ಅಂಗನವಾಡಿ ಕೇಂದ್ರ ಇನ್ನು ಪ್ಲಾಸ್ಟಿಕ್ ತಾಜ್ಯ ಶೇಖರಣಾ ಘಟಕ!
ಮಂಗಳೂರು, ಸೆಪ್ಟೆಂಬರ್ 03 : ಈಗಾಗಲೇ ಹಲವಾರು ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರ ಬವಣೆ ಮತ್ತಷ್ಟು ಹೆಚ್ಚಿದೆ. ಪುಟ್ಟ-ಪುಟ್ಟ ಮಕ್ಕಳ ನಗು ಕೇಳಿಬರುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿಗಳು ಇನ್ನು ಪ್ಲಾಸ್ಟಿಕ್ ತ್ಯಾಜ್ಯ ಶೇಖರಣಾ ಕೇಂದ್ರಗಳಾಗಿ ಮಾರ್ಪಾಡುಗೊಳ್ಳಲಿದೆ.
ಚೀನಾ ವಸ್ತುಗಳ ಬಹಿಷ್ಕಾರಕ್ಕೆ ವಿ.ಎಚ್.ಪಿ, ಭಜರಂಗದಳ ಕರೆ
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದ 1,688 ಅಂಗನವಾಡಿ ಕೇಂದ್ರಗಳು ಇನ್ನು ಮುಂದೆ ಪ್ಲಾಸ್ಟಿಕ್ ಶೇಖರಣಾ ಕೇಂದ್ರಗಳಾಗಲಿವೆ. ಅಂಗನವಾಡಿಗಳು ಮನೆ-ಮನೆಗಳಿಂದ ಉಪಯೋಗಿಸಿದ ಪ್ಲಾಸ್ಟಿಕ್ ಸಂಗ್ರಹಿಸುವ ಕೆಲಸ ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಸೆಪ್ಟಂಬರ್ 9 ರಿಂದ ಜಿಲ್ಲೆಯ 230 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿಈ ವ್ಯವಸ್ಥೆ ಜಾರಿಗೆ ಬರಲಿದೆ. ದಕ್ಷಿಣ ಕನ್ನಡ ಜಿಲ್ಲೆಯ 230 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿಗಾಗಿ ನಡೆದ ಜಿಲ್ಲಾ ಪಂಚಾಯತಿ ವಿಶೇಷ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರಕಿದೆ.
ಸಾರ್ ಪ್ಲಾಸ್ಟಿಕ್ ಕವರ್ ಇಲ್ಲಾ, ಪೇಪರ್ನಲ್ಲೇ ಸುತ್ತಿಕೊಡಲಾ?
ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಡಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಮನೆ-ಮನೆಗಳಿಂದ ಸಂಗ್ರಹಿಸಲಾಗುವ ಶುಚಿ ಮತ್ತು ಶುಷ್ಕ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿಡಲು ಜಿಲ್ಲೆಯ 1,688 ಅಂಗನವಾಡಿಗಳಿಗೆ ಸೂಚನೆ ನೀಡಲಾಗಿದೆ.
ಮನೆಗಳಲ್ಲಿ ಶೇಖರಿಸಿಟ್ಟ ಶುಚಿ ಮತ್ತು ಶುಷ್ಕವಾಗಿರುವ, ಮರುಬಳಕೆಗೆ ಯೋಗ್ಯವಾಗಿರುವ ಪ್ಲಾಸ್ಟಿಕ್ ವಸ್ತುಗಳಾದ ಹಾಲು ಹಾಗೂ ಹಾಲಿನ ಉತ್ಪನ್ನದ ಪ್ಯಾಕೆಟ್, ಪ್ಲಾಸ್ಟಿಕ್ನಿಂದ ತಯಾರಾದ ಕೈಚೀಲಗಳು, ಬಾಟ್ಲಿಗಳು, ಹೊದಿಕೆಗಳು, ಹಾಳೆಗಳು, ತಟ್ಟೆ, ಲೋಟ, ಚಮಚ, ಸ್ಟ್ರಾ, ಡಬ್ಬಗಳು, ಬಕೆಟ್, ಮಗ್ಗ್, ಪ್ಲಾಸ್ಟಿಕ್ ಆಟದ ಸಾಮಾನು ಇತ್ಯಾದಿಗಳನ್ನು ಪ್ರತೀ ತಿಂಗಳ 2 ನೇ ಶನಿವಾರ ಮನೆಯ ಸದಸ್ಯರು ಸಮೀಪದ ಅಂಗನವಾಡಿ ಕೇಂದ್ರಕ್ಕೆ ತಂದು ನೀಡಬೇಕು.
ಪ್ಲಾಸ್ಟಿಕ್ ನಿಷೇಧ : ಫ್ಲೆಕ್ಸ್ ಮತ್ತು ಬ್ಯಾನರ್ ಉದ್ಯಮಕ್ಕೆ ಬೀಗ?
ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅದೇ ದಿನ ಸಂಜೆ ಗ್ರಾಮ ಪಂಚಾಯತ್ ಹಂತದಲ್ಲಿ ನಿರ್ಮಿಸಲಾದ ಪ್ಲಾಸ್ಟಿಕ್ ಸಂಗ್ರಹಣಾ ಶೆಡ್ಡಿನಲ್ಲಿ ಶೇಖರಿಸಿಡಲಾಗುವುದು. ಇಲ್ಲಿ ಶೇಖರಿಸಿಟ್ಟ ಪ್ಲಾಸ್ಟಿಕ್ ತ್ಯಾಜ್ಯಗಳನ್ನು 3 ತಿಂಗಳಿಗೊಮ್ಮೆ ಮರು ಬಳಕೆ ಘಟಕದ ಸಂಸ್ಥೆಗೆ ರವಾನಿಸಲಾಗುವುದು. ಇದರಿಂದ ಬಂದ ಆದಾಯದ ಶೇ 25ರಷ್ಟನ್ನು ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಬಳಸಲು ಚಿಂತನೆ ನಡೆಸಲಾಗಿದೆ.
ಜಿಲ್ಲಾ ಪಂಚಾಯತಿಯ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಆದೇಶಕ್ಕೆ ಜಿಲ್ಲೆಯ ಅಂಗನವಾಡಿ ಕೇಂದ್ರಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಅಂಗನವಾಡಿ ಕೇಂದ್ರಗಳನ್ನು ತಾಜ್ಯ ಸಂಸ್ಕರಣಾ ಘಟಕಗಳನ್ನಾಗಿ ಮಾಡಲು ಬಿಡುವುದಿಲ್ಲ ಎಂದಿದ್ದಾರೆ. ಜಿಲ್ಲಾ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಈ ಬಗ್ಗೆ ತುರ್ತು ಸಭೆ ನಡೆಸಿ ಪ್ರತಿಭಟಿಸುವ ನಿರ್ಣಯವನ್ನು ಕೈಗೊಂಡಿದ್ದಾರೆ.
ಪರಿಸರ ಸ್ನೇಹಿಯಾದ ಸರ್ಕಾರ, ಪ್ಲಾಸ್ಟಿಕ್ ಬಳಕೆ ನಿಷೇಧ
ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆಯ ರಾಜ್ಯಾಧ್ಯಕ್ಷೆ ಜಯಲಕ್ಷ್ಮೀ ಅವರು 'ಈ ಕುರಿತು ಪ್ರತಿಕ್ರಿಯಿಸಿದ್ದು ಪುಟ್ಟ ಮಕ್ಕಳನ್ನು ನೋಡಿಕೊಳ್ಳುವ ಅಂಗನವಾಡಿಗಳು ಜಾನುವಾರು ಸಾಕುವ ದೊಡ್ಡಿಗಳಲ್ಲ ಎಂದಿದ್ದಾರೆ. ಆಹಾರ ಸಿದ್ದಪಡಿಸಿಕೊಡುವ ಮಹತ್ತರ ಜವಾಬ್ದಾರಿ ಮತ್ತು ಇತರ ಅನೇಕ ಕೆಲಸಗಳು ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಇದೆ. ಜಿಲ್ಲಾ ಪಂಚಾಯತಿ ನಿರ್ಣಯವನ್ನು ನಾವು ವಿರೋಧಿಸುತ್ತೇವೆ' ಎಂದಿದ್ದಾರೆ.