ಕಬ್ಬಿನ ಗದ್ದೆಯಲ್ಲಿ ಮುದ್ದಾದ ಮೂರು ಚಿರತೆ ಮರಿಗಳು ಪ್ರತ್ಯಕ್ಷ
ಮಂಡ್ಯ, ಅಕ್ಟೋಬರ್ 31: ಕಬ್ಬಿನ ಗದ್ದೆಯಲ್ಲಿ ಮುದ್ದು ಮುದ್ದಾದ ಮೂರು ಚಿರತೆ ಮರಿಗಳು ಸಿಕ್ಕಿದ್ದು, ಗ್ರಾಮಸ್ಥರು ಅವನ್ನು ನೋಡಲು ಮುಗಿಬಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಬಿ.ಹೊಸೂರು ಕಾಲೋನಿಯ ಗ್ರಾಮದಲ್ಲಿ ಮೂರು ಚಿರತೆ ಮರಿಗಳು ಕಾಣಿಸಿಕೊಂಡಿವೆ.
ಗ್ರಾಮದ ಕುಮಾರಪ್ಪ ಎಂಬುವವರ ಕಬ್ಬಿನ ಗದ್ದೆಯಲ್ಲಿ ಈ ಚಿರತೆ ಮರಿಗಳು ಸಿಕ್ಕಿದ್ದು, ಇವನ್ನು ನೋಡಲು ಜನರು ಮುಗಿಬಿದ್ದ ದೃಶ್ಯ ಕಂಡುಬಂತು. ಅಷ್ಟೇ ಅಲ್ಲದೆ ಚಿರತೆ ಮರಿಗಳನ್ನು ಎತ್ತಿಕೊಂಡು ಸೆಲ್ಫೀ ತೆಗೆದುಕೊಳ್ಳಲು ನಾ ಮುಂದು-ತಾ ಮುಂದು ಅಂತ ಪೈಪೋಟಿಯನ್ನೂ ನಡೆಸಿದ್ದಾರೆ.
ಕಬ್ಬಿನ ಗದ್ದೆಯಲ್ಲಿ ಕಂಡ ಚಿರತೆ ಮರಿ ಮುದ್ದಾಡಿದ ಗ್ರಾಮಸ್ಥರು
ನಂತರ ಅರಣ್ಯ ಇಲಾಖೆಗೆ ಗ್ರಾಮಸ್ಥರು ವಿಷಯ ಮುಟ್ಟಿಸಿದ್ದು, ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಚಿರತೆ ಮರಿಗಳನ್ನು ಅರಣ್ಯಕ್ಕೆ ಬಿಡಲು ಕೊಂಡೊಯ್ದಿದ್ದಾರೆ. ತಾಯಿ ಚಿರತೆಯಿಂದ ಯಾರಿಗೂ ತೊಂದರೆ ಆಗಬಾರದೆಂದು ಅದೇ ಜಮೀನಿನಲ್ಲಿ ಸೆರೆಗೆ ಬೋನ್ ಇಟ್ಟಿದ್ದಾರೆ.
Recommended Video
ಇದೇ ಜನವರಿಯಲ್ಲೂ ಮೈಸೂರಿನ ಕೆ.ಆರ್.ನಗರ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ಕಬ್ಬು ಕಟಾವು ವೇಳೆ ಚಿರತೆ ಮರಿಯೊಂದು ಸಂತೋಷ್ ಎಂಬುವರ ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡಿತ್ತು. ಅದನ್ನು ಕಂಡು ಗ್ರಾಮಸ್ಥರು ಎತ್ತಿ ಮುದ್ದಾಡಿದ್ದರು. ಒಂದು ತಿಂಗಳ ಆ ಗಂಡು ಮರಿಯನ್ನು ರಕ್ಷಣೆ ಮಾಡಲಾಗಿತ್ತು.