ಶರತ್ ಕೊಲೆ ಆರೋಪಿಗಳ ಶೀಘ್ರ ಬಂಧನ – ಎಡಿಜಿಪಿ ಅಲೋಕ್ ಮೋಹನ್
ಮಂಗಳೂರು, ಜುಲೈ 13: 'ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿಗಳ ಬಗ್ಗೆ ಮಹತ್ವದ ಸುಳಿವು ದೊರೆತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹೇಳಿದ್ದಾರೆ. ಬುಧವಾರ ಸಂಜೆ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
"ಕಲ್ಲಡ್ಕ ಘಟನೆಗೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣ ದಾಖಲಾಗಿದೆ. 17 ಜನರನ್ನು ಬಂಧಿಸಲಾಗಿದೆ. ಎಲ್ಲಾ ಅಹಿತಕರ ಘಟನೆಗಳ ಹಿಂದಿರುವ ಆರೋಪಿಗಳ ಬಗ್ಗೆ ಪ್ರಮುಖ ಸುಳಿವು ದೊರೆತಿದೆ. ಜನರು ಶಾಂತಿ ಕಾಪಾಡಲು ಪೊಲೀಸರೊಂದಿಗೆ ಸಹಕಾರ ನೀಡಬೇಕು," ಎಂದು ಮನವಿ ಮಾಡಿಕೊಂಡರು.

"ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಇತರ ಕಡೆಯಿಂದ ಹೆಚ್ಚುವರಿ ಪೊಲೀಸರನ್ನು ಜಿಲ್ಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೊರ ರಾಜ್ಯಗಳಿಂದಲೂ ತಜ್ಞರನ್ನು ಕರೆಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಜನ ಜೀವನ ಮತ್ತೆ ಸಹಜ ಸ್ಥಿತಿಗೆ ಮರಳಿದೆ ಈ ಸಂದರ್ಭದಲ್ಲಿ ಸಾರ್ವಜನಿಕರು ಶಾಂತಿ ಸ್ಥಾಪನೆಗೆ ಸಹಕಾರ ನಿರಂತರವಾಗಿ ನೀಡಬೇಕಾಗಿದೆ," ಎಂದು ಅಲೋಕ್ ಮೋಹನ್ ಅಭಿಪ್ರಾಯಪಟ್ಟರು.
"ಬಂಟ್ವಾಳಲ್ಲಿ ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಬಳಿ ವೀಡಿಯೊ ದಾಖಲೆಗಳಿವೆ. ಇದರಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ತನಿಖೆಗೆ ಕ್ರಮ ಕೈ ಗೊಳ್ಳಲಾಗಿದೆ. ನಿರಪರಾಧಿಗಳನ್ನು ಯಾರನ್ನು ಬಂಧಿಸಿಲ್ಲ," ಎಂದ ಅಲೋಕ್ ಮೋಹನ್ ಹಿಂದೂ ಕಾರ್ಯಕರ್ತರ ಬಂಧನಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಬಂಟ್ವಾಳ ಶರತ್ ಮಡಿವಾಳ ಅವರ ಅಂಗಡಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಅಲೋಕ್ ಕುಮಾರ್ ಕಲೆ ಹಾಕಿದ್ದಾರೆ. ಎಲ್ಲಾ ಹಿರಿಯ ಅಧಿಕಾರಿಗಳ ಜತೆಗೆ ಬುಧವಾರ ಅವರು ಮಂಗಳೂರು ಆಯುಕ್ತರ ಕಚೇರಿಯಲ್ಲಿ ದೀರ್ಘ ಕಾಲ ಸಭೆಯನ್ನೂ ನಡೆಸಿದರು. ಮತ್ತು ತನಿಖೆಯನ್ನು ಚುರುಕು ಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇಂದು ಬಂಟ್ವಾಳಕ್ಕೆ ಡಿಜಿಪಿ ದತ್ತಾ
ಇಂದು ಗಲಭೆ ಪೀಡಿತ ಬಂಟ್ವಾಳಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತಾ ಭೇಟಿ ನೀಡಲಿದ್ದಾರೆ. ಅವರ ಜತೆ ಗೃಹ ಮಂತ್ರಿಗಳ ಸಲಹೆಗಾರ ಕೆಂಪಯ್ಯ ಕೂಡಾ ಭೇಟಿ ನೀಡುವ ಸಾಧ್ಯತೆ ಇದೆ. ಈ ಸಂದರ್ಭ ಬಂಟ್ವಾಳ ಪೊಲೀಸರಿಂದ ಗಲಭೆಯ ಸಂಪೂರ್ಣ ವಿವರಗಳನ್ನು ಉನ್ನತ ಪೊಲೀಸ್ ಅಧಿಕಾರಿಗಳು ಪಡೆದುಕೊಳ್ಳಲಿದ್ದಾರೆ.












Click it and Unblock the Notifications