ಅನಾರೋಗ್ಯ ಪೀಡಿತನನ್ನು ತನ್ನ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ ಬೆಳ್ತಂಗಡಿ ತಹಶೀಲ್ದಾರ್
ಮಂಗಳೂರು, ಆಗಸ್ಟ್ 23: ಪ್ರವಾಹಪೀಡಿತ ಪ್ರದೇಶಕ್ಕೆ ತಲೆ ಮೇಲೆ ಸಾಮಗ್ರಿ ಹೊತ್ತು ಸಾಗಿಸಿದ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಪ್ರವಾಹಪೀಡಿತ ಪ್ರದೇಶದಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ವ್ಯಕ್ತಿಯೊಬ್ಬರನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇತ್ತೀಚೆಗೆ ಸುರಿದ ಭಾರೀ ಮಳೆಗೆ ಸೇತುವೆ ಕೊಚ್ಚಿಹೋಗಿರುವ ಬಾಂಜಾರು ಮಲೆಯ ಮಲೆಕುಡಿಯರ ಕಾಲನಿಯಲ್ಲಿ ಐತಪ್ಪ ಎಂಬುವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೆ ಐತಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಲು ಯಾವುದೇ ವಾಹನ ವ್ಯವಸ್ಥೆ ಇಲ್ಲದೆ ಐತಪ್ಪ ಕುಟುಂಬಸ್ಥರು ಪರದಾಡಿದರು. ಈ ವೇಳೆಗೆ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರನ್ನು ನೆನಪಿಸಿಕೊಂಡ ಸ್ಥಳೀಯರು ಅವರಿಗೆ ಕರೆ ಮಾಡಿದ್ದಾರೆ.
ಕರೆಗೆ ಕೂಡಲೇ ಸ್ಪಂದಿಸಿದ ಅವರು, ಅಪಾಯಕಾರಿಯಾಗಿರುವ ಚಾರ್ಮಾಡಿ ಘಾಟಿಯ ಮೂಲಕ ಆಗಮಿಸಿ ಕುಸಿದ ಸೇತುವೆಯ ಬಳಿಗೆ ಬಂದು ಅನಾರೋಗ್ಯ ಪೀಡಿತ ಐತಪ್ಪ ಅವರನ್ನು ತಮ್ಮದೇ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.
Recommended Video

ಸೇತುವೆ ಕುಸಿಯುವುದರೊಂದಿಗೆ ಚಾರ್ಮಾಡಿ ಘಾಟಿಯೂ ಅಪಾಯಕಾರಿ ಸ್ಥಿತಿಯಲ್ಲಿ ಇರುವುದರಿಂದ ವಾಹನ ಚಾಲಕರು ಇಲ್ಲಿಗೆ ಬರಲು ನಿರಾಕರಿಸಿದ್ದಾರೆ. ಇಂದು ಬಾಂಜಾರು ಮಲೆಗೆ ಪರ್ಯಾಯ ರಸ್ತೆಯನ್ನು ಪರಿಶೀಲಿಸಲು ತಹಶೀಲ್ದಾರರು ನೆರಿಯ ಮಾರ್ಗವಾಗಿ ತೆರಳಿದ್ದರು.
ರಸ್ತೆಯನ್ನು ಪರಿಶೀಲಿಸಿದ ತಹಶೀಲ್ದಾರರು ಕೂಡಲೇ ಕಾಮಗಾರಿಯನ್ನು ಆರಂಭಿಸುವಂತೆ ಸೂಚಿಸಿದ್ದಾರೆ. ಇದಾದ ಬಳಿಕ ಹಿಂತಿರುಗುತ್ತಿದ್ದ ವೇಳೆ ಐತಪ್ಪ ಮಲೆಕುಡಿಯ ಅವರು ತೀವ್ರ ಜ್ವರ ಹಾಗೂ ಉಬ್ಬಸದಿಂದ ಬಳಲುತ್ತಿರುವ ವಿಚಾರ ತಿಳಿದು ಅಲ್ಲಿಗೆ ಹೋಗಿ ಅವರನ್ನು ತಮ್ಮ ವಾಹನದಲ್ಲಿ ರಾತ್ರಿಯ ವೇಳೆ ಕರೆತಂದಿದ್ದಾರೆ.












Click it and Unblock the Notifications