ಗರ್ಭಿಣಿ ಪಾಲಿಗೆ ಆಪದ್ಬಾಂಧವನಾದ ಬಂಟ್ವಾಳ ಆಸ್ಪತ್ರೆ ಸಿಬ್ಬಂದಿ
ಬಂಟ್ವಾಳ, ಅ. 28: ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ತುಂಬು ಗರ್ಭಿಣಿಗೆ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಆಂಬುಲೆನ್ಸ್ ನಲ್ಲಿಯೇ ಹೆರಿಗೆ ಮಾಡಿಸಿದ್ದು, ತಾಯಿ ಮತ್ತು ಮಗುವಿನ ಜೀವ ಉಳಿಸಿ ಎಲ್ಲರ ಶ್ಲಾಘನೆಗೆ ಪಾತ್ರವಾಗಿದ್ದಾರೆ. ಇದು ಸಂಕಟದ ನಡುವೆ ಮಹಿಳೆ ಮತ್ತು ಮಗುವಿನ ಪಾಲಿಗೆ ಆಪದ್ಬಾಂಧವರಾದ ಬಿ.ಸಿ.ರೋಡ್ನ 108 ಆಂಬುಲೆನ್ಸ್ ಸಿಬ್ಬಂದಿಯ ಯಶೋಗಾಥೆ..!
ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯಾದ ಚೇತನ್ ಎಂಬಾತ ಗರ್ಭಿಣಿ ಹಾಗೂ ಮಗುವನ್ನು ಉಳಿಸಿದವ. ತುಂಬು ಗರ್ಭಿಣಿಯು ಅಕ್ಟೋಬರ್ 24ರ ಶನಿವಾರದಂದು ಬಂಟ್ವಾಳ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈಕೆಗೆ ಮೆಕೋನಿಯಂ ಸ್ಟ್ರೈನ್ ಸಮಸ್ಯೆ ಇರುವುದನ್ನು ಗೊತ್ತು ಮಾಡಿಕೊಂಡ ವೈದ್ಯರು ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಹೇಳಿದ ಪರಿಣಾಮ ದಾರಿ ಮಧ್ಯೆದಲ್ಲಿಯೇ ಈ ಘಟನೆ ಸಂಭವಿಸಿದೆ.[ತಪ್ಪಿತಸ್ಥರಿಗೆ ಶಿಕ್ಷೆಯಾಗದೆ ಅಪರ್ಣಾ ಆತ್ಮಕ್ಕೆ ಶಾಂತಿ ಸಿಗದು]
ಏನಿದು ಘಟನೆ?
ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ಬಂಗಾರಕೋಡಿಯ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್ 24ರ ಶನಿವಾರದಂದು ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಈಕೆಗೆ ಮೆಕೋನಿಯಂ ಸ್ಟ್ರೈನ್ ಸಮಸ್ಯೆ ಇದೆ. ಇಲ್ಲಿ ಹೆರಿಗೆ ಮಾಡಲಾಗುವುದಿಲ್ಲ. ಕೂಡಲೇ ಮಂಗಳೂರಿಗೆ ಕರೆದೊಯ್ಯುವಂತೆ ಸೂಚಿಸಿದರು
ಈ ವೇಳೆ ಗಾಬರಿಗೊಂಡ ಮನೆಮಂದಿ ಆರೋಗ್ಯ ರಕ್ಷಾಕವಚ 108 ಆಂಬುಲೆನ್ಸ್ ವಾಹನಕ್ಕೆ ಕರೆ ಮಾಡಿದರು. ತಕ್ಷಣ ಬಿ.ಸಿ. ರಸ್ತೆಯ ಆಂಬುಲೆನ್ಸ್ ಬಂಟ್ವಾಳ ಆಸ್ಪತ್ರೆಗೆ ಧಾವಿಸಿ, ಹೆರಿಗೆ ನೋವಿನಲ್ಲಿದ್ದ ಗರ್ಭಿಣಿ ಹಾಗೂ ಆಕೆಯ ಸಂಬಂಧಿ ವೃದ್ಧೆಯೊಬ್ಬರ ಜೊತೆಗೆ ಮಂಗಳೂರಿಗೆ ಕರೆದೊಯ್ದರು.[ಕಷ್ಟದ ಸೂಜಿಯಿಂದ ಸುಂದರ ಬದುಕು ಹೊಲಿಯುತ್ತಿರುವ ಯಲ್ಲಮ್ಮ]
ಪಡೀಲ್ ತಲುಪುವಷ್ಟರಲ್ಲಿ ಈಕೆಗೆ ಹೆರಿಗೆ ನೋವು ಹೆಚ್ಚಾದ ಕಾರಣ ಆಂಬುಲೆನ್ಸ್ ನಿಲ್ಲಿಸಿದ ಸ್ಟಾಫ್ ನರ್ಸ್ ಚೇತನ್ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ, ಹೆರಿಗೆ ಮಾಡಿಸಿ ತಾಯಿ ಮಗುವಿನ ಜೀವ ಉಳಿಸಿದರು. ಆ ಬಳಿಕ ತಾಯಿ ಮತ್ತು ಮಗುವನ್ನು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ-ಮಗು ಇದೀಗ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಸ್ಟಾಫ್ ನರ್ಸ್ ಚೇತನ್ ಹಾಗೂ ವಾಹನದ ಪೈಲೆಟ್ ನಾಗಪ್ಪ ಅವರ ಕಾರ್ಯದಕ್ಷತೆ, ಸಮಯ ಪ್ರಜ್ಞೆ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ.