ಅನಾಥವಾಗಿ ಬಿದ್ದ ತುಳುನಾಡಿನ ಜಗಜಟ್ಟಿ ಅಗೋಳಿ ಮಂಜಣ್ಣ ಹೊತ್ತು ತಂದ ದಂಬೆಕಲ್ಲು!
ಮಂಗಳೂರು, ಡಿಸೆಂಬರ್ 13: ತುಳುನಾಡಿನ ವೀರಪುರುಷ ಎಂದೇ ಹೆಸರಾದ 'ಅಗೋಳಿ ಮಂಜಣ್ಣ' ಒಬ್ಬ ಅಸಾಧ್ಯ ಧೈರ್ಯಶಾಲಿ. ಅದು ಎಷ್ಟರಮಟ್ಟಿಗೆ ಅಂದರೆ, ಒಂದೇ ಬಾರಿಗೆ ಹತ್ತು ಮೂಟೆ ಅಕ್ಕಿ ಎತ್ತಬಲ್ಲಂತಹ ಬಲಶಾಲಿ. ಗಟ್ಟಿ ಮುಟ್ಟು ಭೀಮ ಕಾಯದ, ಬಕಾಸುರ ಬಾಯಿಯ, ದಢೂತಿ ವ್ಯಕ್ತಿಯಾದ ತುಳುನಾಡಿನ ಜಗಜಟ್ಟಿ ಅಗೋಳಿ ಮಂಜಣ್ಣ 'ತುಳುನಾಡಿನ ಭೀಮ'ನೆಂದು ಪ್ರಸಿದ್ಧನಾದ ಐತಿಹಾಸಿಕ ಪುರುಷ. ಅಪ್ರತಿಮ ಶಕ್ತಿ, ಸಾಹಸಗಳಿಗೆ ಹೆಸರಾದ ವ್ಯಕ್ತಿ. ಅದ್ಭುತ ಜೀರ್ಣಶಕ್ತಿಯುಳ್ಳ ತಿನಿಸಿಗ.
'ಅಗೋಳಿ' ಎಂಬ ತುಳು ಶಬ್ದಕ್ಕೆ ಅರ್ಥ ಗುಡಾಣ, ಹಂಡೆ ಅಥವಾ ಅಂತಹದೇ ಭಾರಿ ಗಾತ್ರದ ಪಾತ್ರೆ ಎಂದು. ಆ ಪಾತ್ರೆಯಲ್ಲಿ ಊಟ ಮಾಡುವವನು ಅಗೋಳಿ ಮಂಜಣ್ಣ.
ಅಜಾನುಬಾಹು ಅಗೋಳಿ ಮಂಜಣ್ಣ ಮೂಲ್ಕಿ ಸೀಮೆಯ ಅಧಿಪತಿಯಾಗಿ ಪರಾಕ್ರಮ ಮೆರೆದ ತುಳು ನಾಡಿನ ವೀರಪುರುಷ. ಅಂದಾಜು 200 ವರ್ಷಗಳ ಹಿಂದೆ ಮಂಗಳೂರಿನ ಸುರತ್ಕಲ್ ಸನಿಹದ ಚೆಳ್ಯಾರ್ ಗುತ್ತಿನಲ್ಲಿ ಬದುಕಿ ಬಾಳಿದವರು ಅಗೋಳಿ ಮಂಜಣ್ಣ.

ಸಂತಾನ ಭಾಗ್ಯ ಇಲ್ಲದ ಚೇಳ್ಯಾರು ಗುತ್ತುವಿನ ದುಗ್ಗು ಎಂಬುವವರು ಬಪ್ಪನಾಡು ದೇವಿಗೆ ಹರಕೆ ಹೊತ್ತ ಫಲವಾಗಿ ಜನಿಸಿದ ಮಗನೇ ಅಗೋಳಿ ಮಂಜಣ್ಣ. ಮಂಜಣ್ಣರು ಆ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳು ಇಂದಿಗೂ ರಕ್ಷಿಸಿಡಲಾಗಿದೆ.
ಅಗೋಳಿ ಮಂಜಣ್ಣ ಎರ್ಮಾಳಿನಿಂದ ಸುಮಾರು 9 ಕಿ.ಮೀ ದೂರದ ಮೂಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಹೊತ್ತು ತಂದ ಶಿಲೆಯ ದೊಂಬೆ ಕಲ್ಲು ಇಂದಿಗೂ ಕಾಣ ಬಹುದಾಗಿದೆ. ಈ ಕಲ್ಲು ಸಾಮಾನ್ಯ ಕಲ್ಲಲ್ಲ. ಈ ಕಾಲದಲ್ಲಾದರೆ ಈ ದಂಬೆ ಕಲ್ಲು ಸಾಗಿಸಲು ಸರಕು ಸಾಗಟದ ವಾಹನವೇ ಬೇಕು. ವಾಹನದಲ್ಲಿ ತುಂಬಿಸಲು ಕ್ರೇನ್ ಬೇಕಾದಿತು.

ಅಂತಹ ಗಜ ಗಾತ್ರದ ಕಲ್ಲು, ಗತ ಇತಿಹಾಸ ಸಾರುವ, ಅಗೋಳಿ ಮಂಜಣ್ಣನ ಸಾಹಸ ನೆನಪಿಸುವ ಕಲ್ಲು, ಈಗ ಅನಾಥ ಸ್ಥಿತಿಯಲ್ಲಿದೆ. ಯಾವೊಂದು ರಕ್ಷಣೆ ಇಲ್ಲದೆ ಬಪ್ಪನಾಡು ದೇವಸ್ಥಾನದ ವಠಾರದ ಮೂಲೆಯಲ್ಲಿ ಬಿದ್ದಿದೆ.
ಈ ಹಿನ್ನೆಲೆಯಲ್ಲಿ ಕಲ್ಲಿರುವ ಸ್ಥಳದಲ್ಲಿ ಪೀಠ ಕಟ್ಟ ಬೇಕು. ಅದರ ಮೇಲೆ ದಂಬೆ ಕಲ್ಲಿಡಬೇಕು. ಸುತ್ತಲು ರಕ್ಷಣೆಗೆ ಕಬ್ಬಿಣದ ಬೇಲಿ ಅಳವಡಿಸಬೇಕು ಎಂಬುದು ಜನರ ಆಗ್ರಹವಾಗಿದೆ.












Click it and Unblock the Notifications