ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಲ್ಲಾ ಸೇವೆಗಳು ಪುನರಾರಂಭ
ಮಂಗಳೂರು, ಸೆಪ್ಟೆಂಬರ್ 15: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ಸೇವೆಗಳು ಆರಂಭಗೊಂಡಿರುವುದಾಗಿ ದೇವಾಲಯದ ಆಡಳಿತಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಜರಾಯಿ ಇಲಾಖೆಯ ಆದೇಶದಂತೆ ಸೂಕ್ತ ಮುಂಜಾಗೃತಾ ಕ್ರಮದೊಂದಿಗೆ, ನಿಗದಿತ ಭಕ್ತರೊಂದಿಗೆ ಸೇವೆಗಳ ಪುನರಾರಂಭಕ್ಕೆ ಕ್ರಮಕೈಗೊಳ್ಳಲಾಗಿದೆ.
ಕೆಲವು ಷರತ್ತುಗಳನ್ನೂ ವಿಧಿಸಿದ್ದು, ದಿನಕ್ಕೆ ಕೇವಲ 30 ಸೇವೆಗಳನ್ನು ಮಾಡಲು ಭಕ್ತಾದಿಗಳಿಗೆ ಅವಕಾಶ ನೀಡಲಾಗಿದೆ. ಹಿಂದೆ ಸೇವೆಯನ್ನು ಕಾಯ್ದಿರಿಸಿದ ಭಕ್ತಾದಿಗಳಿಗೆ ಸದ್ಯಕ್ಕೆ ಅವಕಾಶ ನೀಡಲಾಗಿದ್ದು, ಹೊಸದಾಗಿ ಸರ್ಪ ಸಂಸ್ಕಾರ ಪೂಜೆ ನೆರವೇರಿಸುವ ಅವಕಾಶವನ್ನು ನಿರಾಕರಿಸಲಾಗಿದೆ. ಸರ್ಪ ಸಂಸ್ಕಾರ ಸೇವೆ ನೆರವೇರಿಸುವವರಿಗೆ 2 ದಿನಗಳವರೆಗೆ ಕ್ಷೇತ್ರದಲ್ಲಿ ತಂಗಲು ಅವಕಾಶವಿದೆ. ಇತರ ಸೇವೆಗೆ ಬಂದವರಿಗೆ ಒಂದು ದಿನ ತಂಗಲು ಅವಕಾಶವಿದೆ.
ಕ್ಷೇತ್ರದಲ್ಲಿ ನಡೆಯುವ ಇನ್ನೊಂದು ಪ್ರಮುಖ ಸೇವೆ ಆಶ್ಲೇಷ ಬಲಿ ಪೂಜೆಗೂ ಅವಕಾಶ ನೀಡಲಾಗಿದ್ದು, ದಿನಕ್ಕೆ ಎರಡು ಪಾಳಿಯಲ್ಲಿ 60 ಪೂಜೆಗಳನ್ನು ನೆರವೇರಿಸಲು ಅನುಮತಿ ನೀಡಲಾಗಿದೆ. ಮಹಾಪೂಜೆ, ಪಂಚಾಮೃತ ಸೇವೆಯ ಹತ್ತು ಟಿಕೆಟ್ ಮಾತ್ರ ವಿತರಣೆ ಮಾಡಲಾಗುತ್ತದೆ. ಬೆಳಿಗ್ಗೆ 6.30ರಿಂದ ಮಧ್ಯಾಹ್ನ 1.30ರ ತನಕ ಹಾಗೂ ಮಧ್ಯಾಹ್ನದ ಬಳಿಕ 3.30ರಿಂದ 8 ಗಂಟೆ ತನಕ ಕ್ಷೇತ್ರ ತೆರೆದಿರುತ್ತದೆ.

ಲಾಕ್ ಡೌನ್ ಬಳಿಕ ಕ್ಷೇತ್ರದಲ್ಲಿ ಎಲ್ಲಾ ಪ್ರಕಾರದ ಸೇವೆಗಳು ನಿಂತು ಹೋದ ಪರಿಣಾಮ ಕ್ಷೇತ್ರದ ಆದಾಯಕ್ಕೆ ಭಾರೀ ಹೊಡೆತ ಬಿದ್ದಿತ್ತು. ಅನ್ಲಾಕ್ ಜಾರಿಯಾಗುತ್ತಿದ್ದಂತೆ ದೇವಾಲಯಗಳನ್ನು ತೆರೆದು ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಸೇವೆಗಳಿಗೂ ಚಾಲನೆ ದೊರೆತಿದೆ.
ಸೇವೆಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.












Click it and Unblock the Notifications