ನಾವು ಚೆಡ್ಡಿ ಹಾಕ್ಕೋತಿವೋ, ಬುಂಡಾ ಬುಂಡಾ ತಿರುಗುತ್ತೇವೋ ಇವರಿಗ್ಯಾಕ್ರೀ: ಮಾಜಿ ಶಾಸಕ ಕೆ. ಸುರೇಶ್ಗೌಡ
ಮಂಡ್ಯ, ನವೆಂಬರ್ 23: ನಾವು ಚೆಡ್ಡಿ ಹಾಕಿಕೊಳ್ಳುತ್ತೇವೋ ಅಥವಾ ಬುಂಡಾ ಬುಂಡಾ ತಿರುಗುತ್ತೇವೆ ಅವರಿಗೆ ಯಾಕೆ? ಇದೆಲ್ಲಾ ಮಾತನಾಡುವುದನ್ನು ಬಿಟ್ಟು ಮೊದಲು ರೈತರ ಸಂಕಷ್ಟಕ್ಕೆ ಸ್ಪಂದಿಸುವುದನ್ನು ಕಲಿಯಲಿ ಎಂದು ಮಾಜಿ ಶಾಸಕ ಕೆ. ಸುರೇಶ್ಗೌಡ ಸಚಿವ ಚಲುವರಾಯಸ್ವಾಮಿಗೆ ತಿರುಗೇಟು ನೀಡಿದರು.
ಸುದ್ಧಿಗಾರರೊಂದಿಗೆ ಮಾತನಾಡಿ, ಬಿಜೆಯವರು ಹೇಳಿದರೆ ಜೆಡಿಎಸ್ನವರು ಚೆಡ್ಡಿ ಬೇಕಾದರೂ ಹಾಕ್ತಾರೆ ಎಂಬ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾವು ಚೆಡ್ಡಿ ಹಾಕ್ತೇವೋ, ಕುಣಿತೀವೋ, ಮಲಗುತ್ತೇವೋ ಚಲುವರಾಯಸ್ವಾಮಿಗೆ ಯಾಕೆ ಬೇಕು, ರೈತರು ಸಾಯುತ್ತಿದ್ದಾರೆ. ಜನರ ಕೆಲಸ ಮಾಡು ಅಂದರೆ ಲೂಟಿ ಹೊಡೆಯುತ್ತಿದ್ದಾರೆ. ಇದಕ್ಕೆ ನಾವೇನು ಹೇಳಬೇಕು ಎಂದು ಹರಿಹಾಯ್ದರು.

ಚಲುವರಾಯಸ್ವಾಮಿ ಚೆಡ್ಡಿಯನ್ನೇ ಹಾಕಲ್ಲ, ಅವರಿಗೆ ಚೆಡ್ಡಿ ಹಾಕ್ಕೋ ಅಥವಾ ಕಾಚ ಹಾಕ್ಕೋ ಎಂದು ಡಿ.ಕೆ. ಶಿವಕುಮಾರ್ ಹೇಳಬೇಕಾ, ಸಿದ್ದರಾಮಯ್ಯ ಹೇಳಬೇಕಾ? ಇವರಿಗೆ ಯಾರೆ ನಮ್ಮ ವಿಚಾರ ಎಂದು ಖಾರವಾಗಿ ಪ್ರಶ್ನಿಸಿದರು.
ಇವರಿಗೆ ಪ್ಯಾಂಟ್ ಹಾಕಿಕೊಳ್ಳದನ್ನು ಕಲಿಸಿಕೊಟ್ಟವರು ಯಾರು, ಚೆಡ್ಡಿ ಹಾಕಿದ್ರೆ ತೊಂದರೆ ಆಗುತ್ತೆ ಅಂತ ಬಹುಶಃ ಅವರು ಚೆಡ್ಡಿನೇ ಹಾಕುತ್ತಿಲ್ಲ ಅನ್ನಿಸುತ್ತೆ ಎಂಟು ವ್ಯಂಗ್ಯವಾಡಿದರು.
ನಿಜವಾದ ಜಾತಿವಾದಿ ಪಕ್ಷ ಎಂದರೆ ಅದು ಕಾಂಗ್ರೆಸ್. ಇದನ್ನು ಬರೆದಿಟ್ಟುಕೊಳ್ಳಿ ಎಂದ ಅವರು, ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಮಾತನಾಡಿದರೆ ದೇಶದ ಮಟ್ಟದಲ್ಲಿ ಲೀಡರ್ ಆಗಬಹುದು ಎಂಬ ಭ್ರಮೆಯಲ್ಲಿ ಚಲುವರಾಯಸ್ವಾಮಿ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಒಂಟಿಯಲ್ಲ, ಪಕ್ಷದಿಂದ ಯಾರೇ ಹೋದರೂ ಕುಮಾರಸ್ವಾಮಿ ಪರವಾಗಿ ಕಾರ್ಯಕರ್ತರಿದ್ದಾರೆ. ಕಾಂಗ್ರೆಸ್ನವರು ಗಂಜಿ ಗಿರಾಕಿಗಳು ಎಂದು ಟೀಕಿಸಿದರು.
ಕೆರೆ ನುಂಗಿರುದು ಸುಳ್ಳಾ?
ಚಲುವರಾಯಸ್ವಾಮಿ ಅವರು ಮಾಕಳಿ ಕೆರೆ ನುಂಗಿರುವುವುದು ಸುಳ್ಳಾ ಎಂದು ಪ್ರಶ್ನಿಸಿದ ಅವರು, ಕೆರೆ ನುಂಗಿರೋದರ ಬಗ್ಗೆ ತನಿಖೆ ಆಗಲಿ, ಚಲುವರಾಯಸ್ವಾಮಿ ಸಾಚಾನಾ, ಇಂತಹವರಿಂದ ನಾವು ಪಾಠ ಕಲಿಯಬೇಕು ಎಂದು ಗುಡುಗಿದರು.
ಕಾಂಗ್ರೆಸ್ನವರು ಕರೆಂಟ್ ತಯಾರು ಮಾಡುತ್ತಿಲ್ಲ. ನಮಗೆ ಸುಳ್ಳೇ ಅವರ ಮನೆ ದೇವ್ರು ಎಂದು ಹೇಳುತ್ತಾರೆ. ಆದರೆ ಅವ್ರ ಮನೆ ದೇವ್ರೇ ಸುಳ್ಳು. ಮುಂದೆ ಈ ರಾಜ್ಯ 2ನೇ ಶ್ರೀಲಂಕಾ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕರಾದ ಸಿ.ಎಸ್. ಪುಟ್ಟರಾಜು, ಡಿ.ಸಿ. ತಮ್ಮಣ್ಣ, ಡಾ. ಕೆ. ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರ ಇತರರು ಇದ್ದರು.












Click it and Unblock the Notifications