'ಅಮ್ಮನ ಭರ್ಜರಿ ಜಯ': ಸಾಯುವವರೆಗೂ ಮಂಡ್ಯಕ್ಕೆ ಋಣಿ ಎಂದ ದರ್ಶನ್
Recommended Video
ಮಂಡ್ಯ, ಮೇ 29: "ಅಮ್ಮ(ಸುಮಲತಾ)ನನ್ನು ಗೆಲ್ಲಿಸಿದ ಮಂಡ್ಯದ ಜನರಿಗೆ ಕೃತಜ್ಞತೆ ಹೇಳುವುದು ಅಂದ್ರೆ ತುಂಬಾ ಚಿಕ್ಕ ಮಾತಾಗುತ್ತೆ. ಆದ್ರಿಂದ ಕೃತಜ್ಞತೆ ಹೇಳುವುದಕ್ಕಿಂತ ಹೆಚ್ಚಾಗಿ ನಾವು ಸಾಯುವವರೆಗೂ ಮಂಡ್ಯ ಜನರಿಗೆ ಋಣಿಯಾಗಿರುತ್ತೇವೆ ಎನ್ನಲು ಇಷ್ಟಪಡುತ್ತೇವೆ" ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದರು.
ಮೇ 23 ರಂದು ಪ್ರಕಟವಾದ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾಗಿರುವ ಕುರಿತು ಚಾನೆಲ್ ವೊಂದಕ್ಕೆ ಪ್ರತಿಕ್ರಿಯೆ ನೀಡಿದ ದರ್ಶನ್, ಸಂತಸ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಹಮ್ಮಿಕೊಂಡಿರುವ ಸ್ವಾಭಿಮಾನ ಸಮಾವೇಶದಲ್ಲಿ ಭಾಗಿಯಾಗಲಿರುವ ಅವರು, "ಇಂಡಿಯಾಕ್ಕೇ ಒಂದು ಚುನಾವಣೆಯಾಗಿದ್ದರೆ, ಮಂಡ್ಯದ್ದೇ ಒಂದು ಚುನಾವಣೆ ಆಗಿತ್ತು. ಅಷ್ಟರ ಮಟ್ಟಿಗೆ ಜಿಲ್ಲೆಯ ಚುನಾವಣೆ ಕುತೂಹಲ ಕೆರಳಿಸಿತ್ತು. ಚುನಾವಣೆ ಅಂದಾಗ ಸೋಲು ಗೆಲುವು ಇದ್ದೇ ಇರುತ್ತೆ. ಗೆದ್ದ ಮೇಲೆ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು" ಎಂದರು.

"ಪ್ರಚಾರದ ಸಮಯದಲ್ಲಿ ಟೀಕೆ-ಟಿಪ್ಪಣಿ ಎಲ್ಲ ಸಹಜ. ಅವೆಲ್ಲ ಅಲ್ಲಿಗೇ ಮುಗಿಯಿತು ಅಷ್ಟೆ. ಅದರ ಬಗ್ಗೆ ಮಾತನಾಡುವುದು ಬೇಡ. ಇಂದು ಅಂಬರೀಶ್ ಅವರ ಜನ್ಮದಿನ. ನಮ್ಮ ಪಾಲಿಗೆ ಅವರು ಎಂದಿಗೂ ಬದುಕಿಯೇ ಇರುತ್ತಾರೆ. ಯಶ್ ಅವರು ಅಂದೇ ಹೇಳಿದ್ದರು. ಮೇ 29 ರಂದು ಅಂಬರೀಶ್ ಅವರ ಜನ್ಮದಿನ. ಆದರೆ ಮಂಡ್ಯ ಜನರು ಮೇ 23 ಕ್ಕೇ ಗಿಫ್ಟ್ ಕೊಡುತ್ತಾರೆ ಎಂದು. ಆ ಮಾತು ಸತ್ಯವಾಗಿದೆ" ಎಂದು ದರ್ಶನ್ ಹೇಳಿದರು.
"ದರ್ಶನ್ ರಾಜಕೀಯಕ್ಕೆ ಬರ್ತಾರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, "ಆಮೇಲೆ ಮಾತಾಡೋಣ" ಎಂದು ಎದ್ದು ಬಿಟ್ಟರು.
ತಮಿಳುನಾಡಿಗೆ ಮತ್ತೆ ಕಾವೇರಿ ನೀರನ್ನು ಬಿಡಲು ಪ್ರಾಧಿಕಾರ ನೀಡಿದ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ನಮಗೇ ಕುಡಿಯಲು ನೀರಿಲ್ಲ, ಕೊಡೋದೆಲ್ಲಿಂದ? ಒಬ್ಬರ ಊಟವನ್ನು ಹತ್ತು ಜನರಿಗೆ ಹಂಚೋಕಾಗಲ್ಲ" ಎಂದರು.
ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಏಪ್ರಿಲ್ 18 ರಂದು ಮತದಾನ ನಡೆದಿತ್ತು. ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅವರು ಸೋಲಿಸಿದ್ದರು.












Click it and Unblock the Notifications