ಮಂಡ್ಯ ಕಾಂಗ್ರೆಸ್ ಮುಖಂಡರಿಗೆ ಕುಮಾರಸ್ವಾಮಿ ಮಾತಿನ ಚಾಟಿ
Recommended Video

ಬೆಂಗಳೂರು, ಮಾರ್ಚ್ 21: ಮಂಡ್ಯದ ಕೆಲವು ಕಾಂಗ್ರೆಸ್ ಮುಖಂಡರು ನಮ್ಮ ಬೆನ್ನಿಗೆ ಚೂರಿ ಹಾಕುತಿದ್ದಾರೆ, ನನಗೆ ಅವರ ಅವಶ್ಯಕತೆ ಇಲ್ಲ, ನಮ್ಮ ಕಾರ್ಯಕರ್ತರು ನನಗೆ ಸಾಕು ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಪದ್ಮನಾಭನಗರದಲ್ಲಿ ಮಾತನಾಡಿದ ಅವರು, ಬೆನ್ನಿಗೆ ಚೂರಿ ಇರಿಯಲು ಯತ್ನಿಸುತ್ತಿರುವ ಮಂಡ್ಯದ ಕೆಲವು ಕಾಂಗ್ರೆಸ್ ಮುಖಂಡರ ಮುಂದೆ, ಸ್ವಾಭಿಮಾನ ಕಳೆದುಕೊಂಡು ನಾನು ಸಹಾಯ ಕೇಳಲು ಹೋಗುವುದಿಲ್ಲ ಎಂದು ಕುಮಾರಸ್ವಾಮಿ ಖಾರವಾಗಿ ನುಡಿದಿದ್ದಾರೆ.
ಮೂಲಕಾಂಗ್ರೆಸ್ಸಿಗರು ನಿಖಿಲ್ ಗೆ ಆಶೀರ್ವಾದ ಮಾಡಿದ್ದಾರೆ, ಆದರೆ ಕೆಲವು ಹಿಂಬಾಗಿಲಿನಿಂದ ಬಂದವರು ಬಹಳ ಮುಂದೆ ಹೋಗಿಬಿಟ್ಟಿದ್ದಾರೆ, ನಿಖಿಲ್ ಗೆ ಆಶೀರ್ವಾದ ಮಾಡಿರುವ ಕಾಂಗ್ರೆಸ್ಸಿಗರು ನಮಗೆ ಸಾಕು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಈಗಾಗಲೇ ಮಂಡ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ನಡುವೆ ಬಿರುಕು ಮೂಡಿದೆ ಈ ಸಮಯದಲ್ಲಿ ಕುಮಾರಸ್ವಾಮಿ ಅವರು ನೀಡಿರುವ ಈ ಖಾರವಾದ ಹೇಳಿಕೆ ಆ ಬಿರುಕನ್ನು ಮತ್ತಷ್ಟು ದೊಡ್ಡದು ಮಾಡುವ ಸಾಧ್ಯತೆ ಇದೆ.

ಮಾರ್ಚ್ 25ರಂದು ನಾಮಪತ್ರ ಸಲ್ಲಿಕೆ
ಮುಂದುವರೆದು ಮಾತನಾಡಿರುವ ಕುಮಾರಸ್ವಾಮಿ, ಇಂದು ಪ್ರಾಥಮಿಕ ನಾಮಪತ್ರ ಸಲ್ಲಿಕೆ ಮಾಡಬೇಕಾಗಿತ್ತು, ಆದರೆ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ ಎಂಬ ಕಾರಣದಿಂದ ಒಂದೇ ನಾಮಪತ್ರವನ್ನು ಮಾರ್ಚ್ 25ರಂದು ಸಲ್ಲಿಸಲಾಗುತ್ತದೆ ಎಂದು ಅವರು ಹೇಳಿದರು.

ತುಮಕೂರು ಅಥವಾ ಬೆಂ.ಉತ್ತರದಿಂದ ದೇವೇಗೌಡ
ದೇವೇಗೌಡ ಅವರ ಸ್ಪರ್ಧೆಯ ಬಗ್ಗೆಯೂ ಮಾತನಾಡಿದ ಕುಮಾರಸ್ವಾಮಿ, ದೇವೇಗೌಡ ಅವರು ಬೆಂಗಳೂರು ಉತ್ತರ ಅಥವಾ ತುಮಕೂರಿನಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಿದರು. ಅದರ ನಿರ್ಧಾರವನ್ನು ದೇವೇಗೌಡ ಅವರು ಮಾಡಲಿದ್ದಾರೆ, ಹಾಸನದಲ್ಲಿ ಅವರು ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.

ಮಾರ್ಚ್ 31ಕ್ಕೆ ಬೃಹತ್ ಸಮಾವೇಶ
ಮಾರ್ಚ್ 31ಕ್ಕೆ ಭಾರಿ ದೊಡ್ಡ ಸಮಾವೇಶ ಮಾಡಲಿದ್ದೇವೆ, ನೆಲಮಂಗಲ ಅಥವಾ ಬೆಂಗಳೂರಿನಲ್ಲಿ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಸುಮಾರು ಐದು ಲಕ್ಷ ಜನ ಸೇರುವ ನಿರೀಕ್ಷೆ ಇದೆ, ಅಂದಿನಿಂದಲೇ ಮೈತ್ರಿಯ ಅಧಿಕೃತ ಪ್ರಚಾರ ಆರಂಭವಾಗುತ್ತದೆ ಎಂದು ಅವರು ಹೇಳಿದರು.

ಮಂಡ್ಯದಲ್ಲಿ ಜಿದ್ದಾ-ಜಿದ್ದಿ
ಮಂಡ್ಯ ರಾಜಕಾರಣ ದಿನೇ-ದಿನೇ ಕುತೂಹಲ ಕೆರಳಿಸುತ್ತಿದೆ. ಸುಮಲತಾ ಅವರು ನಿಖಿಲ್ ಕುಮಾರಸ್ವಾಮಿ ವಿರುದ್ಧ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿದ್ದು, ಜಿದ್ದಾ-ಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಕೆಲವು ಕಾಂಗ್ರೆಸ್ ಮುಖಂಡರು ಸುಮಲತಾ ಅವರಿಗೆ ಬೆಂಬಲ ಘೋಷಿಸಿರುವುದು ಕುಮಾರಸ್ವಾಮಿ ಅವರನ್ನು ಕೆರಳಿಸಿದೆ.












Click it and Unblock the Notifications