ಶಬರಿಮಲೆ ಸಂರಕ್ಷಣಾ ರಥಕ್ಕೆ ಕೇರಳದಲ್ಲಿ ಚಾಲನೆ ನೀಡಿದ ಯಡಿಯೂರಪ್ಪ
ಮಂಗಳೂರು, ನವೇಂಬರ್ 08: ಶಬರಿಮಲೆ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ವಿಭಿನ್ನ ನಿಲುವು ಹೊಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನ ಎರಡು ಪ್ರತ್ಯೇಕ ಯಾತ್ರೆ ಶಬರಿಮಲೆ ಅಯ್ಯಪ್ಪ ಕ್ಷೇತ್ರ ರಕ್ಷಣೆ ಉದ್ದೇಶ ಇರಿಸಿಕೊಂಡು ಕೇರಳದ ಕಾಸರಗೋಡಿನಿಂದ ಇಂದು ಹೊರಟಿದೆ.
ಬಿಜೆಪಿ ನೇತೃತ್ವದ ಯಾತ್ರೆಗೆ ಕಾಸರಗೋಡಿನ ಮದೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದ ವಠಾರದಿಂದ ಚಾಲನೆ ನೀಡಲಾಗಿದೆ. ಶಬರಿಮಲೆ ದೇಗುಲವನ್ನು ಸಂರಕ್ಷಿಸಬೇಕು, ರಾಜ್ಯ ಸರಕಾರ ಅಯ್ಯಪ್ಪ ವ್ರತಧಾರಿಗಳನ್ನು ಸುಳ್ಳು ಮೊಕದ್ದಮೆಯಲ್ಲಿ ಸಿಲುಕಿಸುವ ಹುನ್ನಾರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಈ ಶಬರಿಮಲೆ ಸಂರಕ್ಷಣಾ ರಥಯಾತ್ರೆ ಗೆ ಮಧೂರಿನಲ್ಲಿ ಚಾಲನೆ ನೀಡಿದೆ.
ಕೇರಳ ರಾಜ್ಯಾಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೆ ಮತ್ತು ತುಷಾರ್ ವೆಳ್ಳಾಪಲ್ಲಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಈ ರಥಯಾತ್ರೆಗೆ ಮಧೂರು ಸಿದ್ದಿವಿನಾಯಕ ದೇವಸ್ಥಾನ ವಠಾರದಲ್ಲಿ ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.

ತೀರ್ಪು ಧಾರ್ಮಿಕ ಭಾವನೆ ಕೆರಳಿಸುವಂತಿದೆ
ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ಆದಿ ಶಂಕರಾಚಾರ್ಯ, ನಾರಾಯಣ ಗುರು ಜನಿಸಿದ ಪುಣ್ಯ ನೆಲ ಕೇರಳ. ಹಲವು ಮಹಾಮಹಿಮರು ಬೆಳಗಿದ ಸಮಾಜ ಕೇರಳದ್ದು. ಸುಪ್ರಿಂ ಕೋರ್ಟು ತೀರ್ಪು ಧಾರ್ಮಿಕ ಭಾವನೆಯನ್ನು ಕೆರಳಿಸುವಂತಿದ್ದರೂ, ರಾಜ್ಯದಲ್ಲಿ ಅದನ್ನು ಅಳವಡಿಸಲೇಬೇಕೆಂಬ ಕೇರಳ ಸರಕಾರದ ಕ್ರಮ ಅಕ್ಷಮ್ಯ ಅಪರಾಧವಾಗಿದೆ. ಭಕ್ತ ಜನರ ಭಾವನೆಗಳನ್ನು ಅರ್ಥೈಸದೆ ಶಬರಿಮಲೆ ಸ್ತ್ರೀ ಪ್ರವೇಶದ ನಿಯಮವನ್ನು ಅನುಸರಿಸಲು ಸಜ್ಜಾದ ಕೇರಳ ಸರಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಕೇರಳ ಸಿಎಂ ಜನರ ಭಾವನೆಗೆ ಬೆಲೆ ಕೊಡುತ್ತಿಲ್ಲ
ಕೇರಳ ಮುಖ್ಯಮಂತ್ರಿಗಳು ಜನರ ಭಾವನೆಗಳಿಗೆ ಬೆಲೆ ಕೊಡುತ್ತಿಲ್ಲ ಎಂದು ಕಿಡಿಕಾರಿದರು. ದೇವಸ್ಥಾನದ ವಿಚಾರದಲ್ಲಿ ಜನರ ಭಾವನಾತ್ಮಕ ವಿಷಯಗಳಿಗೆ ಸರಕಾರ ಬೆಲೆ ಕೊಡಬೇಕು. ಸುಪ್ರಿಂ ಕೋರ್ಟ್ ಆದೇಶದಕ್ಕೆ ನಮ್ಮ ನಿರೋಧವಿಲ್ಲ ಆದರೆ ನ್ಯಾಯಾಲಯದ ಆದೇಶವನ್ನುಕೇರಳದ ಶೇಕಡಾ 99 ಮಹಿಳೆಯರು ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸುತ್ತಿದ್ದಾರೆ. ದೇವಸ್ಥಾನದ ಪಾವಿತ್ರ್ಯವನ್ನು ಉಳಿಸಿಕೊಳ್ಳಬೇಕು ಎಂಬುದೇ ಈ ಸಂರಕ್ಷಣಾ ಯಾತ್ರೆಯ ಉದ್ಧೇಶ ಎಂದು ಅವರು ತಿಳಿಸಿದರು.

ಹಲವು ಜಿಲ್ಲೆಗಳಲ್ಲಿ ಸಂಚರಿಸಲಿದೆ ರಥ
ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯಸಭಾ ಸದಸ್ಯ ಪಿ.ಮುರಳೀಧರನ್ ಮೊದಲಾದ ಮುಖಂಡರು ಭಾಗವಹಿಸಿದ್ದರು. ಇಂದು ಚಾಲನೆ ನೀಡಿರುವ ಈ ರಥಯಾತ್ರೆ ಹಲವು ಜಿಲ್ಲೆಗಳಲ್ಲಿ ಪರ್ಯಟನೆ ನಡೆಸಿದ ಬಳಿಕ ನವೆಂಬರ್ 13ರಂದು ಪತ್ತನಂತಿಟ್ಟ ಜಿಲ್ಲೆಯಲ್ಲಿ ಬೃಹತ್ ರ್ಯಾಲಿ ಯೊಂದಿಗೆ ಸಮಾಪ್ತಿ ಹೊಂದಲಿದೆ.

ಹಲವು ಬಿಜೆಪಿ ಮುಖಂಡರು ಭಾಗಿ
ಕಾಂಗ್ರೆಸ್ ಮುಖಂಡ ಕೆ. ಸುಧಾಕರನ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ವಿಶ್ವಾಸ ಸಂರಕ್ಷಣಾ ಯಾತ್ರೆ ಇಂದು ಆರಂಭಗೊಳ್ಳಲಿದೆ. ಕಾಂಗ್ರೆಸ್ನ ವಿಶ್ವಾಸ ಸಂರಕ್ಷಣಾ ಯಾತ್ರೆಗೆ ಕಾಂಗ್ರೆಸ್ನ ಮಾಜಿ ರಾಜ್ಯ ಅಧ್ಯಕ್ಷ ಎಂ.ಎಂ. ಹಸ್ಸನ್ ಚಾಲನೆ ನೀಡಲಿದ್ದಾರೆ. ಕಾಂಗ್ರೆಸ್ ನೇತೃತ್ವದಲ್ಲಿ ಕೇರಳ ರಾಜ್ಯದ ವಿವಿಧೆಡೆಗಳಿಂದ ನಾಳೆ ಒಟ್ಟು ಐದು ಯಾತ್ರೆಗಳು ಹೊರಡಲಿವೆ. ಇದರಂತೆ ತಿರುವನಂತಪುರದಿಂದ ಕೆ. ಮುರಳೀಧರನ್, ಪಾಲ್ಘಾಟ್ನಿಂದ ಶಾನಿಮೋಳ್ ಉಸ್ಮಾನ್, ಆಲಪ್ಪುಳ ದಿಂದ ಸಂಸದ ಕೊಡಿಕುನ್ನಿಲ್ ಸುರೇಶ್ ಮತ್ತು ಕೋಟ್ಟಯಂನಿಂದ ತಿರುವಾಂ ಜೂರು ರಾಧಾಕೃಷ್ಣನ್ ನೇತೃತ್ವದಲ್ಲಿ ಬೇರೆ ನಾಲ್ಕು ಯಾತ್ರೆ ಪ್ರಯಾಣ ಆರಂಭಿಸಲಿದೆ. ಈ ಐದು ಯಾತ್ರೆಗಳು ನವೆಂಬರ್ 15ರಂದು ಪತ್ತನಂತಿಟ್ಟದಲ್ಲಿ ಸಮಾಪ್ತಿ ಹೊಂದಲಿದೆ. ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ನ ಹಿರಿಯ ಮುಖಂಡ ಎ.ಕೆ. ಆಂಟನಿ ಭಾಗವಹಿಸಲಿದ್ದಾರೆ.












Click it and Unblock the Notifications