ಕರಾವಳಿಗರ ಬಹು ನಿರೀಕ್ಷಿತ ಕಂಬಳ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ
ನವದೆಹಲಿ, ಜುಲೈ 3: ಕರಾವಳಿ ಕರ್ನಾಟಕದ ಕಂಬಳ ಪ್ರೀಯರ ಬಹು ನಿರೀಕ್ಷಿತ ಕಂಬಳ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಈ ಮೂಲಕ ಕಂಬಳ ಆಚರಣೆಗೆ ಇದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದೆ.
ಇಂದು ರಾಷ್ಟ್ರಪತಿಗಳು 'ಕರ್ನಾಟಕ ಪ್ರಾಣಿ ಹಿಂಸಾಚಾರ ತಡೆಗಟ್ಟುವ (ತಿದ್ದುಪಡಿ) ವಿಧೇಯಕ - 2017'ಕ್ಕೆ ಅಂಕಿತ ಹಾಕುವ ಮೂಲಕ ತುಳುನಾಡಿನ ಜಾನಪದ ಕ್ರೀಡೆಗೆ ಮತ್ತೆ ಚಾಲನೆ ದೊರಕಿದಂತಾಗಿದೆ. ಇದರ ಜತೆಗೆ ಉತ್ತರ ಕರ್ನಾಟಕದ ಎತ್ತಿನಗಾಡಿ ಓಟಕ್ಕೂ ಹಾದಿ ಸುಗಮವಾಗಿದೆ.
ಈ ಹಿಂದೆ ರಾಜ್ಯ ಸರ್ಕಾರ ವಿಧಾನ ಮಂಡಲದಲ್ಲಿ ಕಂಬಳ ತಿದ್ದುಪಡಿ ವಿಧೇಯಕ ಮಂಡಿಸಿತ್ತು. ಎಲ್ಲರ ಒಮ್ಮತಾಭಿಪ್ರಾಯದಿಂದ ಈ ವಿಧೇಯಕವನ್ನು ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಿಕೊಡಲಾಗಿತ್ತು.
ಆದರೆ, ಇದು ಕೇಂದ್ರದ ವಿಷಯವಾಗಿದ್ದರಿಂದ ರಾಜ್ಯಪಾಲರು ಪ್ರಸ್ತಾವನೆಯನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಿದ್ದರು. ಇದೀಗ ಇಂದು ಕಂಬಳ ತಿದ್ದುಪಡಿ ವಿಧೇಯಕಕ್ಕೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ.
ಈ ಮೂಲಕ ತುಳುನಾಡಿನ ಕೋಣಗಳು ಮತ್ತೆ ಕೆಸರು ಗದ್ದೆಗಿಳಿಯಲಿದ್ದು ಕಂಬಳ ಪ್ರೀಯರ ಕಣ್ಮನ ತಣಿಸಲಿದೆ.