ಕುಕ್ಕೆ ಸುಬ್ರಹ್ಮಣ್ಯದ ಆದಾಯದಲ್ಲಿ ಗೋಲ್ಮಾಲ್, ಸಿಎಂಗೆ ದೂರು
ಸುಬ್ರಹ್ಮಣ್ಯ, ಏಪ್ರಿಲ್ 23: ರಾಜ್ಯದ ನಂಬರ್ ಒನ್ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮತ್ತೆ ಅಕ್ರಮದ ಗಂಭೀರ ಆರೋಪ ಕೇಳಿಬಂದಿದೆ.
ಕುಕ್ಕೆ ಸುಬ್ರಹ್ಮಣ್ಯ ದ ಆದಾಯದ ಲೆಕ್ಕ ಪರಿಶೋಧನೆಯೇ ನಡೆದಿಲ್ಲ.ಕಣ್ಣಳತೆಗೇ ಆದಾಯ ತೋರಿಸಿ ದೇವಸ್ಥಾನದ ಆಡಳಿತ ಮಂಡಳಿ ಲೆಕ್ಕ ಕೊಡುತ್ತಿದೆ. ಕಳೆದ 5 ವರ್ಷದಿಂದ ದೇವಳದ ಲೆಕ್ಕ ಪರಿಶೋಧನೆ ನಡೆಯಲಿಲ್ಲ.
ವಾರ್ಷಿಕ ಆದಾಯದಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎಂದು ದೇವಸ್ಥಾನ ದ ಆಡಳಿತ ಮಂಡಳಿಯ ವಿರುದ್ಧ ವಕೀಲರೊಬ್ಬರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ದೂರು ನೀಡಿರುವ ಬೆಂಗಳೂರು ಮೂಲದ ವಕೀಲ ಶ್ರೀ ಹರಿ ಕುತ್ಸ, ದೇವಸ್ಥಾನದ ವಿರುದ್ಧದ ದೂರಿನಲ್ಲಿ ಪ್ರಮುಖ ಅಂಶಗಳ ಉಲ್ಲೇಖ ಮಾಡಿದ್ದಾರೆ.

5 ವರ್ಷಗಳಲ್ಲಿ 100 ಕೋಟಿಗೂ ಹೆಚ್ಚು ಹಣ ಸಂಗ್ರಹ
ಪ್ರತಿವರ್ಷ ಅಂದಾಜಿನ ಮಾಹಿತಿಯೇ ಕ್ಷೇತ್ರದ ಆಡಳಿತ ಮಂಡಳಿ ನೀಡುತ್ತಿದೆ. 5 ವರ್ಷಗಳಲ್ಲಿ 100 ಕೋಟಿಗೂ ಹೆಚ್ಚು ಹಣ ಸಂಗ್ರಹವಾದರೂ ಲೆಕ್ಕ ಪರಿಶೋಧನೆ ಆಗದಿರೋದು ಭಾರೀ ಅನುಮಾನಕ್ಕೆ ಎಡಮಾಡಿಕೊಟ್ಟಿದೆ.ಕ್ಷೇತ್ರ ದ ಆಡಳಿತ ಮಂಡಳಿ 60 ಕೋಟಿಗೂ ಅಧಿಕ ರೂಪಾಯಿ ಪೋಲು ಮಾಡಿದೆ.
ಕ್ಷೇತ್ರದ ಆಡಳಿತ ಮಂಡಳಿ ಧಾರ್ಮಿಕೇತರ ಚಟುವಟಿಕೆಗಳಿಗೆ ಹಣ ಪೋಲು ಮಾಡಿದೆ.ದೇಗುಲಕ್ಕೆ ಸಂಬಂಧಪಡದ ವ್ಯಕ್ಯಿಗಳು ದೇವಸ್ಥಾನದ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ.ಕ್ಷೇತ್ರಕ್ಕೆ ಹರಕೆ ರೂಪದಲ್ಲಿಬಂದ ಚಿನ್ನ, ಬೆಳ್ಳಿ ಆಭರಣಗಳ ಬಗ್ಗೆ ಸಮರ್ಪಕವಾದ ಮಾಹಿತಿಯೇ ದೇವಸ್ಥಾನದ ಬಳಿ ಇಲ್ಲ..

ರಿಜೆಕ್ಟ್ ಆದ ಚಿನ್ನಾಭರಣದ ಲೆಕ್ಕ ತೋರಿಸಿಲ್ಲ
ದೇವಳಕ್ಕೆ ಬಂದ ಚಿನ್ನಾಭರಣವನ್ನು ಕರಗಿಸಲಾಗುತ್ತದೆ. ಕರಗಿಸದ ವೇಳೆ ಬಂದ ಒಳ್ಳೆಯ ಚಿನ್ನದ ಲೆಕ್ಕ ಮಾತ್ರ ಕೊಡಲಾಗಿದೆ.ಕರಗಿಸಿದ ವೇಳೆ ರಿಜೆಕ್ಟ್ ಆದ ಚಿನ್ನಾಭರಣದ ಲೆಕ್ಕವನ್ನು ಎಲ್ಲಿಯೂ ತೋರಿಸಿಲ್ಲ.ಈ ಲೆಕ್ಕವೇ ಲಕ್ಷಾಂತರ ರೂಪಾಯಿ ರೂಪದಲ್ಲಿ ಇರಬೇಕಿದೆ.ಇನ್ನು ದೇವಸ್ಥಾನಕ್ಕೆ ಸಂಬಂಧಿಸಿದ ಅಂಗಡಿ ಬಾಡಿಗೆ,ಕಟ್ಟಡ ನಿರ್ವಹಣೆ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಪ್ರತಿವರ್ಷ ಹರಾಜು ಪ್ರಕ್ರಿಯೆ ಮಾಡಬೇಕು.
ಆದರೆ ಸುಬ್ರಹ್ಮಣ್ಯದಲ್ಲಿ ಈ ಪ್ರಕ್ರಿಯೆ ಯಾವುದೂ ನಡೆಯುತ್ತಿಲ್ಲ. ಹಲವು ವರ್ಷಗಳಿಂದ ಇದ್ದವರೇ ಈ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದಾರೆ. ಸಮರ್ಪಕವಾಗಿ ಬಾಡಿಗೆಯನ್ನೂ ಯಾರೂ ನೀಡುತ್ತಿಲ್ಲ ಅಂತಾ ವಕೀಲ ಶ್ರೀಹರಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ..ಕ್ಷೇತ್ರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆದಿದ್ದು,ಸರ್ಕಾರ ತನಿಖೆ ಮಾಡಬೇಕು ಅಂತಾ ಮುಖ್ಯಮಂತ್ರಿ ಗಳಿಗೆ ಕೊಟ್ಟ ದೂರಿನಲ್ಲಿ ಶ್ರೀ ಹರಿ ಕುತ್ಸ ಉಲ್ಲೇಖ ಮಾಡಿದ್ದಾರೆ.
ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್
ಇನ್ನು ವಕೀಲ ಶ್ರೀ ಹರಿ ನೀಡಿರುವ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ದೂರು ನೀಡಿರುವ ಬಗ್ಗೆ ಈಗಾಗಲೇ ಮಾಹಿತಿ ಬಂದಿದೆ. ಪರಿಶೀಲನೆ ಮಾಡುವಂತೆಯೇ ಈ ಹಿಂದೆಯೇ ಸೂಚಿಸಿದ್ದೇನೆ. ಲೆಕ್ಕ ಪರಿಶೋಧನೆ ಮಾಡಲು ಈ ಹಿಂದೆಯೇ ಕ್ಷೇತ್ರ ದ ಕಾರ್ಯನಿರ್ವಹಣಾ ಅಧಿಕಾರಿಗೆ ಸೂಚಿಸಿದ್ದೆ. ಲೆಕ್ಕ ಪರಿಶೋಧನೆ ಆದರೆ ಕ್ಷೇತ್ರದ ಅಭಿವೃದ್ಧಿ ಗೂ ಪೂರಕವಾಗುತ್ತದೆ ಅಂತಾ ಯತೀಶ್ ಉಳ್ಳಾಲ್ ಪ್ರತಿಕ್ರಿಯೆ ನೀಡಿದ್ದಾರೆ.
ವಾರ್ಷಿಕ ಆದಾಯವನ್ನು ಕೇವಲ ಅಂದಾಜಿಸಿ ಬಿಡುಗಡೆ ಮಾಡುತ್ತಿದ್ದ ಕ್ಷೇತ್ರದ ಆಡಳಿತ ಮಂಡಳಿ ವಿರುದ್ಧ ಅನುಮಾನ ಮೂಡಿದ್ದು,ಕಳೆದ 5 ವರ್ಷಗಳಲ್ಲಿ ಕೊಡುತ್ತಿದ್ದ ಲೆಕ್ಕ ಕೇವಲ ಅಂದಾಜಿನ ಲೆಕ್ಕಾಚಾರ ಮಾತ್ರ ಕೊಡುತ್ತಿದೆ.

ಸರ್ಕಾರ ಸಮರ್ಪಕವಾದ ತನಿಖೆ ನಡೆಸಬೇಕೆಂಬ ಆಗ್ರಹ
ಈ ವರ್ಷ 68 ಕೋಟಿ ರೂಪಾಯಿ ಆದಾಯ ಅಂತಾ ಹೇಳಿದ್ದ ದೇವಳದ ಆಡಳಿತ ಮಂಡಳಿ ಕಳೆದ ಐದು ವರ್ಷಗಳಲ್ಲೂ ಅಂದಾಜಿನ ಲೆಕ್ಕವನ್ನು ಮಾತ್ರ ನೀಡಿತ್ತಾ ಎಂಬ ಅನುಮಾನ ಕಾಡಲಾರಂಭಿಸಿದೆ.
ಆದಾಯದಲ್ಲಿ ರಾಜ್ಯದಲ್ಲೇ ನಂಬರ್ ಒನ್ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಗೋಲ್ಮಾಲ್ ಆಗಿರುವ ಶಂಕೆ ವ್ಯಕ್ತವಾಗಿದ್ದು,ಸರ್ಕಾರ ಸಮರ್ಪಕವಾದ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬಂದಿದೆ.












Click it and Unblock the Notifications