ಮೋದಿ ಸಭೆಯಲ್ಲಿ ಪಾಲ್ಗೊಂಡ ಬೆಳ್ತಂಗಡಿ ಮಸೀದಿ VP ವಜಾ
ಬೆಳ್ತಂಗಡಿ, ಮಾರ್ಚ್6- ತಾಲೂಕಿನ ಮದ್ದಡ್ಕ ಮಸೀದಿಯ ಆಡಳಿತ ಮಂಡಳಿಯು ಎಂ. ಅಬ್ಬೋನು ಮದ್ದಡ್ಕ ಅವರನ್ನು ಮಸೀದಿಯ ಉಪಾಧ್ಯಕ್ಷ ಸ್ಥಾನದಿಂದ ವಜಾ ಮಾಡಿದೆ. ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿದ್ದ ನೂರುಲ್ ಹುದಾ ಜುಲ್ಲಾ ಮಸೀದಿಯ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಗಮನಾರ್ಹವೆಂದರೆ, ಕಳೆದ ತಿಂಗಳು (ಫೆ. 18) ಮಂಗಳೂರಿನಲ್ಲಿ ನಡೆದಿದ್ದ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಭೆಯಲ್ಲಿ ಇವರೆಲ್ಲಾ ಪಾಲ್ಗೊಂಡಿದ್ದರು. ಇದರಿಂದ ಅಸಮಾಧಾನಗೊಂಡ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಮತ್ತೆರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೋದಿ ಸಭೆಗೆ ಬೆಂಬಲಿಗರನ್ನು ಕರೆದೊಯ್ದರೆಂಬ ಆರೋಪದ ಮೇಲೆ ಉಸ್ಮಾನ್ ಮತ್ತು ರಫೀಖ್ ಎಂಬಿಬ್ಬರ ಮೇಲೆ ಮುಸ್ಲಿಂ ಯುವಕರ ಗುಂಪುಗಳು ಹಲ್ಲೆ ನಡೆಸಿವೆ.

ಅಬ್ಬೋನು ಮದ್ದಡ್ಕ ಅವರು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ಅಬ್ಬೋನು ಈ ಹಿಂದೆ ಮದ್ದಡ್ಕ ಮಸೀದಿಯ ಅಧ್ಯಕ್ಷರಾಗಿದ್ದರು. ಕುವೆಟ್ಟುವಿನ ಗ್ರಾಮ ಪಂಚಾಯಿತಿ ಸದಸ್ಯರೂ ಆಗಿದ್ದರು. ಆ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮದ್ದಡ್ಕ ಮಸೀದಿಗೆ ಸುಮಾರು 18 ಲಕ್ಷ ರೂ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 12.5 ಲಕ್ಷ ರೂ ಮತ್ತು ಡಿವಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ 5 ಲಕ್ಷ ರೂ ಅನುದಾನ ದೊರೆತಿತ್ತು. ಅದಾದನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10 ಲಕ್ಷ ರೂ ಅನುದಾನವನ್ನು ನೀಡಿದ್ದಾರೆ. ಅದರಲ್ಲಿ ಮೊದಲ ಹಂತದಲ್ಲಿ ಮಸೀದಿಗೆ 5 ಲಕ್ಷ ರೂ ಅನುದಾನವನ್ನು ಮೊನ್ನೆ ಮಂಗಳವಾರ ವಿತರಣೆಯಾಗಿದೆ.
ಅಬ್ಬೋನು ಮದ್ದಡ್ಕ ಅವರು 'ಭಾರತ ಗೆಲ್ಲಿಸಿ' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರ ಸುಳಿವು ಪಡೆದ ಸ್ಥಳೀಯ ಯುವಕರ ಗುಂಪೊಂದು ಅಬ್ಬೋನು ಅವರನ್ನು ವಿಚಾರಣೆಗೊಳಪಡಿಸುವಂತೆ ಆಗ್ರಹಿಸಿತ್ತು. ಐದು ವರ್ಷಗಳ ಕಾಲ ಅವರನ್ನು ಜಮಾಅತ್ ಸಮಿತಿಯಿಂದ ದೂರವಿಡುವಂತೆಯೂ ಒತ್ತಡ ಹೇರಿತ್ತು. ಅವರಿಗೆ ಮತ್ಯಾವುದೇ ಜವಾಬ್ದಾರಿಯನ್ನೂ ನೀಡಬಾರದು ಎಂದೂ ಯುವಕರು ಮನವಿ ಮಾಡಿದ್ದರು.
ತಕ್ಷಣ ಸಭೆ ಸೇರಿದ ಮದ್ದಡ್ಕ ಮಸೀದಿಯ ಆಡಳಿತ ಮಂಡಳಿಯು ಮುಂದಿನ ವರ್ಷ ಮಸೀದಿಯ ಸಾಮಾನ್ಯ ಸಭೆ ನಡೆಯಲಿದ್ದು, ಅಲ್ಲಿಯವರೆಗೂ ಅಬ್ಬೋನು ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಲು ನಿರ್ಣಯ ಕೈಗೊಂಡಿದೆ. ಆದರೆ ಐದು ವರ್ಷಗಳ ಕಾಲ ಅವರನ್ನು ಜಮಾಅತ್ ಸಮಿತಿಯಿಂದ ದೂರವಿಡುವ ಮನವಿಯನ್ನು ಪುರಸ್ಕರಿಸಿಲ್ಲ. ('ಧರ್ಮಕ್ಕಿಂತ ದೇಶ ದೊಡ್ಡದು,ದೇಶಕ್ಕಾಗಿ ಮತ ನೀಡಿ')
ಮತ್ತೊಂದು ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್ ಬಿ ಅಬೂಬಕ್ಕರ್ ಅವರ ಸಹೋದರರಾದ ಉಸ್ಮಾನ್ ಮತ್ತು ರಫೀಖ್ ಮೇಲೆ ಮಂಗಳವಾರ ಬೆಳಗ್ಗೆ ಹಲ್ಲೆ ಮಾಡಲಾಗಿದೆ. ಅಬೂಬಕ್ಕರ್ ಅವರ ಸಹೋದರರು ಮೋದಿ ಸಭೆಗೆ ಬೆಂಬಲಿಗರನ್ನು ಕರೆದೊಯ್ದಿದ್ದರು ಎಂದು ಹಲ್ಲೆಕೋರರು ಆಕ್ರೋಶಗೊಂಡಿದ್ದರು ಎನ್ನಲಾಗಿದೆ.
ಬೈಕಂಪಾಡಿಯ ಅಂಗರಗುಂಡಿ ಬಳಿ ಈ ಹಲ್ಲೆಗಳು ನಡೆದಿವೆ. ಈ ಸಂಬಂಧ ಪಣಂಬೂರು ಪೊಲೀಸ್ ಠಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಹಲ್ಲೆಗೀಡಾದ ರಫೀಖ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಹಲ್ಲೆಯ ಸಂಬಂಧ ಪೊಲೀಸರು ಇನ್ನೂ ಯಾರನ್ನೂ ಬಂಧಿಸಿಲ್ಲ.












Click it and Unblock the Notifications