗೆ ಗಾಯವಾಗಿದ್ದು ಇದರಿಂದ ಕೆರಳಿದ ಪ್ರತಿಭಟನಾನಿರತರು ಪೋಲೀಸರ ವಿರುದ್ಧ ತಿರುಗಿ ಬಿದ್ದಿದ್ದರು. ಈ ಸಂದರ್ಭದಲ್ಲಿ ಪೊಲೀಸರ ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ನೂಕಾಟ-ತಳ್ಳಾಟ ನಡೆಯಿತು.

ಪೊಲೀಸರಿಗೆ ತರಾಟೆ
ಬಳಿಕ ಮಧ್ಯೆ ಪ್ರವೇಶಿಸಿದ ಹಿರಿಯ ಪೋಲೀಸ್ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಬಿಜೆಪಿ ಮಹಿಳಾ ಕಾರ್ಯಕರ್ತರನ್ನು ಎಳೆದಾಡಿದ ಮಹಿಳಾ ಪೋಲೀಸರನ್ನೂ ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.

ಇನ್ನಷ್ಟು ಪ್ರತಿಭಟನೆ ನಡೆಸುವ ಎಚ್ಚರಿಕೆ
ಪ್ರತಿಭಟನೆ ಇಂದಿಗೆ ಮುಗಿಯದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಬಿಜೆಪಿ ನೀಡಿದೆ.












Click it and Unblock the Notifications