ಜಿಲ್ಲಾಧಿಕಾರಿಗಳಿಗೆ ಮಂಗಳೂರಿನ ನಾಗರಿಕರ ಮಹತ್ವದ ಮನವಿ
ಮೇಲಿನ ದೃಶ್ಯ ಮಂಗಳೂರಿನ ಹೃದಯ ಭಾಗ ಸೆಂಟ್ರಲ್ ಮಾರುಕಟ್ಟೆಯ ಹೊರಗಿನ ಮಾರ್ಗ ಬದಿಯ ರೂಪವಾಣಿ ಟಾಕೀಸಿನ ಬಳಿಯ ದೃಶ್ಯ.
ಸೆಂಟ್ರಲ್ ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡಿಕೊಂಡಿರುವ ವ್ಯಾಪಾರಸ್ಥರಲ್ಲಿ ಕೆಲವು ಮಾಲಕರನ್ನು ಒಳಗೊಂಡಿರುವ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ತರ ಸಂಘ ಅಸ್ತಿತ್ವದಲ್ಲಿದ್ದರೂ ಇವರೆಲ್ಲರೂ ವ್ಯಾಪಾರ ಮಾಡಿ ಹಣ ಸಂಪಾದಿಸುವುದನ್ನು ಬಿಟ್ಟರೆ ಈ ಮಾರುಕಟ್ಟೆ ಪರಿಸರವನ್ನು ಸ್ವಚ್ಚವಾಗಿಡುವಲ್ಲಿ ಕೈ ಜೋಡಿಸುವುದು ಬಿಡಿ, ಆ ಬಗ್ಗೆ ಆಲೋಚನೆಯನ್ನು ಕೂಡಾ ಮಾಡಿರಲಿಕ್ಕಿಲ್ಲ.
Recommended Video
ಮಾರುಕಟ್ಟೆಯ ಹೊರಗಡೆ ಪಾಲಿಕೆಯ ಕಸದ ಲಾರಿ ನಿಂತಿದ್ದರೂ ಕಸ ಹೊರುವ ಪೇಮೆಂಟ್ ಕೂಲಿಯಾಳುಗಳು ಕಸವನ್ನು ಲಾರಿಗೆ ಹಾಕುವ ಬದಲು ರಸ್ತೆ ಬದಿಯಲ್ಲಿಯೇ ರಾಶಿ ಹಾಕುತ್ತಾರೆ.

ಅದರಲ್ಲಿಯೂ ಇಬ್ಬರು ಕೂಲಿಯಾಳುಗಳು ಮಾರ್ಕೆಟಿನ ಎಲ್ಲಾ ತರಕಾರಿ ಹಾಗೂ ಫಲವಸ್ತುಗಳ ಅಂಗಡಿ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ಬೇಗನ ಕೆಲಸ ಮುಗಿಸುವ ಮತ್ತು ಅಧಿಕ ಹಣ ಸಂಪಾದನೆಗಾಗಿ ಕಸಗಳನ್ನು ಉದ್ದೇಶಪೂರ್ವಕವಾಗಿಯೇ ರಸ್ತೆ ಬದಿಯಲ್ಲಿ ರಾಶಿ ಹಾಕುತ್ತಾರೆ.
ಈ ಬಗ್ಗೆ ಅಲ್ಲಿಯ ಸ್ಥಳೀಯರು ಹಾಗೂ ಟೆಂಪೋ ಚಾಲಕರು ಇಲ್ಲಿ ಕಸ ಹಾಕಬೇಡಿ ಎಂದು ಹೇಳಿದರೆ ಬಲಪ್ರದರ್ಶನಕ್ಕೆ ಮುಂದಾಗಿ ಹಲ್ಲೆ ಮಾಡಲೂ ಹಿಂಜರಿಯುವುದಿಲ್ಲ. ಕಳೆದ ಕೆಲವು ವರ್ಷಗಳಿಂದ ಇಲ್ಲಿಯ ಮನಪಾ ಸದಸ್ಯೆಯಾಗಿದ್ದವರು ಈ ಸಮಸ್ಯೆಯ ಬಗ್ಗೆ ಪಾಲಿಕೆಯ ಕಮೀಷನರ್, ಆರೋಗ್ಯ ಅಧಿಕಾರಿಗಳು ಹಾಗೂ ಮಾರುಕಟ್ಟೆ ವ್ಯಾಪಾರಸ್ಥರ ಸಂಘದವರಿಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ.

ಈ ಸಮಸ್ಯೆಯ ಬಗ್ಗೆ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದ್ದರೂ ಮಾರುಕಟ್ಟೆ ಸಂಘದವರು ಎಚ್ಚೆತ್ತುಕೊಳ್ಳಲಿಲ್ಲ. ಇಷ್ಟು ಸಮಯ ಮನಪಾ (ಮಂಗಳೂರು ನಗರ ಪಾಲಿಕೆ) ದಲ್ಲಿ ಕರ್ತವ್ಯ ನಿರ್ವಹಿಸಿದ ಕಮೀಷನರ್ ಮೇಯರ್ ಹಾಗೂ ಆರೋಗ್ಯ ಅಧಿಕಾರಿಗಳಿಂದ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಲಿಲ್ಲ.
ಬನ್ನಿ ಮಿತ್ರರೇ, ಸ್ವಚ್ಚ ಭಾರತದ ಅಭಿಯಾನದ ಅಂಗವಾಗಿ ಭಾರತವನ್ನು ಸ್ವಚ್ಚಗೊಳಿಸುವ ಕಾರ್ಯಕ್ಕೆ ನೆರವಾಗಲು ಈ ಮೆಸೇಜನ್ನು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ, ಹಾಗೂ ಪೊಲೀಸ್ ಕಮೀಷನರ್ ಗೆ ತಲುಪುವ ವರೆಗೂ ಶೇರ್ ಮಾಡಿ ಈ ಸಣ್ಣ ಕಾರ್ಯದ ಮುಖಾಂತರ ಸ್ವಚ್ಚ ಭಾರತದ ಅಭಿಯಾನದೊಂದಿಗೆ ನಾವೂ ಕೈ ಜೋಡಿಸೋಣ.












Click it and Unblock the Notifications