ಕೆಆರ್ಎಸ್ ನೀರಿನ ಮಟ್ಟ ಕುಸಿತ: ಮುಳುಗಡೆಯಾಗಿದ್ದ ವೇಣುಗೋಪಾಲಸ್ವಾಮಿ ದೇಗುಲ ಗೋಚರ
ಮಂಡ್ಯ, ಮೇ 25 : ಮಂಡ್ಯಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 81 ಅಡಿಗೆ ಕುಸಿಯುವ ಮೂಲಕ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದ ನೀರಿನ ಮಟ್ಟದಲ್ಲಿ 23 ಅಡಿಗಳಷ್ಟು ಕಡಿಮೆ ನೀರು ಸಂಗ್ರಹವಾಗಿದೆ. ಇದೇ ವೇಳೆ ಮುಳುಗಡೆಯಾಗಿದ್ದ ವೇಣುಗೋಪಾಲಸ್ವಾಮಿ ದೇಗುಲ ಗೋಚರವಾಗಿದೆ.
ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಶನಿವಾರ ಜಲಾಶಯದಲ್ಲಿ 81.80 ಅಡಿಯಷ್ಟು ನೀರು ಸಂಗ್ರಹವಾಗಿದೆ ಕಳೆದ ವರ್ಷ ಇದೇ ದಿನ ಆಣೆಕಟ್ಟೆಯಲ್ಲಿ 104.77 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಪ್ರಸ್ತುತ ಜಲಾಶಯಕ್ಕೆ 404 ಕ್ಯುಸೆಕ್ ನೀರು ಮಾತ್ರ ಹರಿದು ಬರುತ್ತಿದ್ದು ಅಣೆಕಟ್ಟೆಯಿಂದ 3,113ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ಒಳಹರಿವು 2,872 ಕ್ಯುಸೆಕ್ ಇದ್ದರೆ, 2,251 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿತ್ತು.

ಕಳೆದ ಏಪ್ರಿಲ್ 20ರಂದು 90 ಅಡಿಗೆ ಕುಸಿದಿತ್ತು. ಆದರೆ ಇದೀಗ 81 ಅಡಿಗಳ ಅಂತರಕ್ಕೆ ಕುಸಿದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿದ ಪರಿಣಾಮ ಡ್ಯಾಂನಲ್ಲಿ ಮುಳುಗಡೆಯಾಗಿದ್ದ ವೇಣುಗೋಪಾಲಸ್ವಾಮಿ ದೇವಾಲಯ 5 ವರ್ಷದ ನಂತರ ಮತ್ತೆ ಗೋಚರವಾಗಿದೆ.
ಶತಮಾನದಷ್ಟು ಹಳೆಯದಾದ ದೇವಾಲಯ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿತ್ತು. ಸಾಮಾನ್ಯವಾಗಿ 85 ಅಡಿಗಿಂತ ಕಡಿಮೆ ಪ್ರಮಾಣದಲ್ಲಿ ನೀರಿನ ಕುಸಿತ ಕಂಡುಬಂದಲ್ಲಿ ಈ ದೇವಾಲಯ ಗೋಚರವಾಗುತ್ತದೆ. ದೇವಾಲಯದ ವಾಸ್ತು ಶಿಲ್ಪವನ್ನು ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತದೆ.
ಶತಮಾನದ ಹಿಂದೆ ಕೆ.ಆರ್.ಎಸ್. ಕನ್ನಂಬಾಡಿ, ಆನಂದೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ದೇವಾಲಯ ಜಲಾಶಯದೊಳಗೆ ಮುಳುಗುತ್ತಿದ್ದಂತೆ ಅದರಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮೂಲಮೂರ್ತಿ ವೇಣುಗೋಪಾಲಸ್ವಾಮಿ ವಿಗ್ರಹವನ್ನು ಸಮೀಪದ ಮಜ್ಜಿಗೆಪುರಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಿದ್ದಾರೆ.

ಇತ್ತೀಚೆಗೆ ಇದೇ ದೇವಾಲಯದ ಮಾದರಿಯಲ್ಲಿ ದಿ. ಹರಿಕೋಡೆ ಅವರು ಕೃಷ್ಣರಾಜಸಾಗರದ ಹಿನ್ನೀಹಿನ ಪ್ರದೇಶದ ಮೇಲ್ಪಾಗದಲ್ಲಿ ನೂತನ ದೇವಾಲಯ ನಿರ್ಮಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿರುವುದು ವಿಶೇಷವಾಗಿದೆ.
ಕೈ ಕೊಟ್ಟ ಪೂರ್ವ ಮುಂಗಾರು
ಮುಂಗಾರು ಪೂರ್ವ ಮಳೆ ಈ ಬಾರಿ ಕೈ ಕೊಟ್ಟಿದೆ. ಕಳೆದ ವರ್ಷ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿತ್ತು. ಇದರ ಪರಿಣಾಮ ಬೇಸಿಗೆ ಅವಧಿಯಲ್ಲೇ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿತ್ತು. ಈ ಬಾರಿ ಮಳೆಯ ಕೊರತೆಯಿಂದ ದಿನೇ ದಿನೇ ಜಲಾಶಯದ ನೀರಿನ ಮಟ್ಟ ಕುಸಿಯತೊಡಗಿದೆ.
ಪ್ರಸ್ತುತ ಜಲಾಶಯದಲ್ಲಿ ಕುಡಿಯುವ ನೀರಿಗೆ ಅಗತ್ಯವಿರುವಷ್ಟು ನೀರು ಮಾತ್ರ ಸಂಗ್ರಹವಾಗಿದೆ. ಬೇಸಿಗೆ ಮುಗಿಯುವವರೆಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ. ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಮನವಾದರೆ ರೈತರು ನಿರಾಳರಾಗಲಿದ್ದಾರೆ. ಕೃಷಿ ಚಟುವಟಿಕೆ ಆರಂಭಕ್ಕೆ ಸಿದ್ಧರಾಗಿರುವ ರೈತರು ಈಗ ಮುಂಗಾರು ಮಳೆಯತ್ತ ದೃಷ್ಟಿ ಹರಿಸಿದ್ದಾರೆ.

2018 ರಿಂದ ಇಲ್ಲಿಯವರೆಗೂ ನಿರೀಕ್ಷೆಯಂತೆ ಒಂದೆರಡು ವರ್ಷ ದಾಖಲೆಯ ಮಳೆಯಾಗಿದೆ. ನಾಲ್ಕು ವರ್ಷದಲ್ಲಿ ನೂರಾರು ಟಿಎಂಸಿ ಅಡಿಯಷ್ಟು ನೀರು ಹರಿದು ಸಮುದ್ರ ಪಾಲಾಗಿದೆ. ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದಿರುವ ಕಾರಣ ಏಪ್ರಿಲ್ ತಿಂಗಳು ಮುಗಿಯಲಾರಂಭಿಸುತ್ತಿದ್ದಂತೆ ಕೆಆರ್ಎಸ್ ಜಲಾಶಯದಲ್ಲಿ ನೀರು ಎಷ್ಟಿದೆ ಎನ್ನುವುದರ ಮೇಲೆ ಎಲ್ಲರ ಗಮನ ಹರಿಯುತ್ತದೆ.
ಉತ್ತಮ ಮಳೆ ಬಂದಾಗ ನೀರನ್ನು ಸಂರಕ್ಷಿಸಿಡಲು ಕೆರೆಗಳಿಗೆ ನಾಲಾ ಸಂಪರ್ಕ ಜಾಲ, ಹಲವೆಡೆ ಹೊಸ ಕೆರೆಗಳ ನಿರ್ಮಾಣ ಮಾಡುವ, ಕೆರೆಗಳಲ್ಲಿ ತುಂಬಿರುವ ಹೂಳೆತ್ತಿಸಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ , ಅಂತರ್ಜಲ ವೃದ್ಧಿಗೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸದಿರುವುದರಿಂದ ಬೇಸಿಗೆಯಲ್ಲಿ ನೀರಿನ ಕೊರತೆಯನ್ನು ಎದುರಿಸುತ್ತಲೇ ಇರುವಂತಾಗಿದೆ.












Click it and Unblock the Notifications