ಆದಿತ್ಯ ರಾವ್ ಆಸ್ಪತ್ರೆಗೆ ದಾಖಲು; ಪರೇಡ್ ಸ್ಥಗಿತ
ಮಂಗಳೂರು, ಫೆಬ್ರವರಿ 26 : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯರಾವ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇದರಿಂದಾಗಿ ಪೊಲೀಸರು ಗುರುತು ದೃಢೀಕರಣಕ್ಕಾಗಿ ಸಾಕ್ಷಿಗಳ ಮುಂದೆ ಬುಧವಾರ ನಡೆಯಬೇಕಿದ್ದ ಪರೇಡ್ ಸ್ಥಗಿತವಾಗಿದೆ.
ಬುಧವಾರ ಆದಿತ್ಯರಾವ್ ಅವರನ್ನು ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದಿತ್ಯರಾವ್ ಜ್ವರದಿಂದ ಬಳಲುತ್ತಿದ್ದು, ಮಲೇರಿಯಾದಿಂದ ಬಳಲುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಬುಧವಾರ ಆರೋಪಿಯನ್ನು ನೋಡಿದ್ದ 15 ಸಾಕ್ಷಿಗಳ ಮುಂದೆ ಆದಿತ್ಯರಾವ್ ಪರೇಡ್ ನಡೆಸಲು ತೀರ್ಮಾನಿಸಿದ್ದರು. ಆದರೆ, ಅದು ರದ್ದಾಗಿದೆ.

ಮಂಗಳೂರು ಉತ್ತರ ವಿಭಾಗದ ಎಸಿಪಿ ಕೆ. ಯು.ಬೆಳ್ಳಿಯಪ್ಪ ನೇತೃತ್ವದ ತಂಡ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದ ತನಿಖೆ ನಡೆಸುತ್ತಿದೆ. ಇದುವರೆಗೂ 50ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದೆ.
ಜನವರಿ 20ರಂದು ಆದಿತ್ಯರಾವ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಹೋಗಿದ್ದ. ಆತನನ್ನು ಅಂದು ನೋಡಿದ 15 ಜನರ ಸಮ್ಮುಖದಲ್ಲಿ ಹಾಜರುಪಡಿಸಿ ಸಿಆರ್ಪಿಸಿ ಸೆಕ್ಷನ್ 164ರ ಅಡಿ ಹೇಳಿಕೆ ಪಡೆಯಲು ಪೊಲೀಸರು ತೀರ್ಮಾನಿಸಿದ್ದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಆದಿತ್ಯರಾವ್ ಇಟ್ಟಿದ್ದ ಸ್ಪೋಟಕವನ್ನು ಪೊಲೀಸರು ಸ್ಫೋಟಿಸಿದ್ದರು. ಬಳಿಕ ಆದಿತ್ಯರಾವ್ ಬೆಂಗಳೂರಿನಲ್ಲಿ ಪೊಲೀಸರ ಮುಂದೆ ಶರಣಾಗಿದ್ದ. ಪ್ರಕರಣದ ತನಿಖೆಯನ್ನು ಇನ್ನೂ ನಡೆಸಲಾಗುತ್ತಿದೆ.












Click it and Unblock the Notifications