ಮೇಲುಕೋಟೆ ಚಲುವನ ದರ್ಶನ ಪಡೆದ ಯಡಿಯೂರಪ್ಪ
ಮೇಲುಕೋಟೆ, ಜುಲೈ 27: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದರು.
ಮೇಲುಕೋಟೆಗೆ ಆಗಮಿಸಿದ ವೇಳೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಮಂಜುಶ್ರೀ ಮಾರ್ಗದರ್ಶನದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ, ತಹಶೀಲ್ದಾರ್ ಪ್ರಮೋದ್ ಪಾಟೀಲ್ ಪಾಂಡವಪುರ ತಾ.ಪಂ. ಇಒ ಮಹೇಶ್ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಹೂಗುಚ್ಛ ನೀಡಿ ಬರ ಮಾಡಿಕೊಂಡರು.
ತವರು ಬೂಕನಕೆರೆಗೆ ಹೊರಟ ಮುಖ್ಯಮಂತ್ರಿ ಯಡಿಯೂರಪ್ಪ
ದೇವಾಲಯಕ್ಕೆ ಮಧ್ಯಾಹ್ನ 1 ಗಂಟೆ ವೇಳೆಗೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಸಾಂಪ್ರದಾಯಿಕ ಪೂರ್ಣಕುಂಭ ಹಾಗೂ ಪಾದುಕಾಮರ್ಯಾದೆಯೊಂದಿಗೆ ಸ್ವಾಗತಿಸಲಾಯಿತು. ಚೆಲುವನಾರಾಯಣಸ್ವಾಮಿ, ಮಹಾಲಕ್ಷ್ಮಿ ಯದುಗಿರಿ ನಾಯಕಿ ಭಗವದ್ರಾಮಾನುಜರ ದರ್ಶನಪಡೆದ ನಂತರ ಪಾತಾಳಾಂಕಣದಲ್ಲಿ ರಾಜಾಶೀರ್ವಾದ ಮಾಡುವುದರೊಂದಿಗೆ ಬೀಳ್ಕೊಡಲಾಯಿತು. ಅರ್ಚಕರಾದ ಯಾಮುನಾಚಾರ್ಯ, ವರದರಾಜಭಟ್, ಸ್ಥಾನೀಕರಾದ ಶ್ರೀನಿವಾಸನರಸಿಂಹನ್ ಗುರೂಜಿ, ಎಸ್.ತಿರುನಾರಾಯಣ ಅಯ್ಯಂಗಾರ್, ಡಾ.ಶಲ್ವಪ್ಪಿಳ್ಳೆಐಯಂಗಾರ್, ಕರಗಂ ರಂಗಪ್ರಿಯ, ರಾಮಪ್ರಿಯ, ಪರಿಚಾರಕರಾದ ಪಾರ್ಥ, ಕೈಂಕರ್ಯಪರ ವಿದ್ವಾನ್ ಶ್ರೀರಂಗಂ ರಾಮಪ್ರಿಯ ಮತ್ತಿತರರು ಇದ್ದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, "ಮೇಲುಕೋಟೆ ಶ್ರೀ ಕ್ಷೇತ್ರದಲ್ಲಿ ಅನ್ನದಾನ ಭವನದ ನಿರ್ಮಾಣಕ್ಕೆ ತಕ್ಷಣ 2 ಕೋಟಿ ರೂ ಬಿಡುಗಡೆ ಮಾಡುತ್ತೇನೆ. ನಾನೇ ಆಗಮಿಸಿ ಭೂಮಿ ಪೂಜೆ ನೆರವೇರಿಸುತ್ತೇನೆ. ತಿರುಪತಿಗೆ ಸಮಾನ ಮಹತ್ವವಿರುವ ರಾಮಾನುಜರ ತಪೋಭೂಮಿ ಅಭಿವೃದ್ಧಿಗೆ ಎಲ್ಲಾ ಅಗತ್ಯ ಕ್ರಮ ಜರುಗಿಸಲಾಗುತ್ತದೆ. ಈ ಹಿಂದೆ ಬಿಡುಗಡೆ ಮಾಡಿದ್ದ ಅನುದಾನ ಬಳಕೆಯ ಬಗ್ಗೆಯೂ ಪರಿಶೀಲನೆ ಮಾಡುತ್ತೇನೆ. ಚೆಲುವನಾರಾಯಣಸ್ವಾಮಿ ನನ್ನ ಆರಾಧ್ಯ ದೈವ. ಆ ಭಗವಂತನ ಕ್ಷೇತ್ರಕ್ಕೆ ಆಗಮಿಸಿದ್ದೇನೆ. ಸ್ವಾಮಿಯಲ್ಲಿ ಮಳೆ- ಬೆಳೆ ಬಿದ್ದು ಕರುನಾಡು ಸುಭೀಕ್ಷವಾಗಿರಲಿ ಅವಧಿ ಪೂರ್ಣಗೊಳಿಸಿ ಉತ್ತಮ ಜನಪರ ಆಡಳಿತ ಕೊಡುವ ಶಕ್ತಿ ಕರುಣಿಸು ಎಂದು ಪ್ರಾರ್ಥನೆ ಮಾಡಿದ್ದೇನೆ" ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿ: ಪ್ರಧಾನಿ ಮೋದಿ ಮೌನ!
ಇದೇ ವೇಳೆ ಮಂಡ್ಯದ ಗವಿಮಠಕ್ಕೂ ಯಡಿಯೂರಪ್ಪ ಭೇಟಿ ನೀಡಿದ್ದರು. "ಗವಿಮಠದ ಸ್ವತಂತ್ರ ಸಿದ್ದಲಿಂಗೇಶ್ವರನಿಗೆ ನಮ್ಮ ತಂದೆ ವರ್ಷಾನುಗಟ್ಟಲೇ ವಿಶೇಷ ಪೂಜೆ ಸಲ್ಲಿಸಿದ್ದರು. ನಾನು ದೇವರ ಅನುಗ್ರಹದಿಂದ ಸಿಎಂ ಆಗಿದ್ದೇನೆ. ಮಂಡ್ಯ ಜಿಲ್ಲೆ ಹಾಗೂ ಕೆ.ಆರ್.ಪೇಟೆ ತಾಲ್ಲೂಕು ಅಭಿವೃದ್ಧಿ ಮಾಡುವುದು ನನ್ನ ಕರ್ತವ್ಯ" ಎಂದು ಹೇಳಿದರು.