ಮಂಡ್ಯದಲ್ಲಿ ಅಂಬಿ ಅಭಿಮಾನಿಗಳ ಕುಟುಂಬಕ್ಕೆ ಸುಮಲತಾ ಸಾಂತ್ವನ
ಬೆಂಗಳೂರು, ಜನವರಿ 12 : ಕನ್ನಡ ನಟ ಅಂಬರೀಶ್ ಸಾವಿನಿಂದ ನೊಂದು ಮದ್ದೂರು ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಇಬ್ಬರು ಅಭಿಮಾನಿಗಳ ಕುಟುಂಬವನ್ನು ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಶನಿವಾರ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಮದ್ದೂರು ತಾಲೂಕಿನ ಹೊಟ್ಟೆಗೌಡನದೊಡ್ಡಿ ಮತ್ತು ಗೊರವನಹಳ್ಳಿ ಗ್ರಾಮಗಳಿಗೂ ಭೇಟಿ ನೀಡಿದ ಅಂಬರೀಶ್ ಪತ್ನಿ ಸುಮಲತಾ ಹಾಗೂ ಪುತ್ರ ಅಭಿಷೇಕ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಪರಿಹಾರವಾಗಿ ಚೆಕ್ ವಿತರಣೆ ಮಾಡಿದರು.
ಮೊದಲಿಗೆ ಹೊಟ್ಟೆಗೌಡನದೊಡ್ಡಿ ಗ್ರಾಮದ ತಿಮ್ಮಯ್ಯ ಅವರ ಮನೆಗೆ ಭೇಟಿ ನೀಡಿ ಪತ್ನಿ ಸುಧಾ ಹಾಗೂ ಪುತ್ರ ಸುನಿಲ್ ಗೂ ಸಾಂತ್ವನ ಹೇಳಿ, 30 ಸಾವಿರ ರು. ಚೆಕ್ ವಿತರಣೆ ಮಾಡಿದರು.

ನಂತರ ಗೊರವನಹಳ್ಳಿಗೆ ಭೇಟಿ ನೀಡಿ ಅಂಬರೀಶ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪತಿಯನ್ನು ನೆನೆದು ಗದ್ಗದಿತರಾದ ಸುಮಲತಾ ಅವರು, ಮೃತ ಸುರೇಶ್ ಮನೆಯಲ್ಲಿ ಎಳನೀರು ಕುಡಿದು ಕುಟುಂಬಸ್ಥರ ಜೊತೆ ಸ್ವಲ್ಪ ಸಮಯ ಕಳೆದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರ ಸಾವು ದೈವ ಇಚ್ಛೆ, ಆದರೆ ಇಲ್ಲಿ ಅವರ ಅಭಿಮಾನಿಗಳ ಆತ್ಮಹತ್ಯೆಗಳು ಆಗಬಾರದಿತ್ತು. ನಮ್ಮ ಕೈಯಲ್ಲಿ ಸಾಂತ್ವನ ಹೇಳಲಿಕ್ಕಷ್ಟೆ ಆಗೋದು. ಅದನ್ನ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಮೃತ ಕುಟುಂಬಕ್ಕೆ 30 ಸಾವಿರ ರು. ಚೆಕ್ ನೀಡಿದರು.

ರೆಬೆಲ್ ಸ್ಟಾರ್ ಅಂಬರೀಶ್ ಅವರ ತವರು ಜಿಲ್ಲೆ ಮಂಡ್ಯದಲ್ಲಿ ಅಂಬಿ ಅಭಿಮಾನಿಗಳ ಸಂಘದ ವತಿಯಿಂದ 'ಅಂಬಿಗಾಗಿ ನುಡಿನಮನ' ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯ ಅಧ್ಯಕ್ಷ ಬೇಲೂರು ಸೋಮಶೇಖರ್, ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್, ಚಿತ್ರನಟರಾದ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಉಪಸ್ಥಿತರಿದ್ದಾರೆ.
ಮಂಡ್ಯದ ಸರ್ ಎಂ.ವಿ. ಸ್ಟೇಡಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಸ್ ದುರಂತದಲ್ಲಿ ಮೃತಪಟ್ಟ 30 ಕುಟುಂಬಗಳಿಗೆ ಅಂಬರೀಶ್ ಕುಟುಂಬದವರು ಸಾಂತ್ವನ ಹೇಳಲಿದ್ದಾರೆ.












Click it and Unblock the Notifications