ಮಂಗ್ಳೂರಿನಿಂದ ಬೆಂಗ್ಳೂರಿಗೆ ವಿಮಾನ ಮೂಲಕ ಹಾರಿತು ಜೀವಂತ ಹೃದಯ
ಮಂಗಳೂರು, ಫೆಬ್ರವರಿ 22 : ಇದೇ ಮೊದಲ ಬಾರಿಗೆ ಮಂಗಳೂರಿನ ಎ.ಜೆ.ಆಸ್ಪತ್ರೆಯಿಂದ ವಿಮಾನದ ಮೂಲಕ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಮಂಗಳವಾರ 'ಜೀವಂತ ಹೃದಯ'ವನ್ನು ಯಶಸ್ವಿಯಾಗಿ ಸಾಗಿಸಲಾಯಿತು.
ಅಪಘಾತದಲ್ಲಿ ಮೆದುಳು ನಿಷ್ಕ್ರೀಯಗೊಂಡಿದ್ದ ಮೂಡಬಿದ್ರೆಯ ಪಡುಮಾರ್ನಾಡಿನ ನಿವಾಸಿ ನಿವಾಸಿ ಸತೀಶ್ (28) ಅವರ ಹೃದಯ,ಲಿವರ್, ಕಿಡ್ನಿಗಳನ್ನು ದಾನ ಮಾಡಿ ಸತೀಶ್ ಕುಟುಂಬಸ್ಥರು ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಸತೀಶ್ ಅವರು ಫೆಬ್ರವರಿ 18ರ ರಾತ್ರಿ ಕಾರ್ಕಳ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕಾರ್ಕಳದ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಫೆಬ್ರವರಿ 19ರಂದು ಅವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಸೇರಿಸಲಾಗಿತ್ತು.
ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟು ಬಿದಿದ್ದರಿಂದ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ಸತೀಶ್ ರ ತಂದೆ ರಾಘವ ಆಚಾರ್ ಮತ್ತು ತಾಯಿ ಸುಲೋಚನಾ, ಮಗನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಲಾಗಿದೆ ಎಂದು ವೈದ್ಯರಿಗೆ ತಿಳಿಸಿದ್ದಾರೆ.
ಎ.ಜೆ.ಆಸ್ಪತ್ರೆಯ ಸಿಬ್ಬಂದಿ ತ್ವರಿತವಾಗಿ ಝೋನಲ್ ಕೋರ್ಡಿನೇಶನ್ ಕಮಿಟಿ ಆಫ್ ಕರ್ನಾಟಕ ಫಾರ್ ಟ್ರಾನ್ಸ್ ಪ್ಲಾಂಟೆಶನ್ (ಝೆಡ್ ಸಿಸಿಕೆ) ಸಂಸ್ಥೆಯನ್ನು ಸಂಪರ್ಕಿಸಿ ಅಂಗಾಂಗ ಕಸಿಗೆ ಅಗತ್ಯವಿರುವ ಕಾನೂನು ಪರವಾನಗಿಗಳನ್ನು ಮತ್ತು ಅಂಗಾಂಗ ಸ್ವೀಕರಿಸುವವರ ಪಟ್ಟಿಯನ್ನು ತಯಾರಿಸಿದರು.
ಕಾನೂನು ಪರವಾನಗಿಯ ನಂತರ ಅಂಗಾಂಗಗಳ ಕಸಿಯನ್ನು ಮಾಡುವ ವೈದ್ಯರ ತಂಡವು ಬೆಂಗಳೂರಿನಿಂದ ಮಂಗಳೂರಿಗೆ ಮಂಗಳವಾರ ಆಗಮಿಸಿ ಯಶಸ್ವಿಯಾಗಿ ಕಸಿ ಮಾಡಿದರು.
ದಾನಿಯಿಂದ ಪಡೆದ ಅಂಗಾಂಗಗಳನ್ನು ಝೆಡ್ ಸಿಸಿಕೆಯವರ ನಿರ್ದೇಶನದ ಮೇಲೆ ದಾನ ಮಾಡಲಾಯಿತು. ಮೃತ ಸತೀಶ್ ರ ಹೃದಯವನ್ನು ಬೆಂಗಳೂರಿನ ಎಂ. ಎಸ್.ರಾಮಯ್ಯ ಆಸ್ಪತ್ರೆಗೆ, ಲಿವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ, ಕಿಡ್ನಿಗಳನ್ನು ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲ ಮತ್ತು ಎ. ಜೆ. ಆಸ್ಪತ್ರೆಯ ರೋಗಿಗಳಿಗೆ ಕಸಿ ಮಾಡಲು ತೀರ್ಮಾನಿಸಲಾಗಿದೆ.












Click it and Unblock the Notifications