ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡವಿದೆ: ಸುನೀತಾ ಪುಟ್ಟಣ್ಣಯ್ಯ
ಮಂಡ್ಯ, ಮಾರ್ಚ್ 12: "ಮೇಲುಕೋಟೆ ಕ್ಷೇತ್ರದಿಂದ 'ಸ್ವರಾಜ್ ಇಂಡಿಯಾ' ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ನಮ್ಮ ಕುಟುಂಬದಿಂದ ನಾನು ಅಥವಾ ಪುತ್ರ ಕಣಕ್ಕಿಳಿಯಬೇಕೆಂಬುದು ಕಾರ್ಯಕರ್ತರ ಒತ್ತಡವಾಗಿದೆ," ಎಂದು ಶಾಸಕ, ರೈತನಾಯಕ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯನವರ ಪತ್ನಿ ಸುನೀತಾ ಪುಟ್ಟಣ್ಣಯ್ಯ ಹೇಳಿದ್ದಾರೆ.
"ತಮ್ಮ ಕುಟುಂಬದಿಂದಲೇ ಯಾರಾದರೂ ಸ್ಪರ್ಧಿಸಬೇಕೇ ಅಥವಾ ಬೇರೆಯವರು ಕಣಕ್ಕಿಳಿಯಬೇಕೇ ಎಂಬ ಬಗ್ಗೆ ರೈತಸಂಘ, ಹಸಿರು ಸೇನೆ, ಸ್ವರಾಜ್ ಇಂಡಿಯಾದ ಮುಖಂಡರು ಹಾಗೂ ಕಾರ್ಯಕರ್ತರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವೀಗ ಸಾವಿನ ಸೂತಕದಲ್ಲಿದ್ದೇವೆ. ಮನೆ ತುಂಬಾ ಜನ ಇರುವುದರಿಂದ ರಾಜಕೀಯ, ಚುನಾವಣೆ ಬಗ್ಗೆ ಚರ್ಚಿಸುವುದು ಸಮಂಜಸವಲ್ಲ. ಹೀಗಾಗಿ ಎರಡ್ಮೂರು ದಿನಗಳಲ್ಲಿ ಚುನಾವಣೆ ಸ್ಪರ್ಧೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ," ಎಂದು ಹೇಳಿದರು.
ತಮ್ಮ ಪತಿ ಕೆ.ಎಸ್. ಪುಟ್ಟಣ್ಣಯ್ಯ ಅವರ ಸಾವಿನಿಂದಾಗಿ ಪಾಂಡವಪುರ ತಾಲೂಕು ಬೇಬಿಬೆಟ್ಟದಲ್ಲಿ ನಡೆದ ದನಗಳ ಜಾತ್ರೆಯಲ್ಲಿ ವಿಜೇತ ರಾಸುಗಳ ಮಾಲೀಕರಿಗೆ ಬಹುಮಾನ ವಿತರಣೆ ಸಾಧ್ಯವಾಗಿಲ್ಲ. ಹೀಗಾಗಿ ಜಾತ್ರೆಗೆ ರಾಸುಗಳೊಂದಿಗೆ ಬಂದಿದ್ದ ಎಲ್ಲ ರೈತರಿಗೂ ಮಾ.16ರಂದು ಬೇಬಿಬೆಟ್ಟದಲ್ಲಿ ಗೌರವ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ರಾಮನಗರ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ನಾನಾ ಜಿಲ್ಲೆಗಳಿಂದ ರೈತರು ತಮ್ಮ ಜಾನುವಾರುಗಳೊಂದಿಗೆ ಜಾತ್ರೆಗೆ ಬಂದಿದ್ದರು. 186 ಜೋಡಿ ರಾಸುಗಳು ಬಂದಿದ್ದವು. ಆದರೆ, ಪುಟ್ಟಣ್ಣಯ್ಯ ಅವರ ಸಾವಿನ ಹಿನ್ನೆಲೆಯಲ್ಲಿ ಎಲ್ಲ ರೈತರು ವಾಪಸ್ಸಾಗಿದ್ದರು. ಹೀಗಾಗಿ ಅವರೆಲ್ಲರನ್ನೂ ಪುನಃ ಕರೆದು ಧನ್ಯವಾದ ಹೇಳಿ ಪ್ರೀತಿಯ ಬೀಳ್ಕೊಡುಗೆ ನೀಡಲಾಗುತ್ತದೆ ಎಂದು ಹೇಳಿದರು.












Click it and Unblock the Notifications