'ಮಂಗಳೂರು ಚಲೋ'ಗೆ ರಾಜ್ಯ ಸರ್ಕಾರದಿಂದ ಬೆದರಿಕೆ : ಸಂಸದ ನಳಿನ್
ಮಂಗಳೂರು, ಸೆಪ್ಟೆಂಬರ್ 4: "ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಪ್ರತಿಭಟನಾ ಬೈಕ್ ಜಾಥಾವನ್ನು ರಾಜ್ಯ ಸರ್ಕಾರ ಹತ್ತಿಕ್ಕುವ ಯತ್ನ ಮಾಡುತ್ತಿದೆ . ಪೊಲೀಸ್ ಇಲಾಖೆಯ ಮೂಲಕ ಬೆದರಿಕೆ ಹಾಕಿ ಕಾರ್ಯಕ್ರಮಕ್ಕೆ ತಡೆಯೊಡ್ಡಲು ಪ್ರಯತ್ನಿಸುತ್ತಿದೆ," ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರತಿಭಟನಾ ಜಾಥಾದಲ್ಲಿ ಭಾಗವಹಿಸಲು ಆಗಮಿಸುವ ಕಾರ್ಯಕರ್ತರಿಗೆ ತಂಗಲು ನಿಗದಿಪಡಿಸಿರುವ ಸಭಾಂಗಣವನ್ನು ನೀಡದಂತೆ ಪೊಲೀಸರ ಮೂಲಕ ಬೆದರಿಕೆ ಹಾಕಲಾಗುತ್ತಿದೆ," ಎಂದು ದೂರಿದರು.

ರಾಜ್ಯದ ಉದ್ದಗಲದಿಂದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲು ಬರುತ್ತಿದ್ದಾರೆ. ಕಾರ್ಯಕರ್ತರಿಗೆ ರಹಸ್ಯ ಸ್ಥಳದಲ್ಲಿ ತಂಗಲು ವ್ಯವಸ್ಥೆ ಮಾಡುತ್ತೇವೆ .ಪ್ರತಿಭಟನಾ ಜಾಥಾವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದವರು ಸ್ಪಷ್ಟಪಡಿಸಿದರು .
ಸೆಪ್ಟೆಂಬರ್ 7 ರಂದು ನಡೆಯಲಿರುವ ಪ್ರತಿಭಟನಾ ಬೈಕ್ ಜಾಥಾದಲ್ಲಿ ಹತ್ತು ಸಾವಿರ ಬೈಕ್ಗಳು ಭಾಗವಹಿಸಲಿವೆ . ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವ ಯತ್ನ ನಡೆಸಿದರೆ ಮುಂದೆ ಜರುಗಲಿರುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ ಎಂದವರು ಎಚ್ಚರಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಪರಿಸ್ಥಿತಿ ಹೇರುವ ಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ ಅವರು ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು ಎಂದು ಕಿಡಿಕಾರಿದರು.












Click it and Unblock the Notifications