62 ಲಕ್ಷ ರೂ.ಅಕ್ರಮ ನಗದು ಪತ್ತೆ ಪ್ರಕರಣ:ರಮಾನಾಥ್ ರೈಗೆ ಕಂಟಕವಾಗುವುದೇ?
ಮಂಗಳೂರು, ಮಾರ್ಚ್ 06: ಕಳೆದ ವಿಧಾನ ಸಭೆ ಚುನಾವಣೆ ವೇಳೆ 62 ಲಕ್ಷ ರೂಪಾಯಿ ಅಕ್ರಮ ನಗದು ಪತ್ತೆ ಪ್ರಕರಣ ಈಗ ಮಾಜಿ ಸಚಿವ ರಮಾನಾಥ್ ರೈ ಅವರಿಗೆ ಕಂಟಕವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ರಮಾನಾಥ ರೈ ಸೇರಿ ಆರು ಮಂದಿಯ ವಿರುದ್ಧ ಬಂಟ್ವಾಳ ಜೆಎಂಎಫ್ ಕೋರ್ಟ್ ಸೂಚನೆ ಮೇರೆಗೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
2018ನೇ ಸಾಲಿನ ವಿಧಾನ ಸಭಾ ಚುನಾವಣೆಗೆ ಮುಂಚಿತವಾಗಿ ಖಚಿತ ಮಾಹಿತಿ ಮೇರೆಗೆ ಆದಾಯ ತೆರಿಗೆ ಆಧಿಕಾರಿಗಳು ಸುಧಾಕರ ಶೆಟ್ಟಿ ಎಂಬುವವರ ಕಚೇರಿ ಮೇಲೆ ದಾಳಿ ನಡೆಸಿ 22 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದರು.
ಅಂತೆಯೇ ಬಂಟ್ವಾಳದ ಬಿ.ಸಿ. ರೋಡ್ನ ಶ್ರೀನಿವಾಸ್ ಲಾಡ್ಜ್ ಮೇಲೆ ದಾಳಿ ಮಾಡಿ ಡೆನ್ಸಿಲ್ ಹರ್ಮನ್ ಎಂಬಾತನಿಂದ 40 ಲಕ್ಷ ರೂಪಾಯಿ ನಗದು ಸೇರಿದಂತೆ ಒಟ್ಟು 62 ಲಕ್ಷ ರೂಪಾಯಿ ನಗದನ್ನು ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದಾಗ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ, ಸಾರ್ವಜನಿಕರಿಗೆ ಹಣವನ್ನು ಹಂಚುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆ ಕಾಂಟ್ರಾಕ್ಟರ್ ಸುಧಾಕರ ಶೆಟ್ಟಿ , ಉದಯ ಹೆಗ್ಡೆ, ಸುಧಾಕರ ಶೆಟ್ಟಿಯ ಸಿಬ್ಬಂದಿಗಳಾದ ವರುಣ್ ಹಾಗೂ ಪ್ರತೀಶ್, ಸರಕಾರಿ ಉದ್ಯೋಗಿ ಡೆನ್ಸಿಲ್ ಹರ್ಮನ್ ಹಾಗೂ ಮಾಜಿ ಸಚಿವ ರಮನಾಥ ರೈ ಇವರುಗಳೆಲ್ಲರೂ ಕಾನೂನು ವಿರುದ್ಧ ವ್ಯವಹಾರ ನಡೆಸಿರುವುದು ಕಂಡುಬರುತ್ತದೆ ಎಂಬುದಾಗಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರು.
ಈ ವರದಿಯೊಂದಿಗೆ ಸ್ವಾಧೀನಪಡಿಸಿಕೊಂಡ ನಗದು ಹಾಗೂ ದಾಖಲಾತಿಗಳನ್ನು ಕಾನೂನು ಕ್ರಮಕ್ಕಾಗಿ ಹಸ್ತಾಂತರಿಸಲಾಗಿತ್ತು.
ಜಿಲ್ಲಾಧಿಕಾರಿಯವರ ಆದೇಶದಂತೆ ಬಂಟ್ವಾಳ ತಹಶೀಲ್ದಾರ್ ರವರು ಎ.ಸಿ.ಜೆ. ಮತ್ತು ಜೆ.ಎಂ.ಎಫ್.ಸಿ ಬಂಟ್ವಾಳ ನ್ಯಾಯಾಲಯದ ಆದೇಶದಂತೆ ಅನುಮತಿಯನ್ನು ಪಡೆದುಕೊಂಡು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನ್ಯಾಯಾಲಯದ ಅನುಮತಿಯೊಂದಿಗೆ ದೂರು ಸಲ್ಲಿಸಿ ಪ್ರಕರಣ ದಾಖಲಿಸಲಾಗಿತ್ತು.












Click it and Unblock the Notifications