ನಾಲ್ಕು ವರ್ಷಗಳಲ್ಲಿ ನೀವು ಮಾಡಿದ ಸಾಧನೆ ಏನು? ಶಾಸಕರಿಗೆ ತಡಗವಾಡಿ ಗ್ರಾಮಸ್ಥರಿಂದ ತರಾಟೆ
ಮಂಡ್ಯ, ಡಿಸೆಂಬರ್, 06: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳು ಹಳ್ಳಿಗಳ ಕಡೆಗೆ ಮುಖ ಮಾಡಲು ಆರಂಭಿಸಿದ್ದಾರೆ. ಇಷ್ಟು ದಿನ ಇಲ್ಲದ ಅಭಿವೃದ್ಧಿ ಕಾರ್ಯಗಳಿಗೆ ಇದೀಗ ಗುದ್ದಲಿ ಪೂಜೆ ಮಾಡಲು ಬರುತ್ತಿದ್ದಾರೆ. ಹಾಗೆಯೇ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆಗೆ ಬಂದ ಶಾಸಕನಿಗೆ ಗ್ರಾಮಸ್ಥರು ಘೇರಾವು ಹಾಕಿದ ಘಟನೆ ಮಂಡ್ಯ ತಾಲೂಕಿನ ತಡಗವಾಡಿ ಗ್ರಾಮದಲ್ಲಿ ನಡೆದಿದೆ.
ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಗ್ರಾಮಸ್ಥರು ಘೇರಾವು ಹಾಕಿ ತರಾಟೆಗೆ ತೆಗೆದುಕೊಂಡರು. ಕಳೆದ ನಾಲ್ಕೂವರೆ ವರ್ಷಗಳಿಂದಲೂ ನಮ್ಮ ಗ್ರಾಮಕ್ಕೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಆದರೆ ಇದೀಗ ಚುನಾವಣೆ ಹತ್ತಿರ ಬರುತ್ತಿದೆ ಎನ್ನುವ ಕಾರಣಕ್ಕೆ ನಮ್ಮ ಗ್ರಾಮಕ್ಕೆ ಬಂದಿದ್ದೀರಿ. ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಲವಾರು ಬಾರಿ ದೂರವಾಣಿ ಕರೆ ಮಾಡಿದ್ದರೂ ಸಹ ಸ್ಪಂಧಿಸಿಲ್ಲ, ಅಹವಾಲು ಕೇಳಿಲ್ಲ. ಈಗ ಯಾಕೆ ಬಂದಿದ್ದೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟು ವರ್ಷಗಳ ಕಾಲ ಏನು ಮಾಡಿದ್ದೀರಿ?
ಇಷ್ಟು ವರ್ಷಗಳ ಕಾಲ ಏನು ಮಾಡಿದ್ದೀರಿ? ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀರಿ? ಚುನಾವಣೆ ಹತ್ತಿರ ಬಂದಿದೆ ಎಂಬ ಕಾರಣಕ್ಕೆ ಈಗ ಬಂದಿದ್ದೀರಿ. ನಾಲ್ಕೂವರೆ ವರ್ಷಗಳ ಕಾಲ ಗುದ್ದಲಿಪೂಜೆ ಮಾಡದ ನೀವು ಈಗ ಬಂದು ತರಾತುರಿಯಲ್ಲಿ ಬಂದಿದ್ದೀರಿ ಎಂದು ದೂರಿದರು. ಈ ಮಧ್ಯೆ ಗ್ರಾಮಸ್ಥರು ಮತ್ತು ಶಾಸಕರ ನಡುವೆ ವಾಗ್ವಾದವೂ ನಡೆಯಿತು. ಯಾವ ಕೆಲಸ ಮಾಡಿಲ್ಲ ಹೇಳಿ ಎಂದು ಶಾಸಕರು ಕೇಳಿದರೆ, ನಮ್ಮೂರಿಗೆ ಏನು ಕೆಲಸ ಮಾಡಿದ್ದೀರಿ? ಎಂದು ಗ್ರಾಮಸ್ಥರು ತರಾಟೆ ತೆಗೆದುಕೊಂಡರು.

ಸುರೇಶ್ಗೌಡ ಎಲ್ಲರನ್ನೂ ಕಡೆಗಣಿಸಿದ್ದಾರೆ
ನಾನೂ ಸೇರಿದಂತೆ ಸಾವಿರಾರು ಕಾರ್ಯಕರ್ತರು ಹೋರಾಟ ಮಾಡಿ ಸುರೇಶ್ಗೌಡರನ್ನು ಈ ಕ್ಷೇತ್ರದ ಶಾಸಕರನ್ನಾಗಿ ಮಾಡಿದ್ದೇವೆ. ಆದರೆ, ಎಲ್ಲರನ್ನೂ ಕಡೆಗಣಿಸಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಇತ್ತೀಚೆಗಷ್ಟೇ ಆರೋಪಿಸಿದ್ದರು. ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಮಾಯಿಗೋನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರ್ಯಕರ್ತರು ಮತ್ತು ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸುರೇಶ್ಗೌಡ ಕೇವಲ ಮೂರ್ನಾಲ್ಕು ಗುತ್ತಿಗೆದಾರರಿಗೆ ಮಾತ್ರ ಉಪಯೋಗವಾಗುವ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಸಾವಿರಾರು ಮಂದಿ ಕಾರ್ಯಕರ್ತರ ಬೀದಿಪಾಲು
ಶಾಸಕ ಸುರೇಶ್ಗೌಡ ಸಾವಿರಾರು ಮಂದಿ ಕಾರ್ಯಕರ್ತರನ್ನು ಬೀದಿಪಾಲು ಮಾಡಿದ್ದಾರೆ. ಹೀಗಾಗಿ ಮೂಲ ಕಾರ್ಯಕರ್ತರು ಜೆಡಿಎಸ್ ಮತ್ತು ಸುರೇಶ್ಗೌಡಿರಿಂದ ದೂರವಾಗಿ ಈಗ ನನ್ನೊಂದಿಗೆ ಉಳಿದಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ. ಮಾತು ಮುಂದುವರಿಸಿದ ಅವರು, ಕೇವಲ ಮೂರ್ನಾಲ್ಕು ಆಪ್ತ ಗುತ್ತಿಗೆದಾರರನ್ನು ಹತ್ತಿರ ಇಟ್ಟುಕೊಂಡು ಹಣ ಲೂಟಿ ಹೊಡೆಯುತ್ತಾ ದುಡಿದ ಕಾರ್ಯಕರ್ತರನ್ನು ದೂರ ತಳ್ಳಿದ್ದಾರೆ. ನಾನು ಎಂ.ಎಲ್.ಎ, ಎಂ.ಪಿ, ಎಂ.ಎಲ್.ಸಿ ಆಗದಂತೆ ಕುತಂತ್ರ ನಡೆಸಿ ಅಧಿಕಾರದಿಂದ ದೂರವಿಟ್ಟರು. ಅಲ್ಲದೇ ನನಗೆ ಎಂ.ಪಿ ಟಿಕೆಟ್ ಸಿಗುತ್ತದೆ ಎಂಬ ದುರುದ್ದೇಶದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆತಂದು ಮಂಡ್ಯದಲ್ಲಿ ಬಲಿಪಶು ಮಾಡಿದರು. ತಾಲೂಕಿನ ಜನ ಸುರೇಶ್ಗೌಡ ಮತ್ತು ಚಲುವರಾಯಸ್ವಾಮಿ ಅವರ ಅಧಿಕಾರವನ್ನು ನೋಡಿದ್ದಾರೆ. ನನ್ನ ಅವಧಿಯ ಕೆಲಸಗಳನ್ನೂ ಸಹ ನೋಡಿದ್ದಾರೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕು ಎಂಬುದನ್ನು ಕ್ಷೇತ್ರದ ಜನರೇ ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದರು.
ಅಧಿಕಾರದಲ್ಲಿದ್ದವರು ಸಮರ್ಪಕವಾಗಿ ಕೆಲಸ ಮಾಡಿದ್ದರೆ, ಸಮಾಜ ಸೇವಕ ಫೈಟರ್ ರವಿ ಅವರು ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ. ತಾಲೂಕಿನಾದ್ಯಂತ ಏಕಕಾಲದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ನನ್ನ ಆಡಳಿತದ ಅವಧಿಯಲ್ಲಿ ಮಾಡಿದ್ದು ಬಿಟ್ಟರೆ, ನಂತರ ಬಂದವರು ಏನು ಮಾಡಿದ್ದಾರೆ ಎಂದು ಹೇಳಲಿ. ತಾಲೂಕಿನ ಅಭಿವೃದ್ದಿಗಾಗಿ ಜನರು ಈ ಬಾರಿ ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡುತ್ತಾರೆ. ನಾನು ಈ ಚುನಾವಣೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತೇನೆ. ನಿಮ್ಮೆಲ್ಲರ ಪಾದಕ್ಕೂ ನಾನು ನಮಸ್ಕರಿಸುತ್ತೇನೆ. ತಾಲೂಕಿನ ಜನರು ನನ್ನನ್ನು ಈ ಬಾರಿ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದರು.












Click it and Unblock the Notifications