ಬೆಂಗಳೂರಲ್ಲಿ ಶೀಘ್ರ ಬೈಕ್, ಏರ್ ಆ್ಯಂಬುಲೆನ್ಸ್ ಸೇವೆ
ಮಂಗಳೂರು, ಜ. 1: ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಅಂಗಾಂಗ ಸ್ಥಳಾಂತರಿಸಲು ರಸ್ತೆಗಳಲ್ಲಿ ಶೂನ್ಯ ಟ್ರಾಫಿಕ್ ವ್ಯವಸ್ಥೆ ಮಾಡಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ, ಶೂನ್ಯ ಟ್ರಾಫಿಕ್ ವ್ಯವಸ್ಥೆ ಜಾರಿ ಮಾಡಿದ್ದಾಗ ಸಾಕಷ್ಟು ಪ್ರಯಾಣಿಕರು ಸಂಚಾರ ಸ್ಥಗಿತಗೊಳಿಸಿ ತೊಂದರೆ ಎದುರಿಸಬೇಕಾಯಿತು.
ಆದ್ದರಿಂದ ಕರ್ನಾಟಕ ಸರ್ಕಾರವು ಹೆಲಿಕಾಪ್ಟರ್ ಉಪಯೋಗಿಸಿ ಏರ್ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲು ಯೋಚಿಸಿತ್ತು. ಅದರಲ್ಲಿ ಚಿಕ್ಕ ಆಸ್ಪತ್ರೆಯಲ್ಲಿರುವಂತಹ ಸೌಲಭ್ಯಗಳನ್ನು ಅಳವಡಿಸುವುದು ಹಾಗೂ ಅಪಘಾತ, ಅಂಗಾಂಗ ಸಾಗಿಸುವ ಸಂದರ್ಭ ಇದನ್ನು ಉಪಯೋಗಿಸಲು ರಾಜ್ಯ ಸರ್ಕಾರದ ಉದ್ದೇಶವಾಗಿತ್ತು. [ಕಾಲು ಕಳೆದುಕೊಂಡರೂ ಆಂಬುಲೆನ್ಸ್ ಗೆ ಕರೆ ಮಾಡಿದ]
"ಕರ್ನಾಟಕದಲ್ಲಿ ಏರ್ ಆ್ಯಂಬುಲೆನ್ಸ್ ಸೇವೆ ಒದಗಿಸಲು ಕರ್ನಾಟಕ ಮೂಲದ ಅನಿವಾಸಿ ಭಾರತೀಯರು ನಡೆಸುತ್ತಿರುವ ಮೂರು ಸಂಸ್ಥೆಗಳು ಆಸಕ್ತಿ ತೋರಿಸಿವೆ" ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಮಂಗಳೂರಿನಲ್ಲಿ ತಿಳಿಸಿದ್ದಾರೆ.

"ಮೊದಲು ಮೂರು ತಿಂಗಳ ಪರೀಕ್ಷಾರ್ಥ ಸೇವೆ ಆರಂಭಿಸಲಾಗುವುದು. ಈ ಸೇವೆಗೆ ಅಗತ್ಯ ಬೀಳುವ ಹಣ ಹಾಗೂ ಇತರ ಅಂಶಗಳನ್ನು ಪರಿಗಣಿಸಿ ರಾಜ್ಯಾದ್ಯಂತ ವಿಸ್ತರಿಸಲು ಚಿಂತಿಸಲಾಗುವುದು. ಇದೇ ವರ್ಷ ನವೆಂಬರ್ ತಿಂಗಳ ಅಂತ್ಯದೊಳಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಖಾದರ್ ತಿಳಿಸಿದ್ದಾರೆ. [ಬೆಂಗಳೂರಿಗೆ ಬರಲಿದೆ ಬೈಕ್ ಆ್ಯಂಬುಲೆನ್ಸ್]
ಬೈಕ್ ಆ್ಯಂಬುಲೆನ್ಸ್ : "ಇದೇ ವರ್ಷ ಜನವರಿ ಅಂತ್ಯದೊಳಗೆ ಬೆಂಗಳೂರಿನಲ್ಲಿ ಬೈಕ್ ಆ್ಯಂಬುಲೆನ್ಸ್ಗಳು ಕಾರ್ಯ ಆರಂಭಿಸಲಿವೆ. 30 ಬೈಕ್ ಆ್ಯಂಬುಲೆನ್ಸ್ಗಳಲ್ಲಿ ಮೊದಲ ಹಂತದಲ್ಲಿ 10 ಕಾರ್ಯ ಆರಂಭಿಸಲಿವೆ. ಇವುಗಳಿಂದ ಉಂಟಾಗುವ ಪ್ರಯೋಜನ ನೋಡಿಕೊಂಡು ನಂತರ ಮೈಸೂರು, ಮಂಗಳೂರು, ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿಯೂ ಆರಂಭಿಸಲಾಗುವುದು" ಎಂದು ಖಾದರ್ ಹೇಳಿದರು.
ಎಚ್ಐವಿ ಬಾಧಿತರ ಚಿಕಿತ್ಸೆಗಾಗಿ ಮೂರು ತಿಂಗಳುಗಳ ಅವಧಿಗೆ ಔಷಧಿಗಳನ್ನು ಸಂಗ್ರಹಿಸಿಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ 5 ಕೋಟಿ ರೂ.ಗಳನ್ನು ತೆಗೆದಿರಿಸಿದೆ ಎಂದು ಖಾದರ್ ಹೇಳಿದರು.












Click it and Unblock the Notifications