ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದವರಿಗೆ ತಕ್ಕ ಶಾಸ್ತಿ: ಅಮಿತ್ ಶಾ
ಮಂಗಳೂರು, ಮೇ 09: "ಇದೇ ಬರುವ ಮೇ 12 ಪರಿವರ್ತನೆಯ ಅವಕಾಶದ ದಿನ .ಇದುವೇ ಕರ್ನಾಟಕದ ಅಭಿವೃದ್ಧಿ ಗತಿಯನ್ನು ಬದಲಿಸುವ ದಿನ . ರಾಜ್ಯದಲ್ಲಿ 24 ಕಾರ್ಯಕರ್ತರ ಹತ್ಯೆಯಾಗಿದೆ.
ಮಂಗಳೂರಿಗೆ ಮಂಗಳವಾರ ಭೇಟಿ ನೀಡಿದ್ದ ಅಮಿತ್ ಶಾ ಮಂಗಳೂರು , ಮಂಗಳೂರು ದಕ್ಷಿಣ ಮತ್ತು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಹಾಗು ಹಿಂದೂ ಕಾರ್ಯಕರ್ತರ ಹತ್ಯೆಗೆ ಸಂಬಂಧಿಸಿದ ಒಬ್ಬನೇ ಒಬ್ಬ ಆರೋಪಿಯನ್ನೂ ಈ ಸರ್ಕಾರ ಬಂಧಿಸಿಲ್ಲ. ಆರೋಪಿಗಳನ್ನು ಬಂಧಿಸದೆ ಅವರ ರಕ್ಷಣೆಗೆ ಈ ಕಾಂಗ್ರೆಸ್ ಸರಕಾರ ನಿಂತಿದೆ. ಹತ್ಯೆ ಮಾಡಿದವರನ್ನು ಇಷ್ಟು ದಿನ ರಕ್ಷಿಸಿದ್ದಿರೀ . ಆದರೆ ನಮ್ಮ ಪಕ್ಷ ಅಧಿಕಾರ ಬಂದ ದಿನದಿಂದಲೇ ಆರೋಪಿಗಳನ್ನು ಪಾತಾಳದಲ್ಲಿದ್ದರೂ ಹುಡುಕಿ ಬಂಧಿಸಲು ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಸರಕಾರ ಅತ್ಯಂತ ಭ್ರಷ್ಟ ಸರಕಾರ. ಸಿದ್ದರಾಮಯ್ಯಗೆ 60 ಲಕ್ಷದ ರೂಪಾಯಿ ವಾಚ್ ಕೊಟ್ಟಿದ್ದು ಯಾರೆಂದು ಕೇಳಿದ್ದೆ? ಆದರೆ ಸಿದ್ರಾಮಯ್ಯ ಇನ್ನೂ ಉತ್ತರ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಸಿದ್ದರಾಮಯ್ಯ ನಿನ್ನೆ ಮೋದಿಗೆ ನೋಟಿಸ್ ಕೊಟ್ಟಿದ್ದಾರೆ . ರಾಜ್ಯದ ಜನತೆಯ ನಿರ್ಣಯ ಗೊತ್ತಾಗಿದೆ. ಹಾಗಾಗಿ ವಿಚಲಿತರಾಗಿ ನೋಟಿಸ್ ನೀಡಿದ್ದಾರೆ," ಎಂದು ಹೇಳಿದ ಅವರು, "ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಬಾದಾಮಿಗೆ ಓಡಿದ್ದಾರೆ. ಆದರೆ ಅಲ್ಲಿ ನಮ್ಮ ಶ್ರೀರಾಮುಲು ಗೆಲ್ತಾರೆ, ಸಿದ್ದರಾಮಯ್ಯ ಮನೆಗೆ ಹೋಗ್ತಾರೆ," ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಮಲದ ಚಿಹ್ನೆಗೆ ಮತ ನೀಡಿ. ಕಾಂಗ್ರೆಸಿಗರನ್ನು ನೇರವಾಗಿ ಇಟಲಿಗೆ ಅಟ್ಟಿ. ಮೇ 15ರಂದು ಸಿದ್ದರಾಮಯ್ಯರನ್ನು ಬದಲಿಸಿ ಯಡಿಯೂರಪ್ಪ ಸರಕಾರ ತನ್ನಿ ಎಂದು ಅವರು ಕರೆ ನೀಡಿದರು.
ರೋಡ್ ಶೋ ಸಂದರ್ಭದಲ್ಲಿ ಮಂಗಳೂರಿನ ಪ್ರಸಿದ್ಧ ಶ್ರೀ ಗೋಕರ್ಣನಾಥ್ ದೇವಾಲಯಕ್ಕೆ ಭೇಟಿ ನೀಡದ ಅಮಿತ್ ಶಾ, ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.