ಕೇಂದ್ರ ಸರ್ಕಾರದಿಂದ ಅಡಿಕೆ ಬೆಳೆಗಾರರಿಗೆ ಗಂಡಾಂತರ: ಐವನ್ ಡಿಸೋಜಾ
ಮಂಗಳೂರು, ಫೆಬ್ರವರಿ 17: ಅಡಿಕೆ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಸೃಷ್ಟಿಸಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಆರೋಪಿಸಿದ್ದಾರೆ .
ಮಂಗಳೂರಿನಲ್ಲಿ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸತ್ ಕಲಾಪ ಸಂದರ್ಭದಲ್ಲಿ ಅಡಿಕೆ ಬಳಕೆ ಕ್ಯಾನ್ಸರ್ ಗೆ ಕಾರಣವಾಗುತ್ತದೆಯೇ ? ಎಂದು ಬಿಹಾರದ ಸಿವಾನ್ ಸಂಸದ ಓಂಪ್ರಕಾಶ್ ಯಾದವ್ ಕೇಳಿದ ಪ್ರಶ್ನೆಗೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವರಾದ ಅನುಪ್ರಿಯಾ ಪಟೇಲ್, "ಅಡಿಕೆ ಕ್ಯಾನ್ಸರ್ ಕಾರಕ" ಎಂದು ಸ್ಪಷ್ಟ ಉತ್ತರ ನೀಡಿರುವುದು ದುರಂತ ಎಂದು ಅವರು ಹೇಳಿದರು.
ಯುಪಿಯಲ್ಲಿ ಅಡಿಕೆ ನಿಷೇಧವಿಲ್ಲ, ಬೆಳೆಗಾರರಿಗೆ ಯೋಗಿ ಭರವಸೆ
ಕೇಂದ್ರ ಸರಕಾರದಿಂದ ಅಡಿಕೆ ಬೆಳೆಗಾರರಿಗೆ ಅನ್ಯಾಯವಾಗುತ್ತಿದ್ದರೂ ರಾಜ್ಯದ ಸಂಸದರು ಧ್ವನಿ ಎತ್ತದಿರುವುದು ಖಂಡನೀಯ ಎಂದು ಅವರು ಕಿಡಿಕಾರಿದರು. ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಅಡಿಕೆ ಬೆಳೆ ಪ್ರದೇಶದ ಸಂಸದರ ವೇದಿಕೆ ಅಸ್ತಿತ್ವದಲ್ಲಿದೆ. ಆದರೆ ವೇದಿಕೆ ನಿಷ್ಕ್ರೀಯವಾಗಿದೆ ಎಂದು ಅವರು ಆರೋಪಿಸಿದರು.
"ರಾಜ್ಯದಲ್ಲಿ ಒಟ್ಟು 2.64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ವಾರ್ಷಿಕ 4.13 ಲಕ್ಷ ಟನ್ ಗಳಷ್ಟು ಅಡಿಕೆ ಬೆಳೆಯಲಾಗುತ್ತಿದೆ. ಅಡಿಕೆ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ," ಎಂದು ಹೇಳಿದ ಅವರು ಕೇಂದ್ರದ ಈ ಬೇಜವಾಬ್ದಾರಿ ಧೋರಣೆಯಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ದೂರಿದರು.
ರಾಜ್ಯದ ಅಡಿಕೆ ಬೆಳೆಗಾರರ ಹಿತ ಕಾಪಾಡುವ ದೃಷ್ಟಿಯಿಂದ ಕಾಂಗ್ರೆಸ್ ಕೇಂದ್ರ ಸರಕಾರದ ವಿರುದ್ದ ರಾಜ್ಯದಾದ್ಯಂತ ಹೋರಾಟ ಆರಂಭಿಸಲಿದೆ ಎಂದು ಅವರು ಹೇಳಿದರು.