ಮಂಡ್ಯ ಜನರ ಜೊತೆಗಿರ್ತೇನೆ ಅಂಬರೀಶ್ ಮೇಲಾಣೆ: ಸುಮಲತಾ
Recommended Video
ಮಂಡ್ಯ, ಮೇ 29: ಮಂಡ್ಯದ ಮತದಾರನ ಕೃಪೆಯಿಂದ ಘಟಾನುಘಟಿ ನಾಯಕರ ವಿರುದ್ಧ ಸೆಣೆಸಿ ಗೆದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ತಮ್ಮನ್ನು ಗೆಲ್ಲಿಸಿದ ಮಂಡ್ಯದ ಮತದಾರರಿಗೆ ಭಾವುಕವಾಗಿ ಧನ್ಯವಾದ ಅರ್ಪಿಸಿದರು.
ಮಂಡ್ಯದ ಜ್ಯೂಬಿಲಿ ಮೈದಾನದಲ್ಲಿ ಆಯೋಜಿಸಿದ್ದ 'ಸ್ವಾಭಿಮಾನ ವಿಜಯೋತ್ಸವ'ದಲ್ಲಿ ಮಾತನಾಡಿದ ಸುಮಲತಾ ಅವರು ತಮ್ಮನ್ನು ಗೆಲ್ಲಿಸಿದ ಮತದಾರನಿಗೆ, ತಮಗಾಗಿ ಕಷ್ಟಪಟ್ಟ ಕಾರ್ಯಕರ್ತರಿಗೆ, ತಮಗೆ ಬೆನ್ನುಲುಬಾದ ಗೆಳೆಯರಿಗೆ, ಕುಟುಂಬ ಸದಸ್ಯರಿಗೆ ಧನ್ಯವಾದಗಳ ಸುರಿಮಳೆಯನ್ನೇ ಸುರಿಸಿದರು.
ದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕರಾಕರಕ್ಕೆ ಮುನ್ನಾ ನಿಮ್ಮ ಮುಂದೆ ಪ್ರಮಾಣವಚನ ಸ್ವೀಕಾರಕ್ಕೆ ಬಂದಿದ್ದೇನೆ ಎಂದ ಸುಮಲತಾ ಅವರು, 'ಮಂಡ್ಯ ಜನರ ಜೊತೆ ಸದಾ ಇರುತ್ತೇನೆ, ಅವರಿಗೆ ಕಷ್ಟಗಳಿಗೆ ಸ್ಪಂದಿಸುತ್ತೇನೆ, ಅವರ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದು ಅಂಬರೀಶ್ ಅವರ ಮೇಲೆ ಆಣೆ ಮಾಡುತ್ತೇನೆ' ಎಂದರು.
ವಿಜಯೋತ್ಸವದ ಸಮಾವೇಶದಲ್ಲೂ ಭಾವುಕರಾಗಿಯೇ ಮಾತನಾಡಿದ ಸುಮಲತಾ, ಕಳೆದ ಆರು ತಿಂಗಳಲ್ಲಿ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ, ಅವರಿಲ್ಲದೆ (ಅಂಬರೀಶ್) ಮೊದಲ ಬಾರಿಗೆ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದೇವೆ, ಆದರೆ ನೀವೆಲ್ಲರೂ ನಮ್ಮ ಕುಟುಂಬದ ಜೊತೆಗಿದ್ದೀರೆಂಬ ನಂಬಿಕೆ ನನಗೆ ಇದೆ ಎಂದು ಸುಮಲತಾ ಹೇಳಿದರು.

'ನಾನೀಗ ಮಂಡ್ಯದ ಸಂಸದೆ, ಇದು ನೀವು ಕೊಟ್ಟ ಪಟ್ಟ'
ನಾಮಪತ್ರ ಸಲ್ಲಿಸಿದ ದಿನ ಮಾಡಿದ ಭಾಷಣ ನೆನಪಿಸಿಕೊಂಡ ಸುಮಲತಾ, ನನ್ನನ್ನು ಹೊರಗಿನವಳು ಎನ್ನಲಾಗಿತ್ತು, ಹಾಗಾಗಿ ನಾನು ಅಂದು ನಾನು ಮಂಡ್ಯದ ಸೊಸೆ ಎಂದು ನಿಮ್ಮಲ್ಲಿ ಪರಿಚಯ ಮಾಡಿಕೊಂಡಿದ್ದೆ, ನೀವು ಇಂದು ನನಗೆ ಮತ್ತೊಂದು ವಿಳಾಸ ನೀಡಿದ್ದೀರಿ, ನನ್ನನ್ನು ಮಂಡ್ಯದ ಸಂಸದೆಯನ್ನಾಗಿಸಿದ್ದೀರಿ, ಇನ್ನು ಮುಂದೆ ನಾನು ಮಂಡ್ಯದ ಸೊಸೆಯ ಜೊತೆಗೆ ಮಂಡ್ಯದ ಸಂಸದೆ ಕೂಡಾ ಎಂದು ಸುಮಲತಾ ಹೇಳಿದರು.

'ಚುನಾವಣೆ ಸಮಯದಲ್ಲಿ ಭರವಸೆ ನೀಡಿರಲಿಲ್ಲ'
ಚುನಾವಣೆ ಸಮಯದಲ್ಲಿ ಯಾವುದೇ ಭರವಸೆ ನನಗೆ ನೀಡಲು ಆಗಿರಲಿಲ್ಲ, ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶವೇ ಸಿಗದಂತೆ ಚುನಾವಣೆ ನಡೆದು ಬಿಟ್ಟಿತು. ಆದರೆ ಇನ್ನು ಮುಂದೆ ಹಾಗಾಗದು ಎಂದು ಭರವಸೆ ನೀಡಿದ ಸುಮಲತಾ, ರೈತ ಸಂಘ ನನಗೆ ಬೆಂಬಲ ನೀಡುವುದಕ್ಕೆ ಮುನ್ನಾ ಹಾಕಿದ ಎಲ್ಲ ಷರತ್ತುಗಳಿಗೆ ನಾನು ಬದ್ಧ ಎಂದು ಅವರು ಹೇಳಿದರು.

ದ್ವೇಷಕ್ಕೆ ಇದು ಸಮಯವಲ್ಲ: ಸುಮಲತಾ
ಚುನಾವಣೆ ಸಮಯದಲ್ಲಿ ಯಾರೆಲ್ಲಾ ಏನೆಲ್ಲಾ ಮಾತನಾಡಿದರು ಎಂಬುದನ್ನು ಈಗ ಬಿಟ್ಟುಬಿಡೋಣ, ಜನರಿಗೆ ಬೇಸರವಾಗುಷ್ಟು ಎದುರಾಳಿಗಳು ಮಾತನಾಡಿದರು, ಆದರೆ ಈಗ ಗೆದ್ದಾಗಿದೆ, ಅವರು ದ್ವೇಷವನ್ನು ನಿಲ್ಲಿಸಿಬಿಡಬೇಕು. ನನಗೆ ಯಾವುದೇ ಪ್ರತಿಷ್ಟೆ ಇಲ್ಲ, ನಾನೇ ಅವರನ್ನು ಹೋಗಿ ಮಾತನಾಡಿಸಲು ತಯಾರು, ನನಗೆ ಮತ ಹಾಕಿದವರು, ಹಾಕದವರು ಎಲ್ಲವರೂ ನನ್ನವರೇ ಎಂದು ಸುಮಲತಾ ಹೇಳಿದರು.

ಅಂಬರೀಶ್ ಹುಟ್ಟುಹಬ್ಬ ಮಂಡ್ಯದಲ್ಲಿಯೇ: ಸುಮಲತಾ
ತಮ್ಮ ಗೆಲುವನ್ನು ಮಂಡ್ಯದ ಸರ್ವ ಜನರಿಗೆ, ಮಹಿಳೆಯರಿಗೆ, ಕಾರ್ಯಕರ್ತರಿಗೆ ಅರ್ಪಿಸಿದ ಸುಮಲತಾ ಅವರು, ಇನ್ನುಮುಂದೆ ಪ್ರತಿ ವರ್ಷ ಅಂಬರೀಶ್ ಹುಟ್ಟುಹಬ್ಬವನ್ನು ಮಂಡ್ಯದಲ್ಲಿಯೇ ಆಚರಣೆ ಮಾಡುವುದಾಗಿ ಭರವಸೆ ನೀಡಿದರು. ಸುಮಲತಾ ಅವರ ಮಾತಿಗೆ ನೆರಿದಿದ್ದ ಜನ ಭಾರಿ ಕರತಾಡನ ನೀಡಿ ಸ್ವಾಗತಿಸಿದರು.

ಮತದಾರರಿಗೆ ಪಾದಾವಬಿವಂದನೆ: ಸುಮಲತಾ
ತಮಗಾಗಿ ದುಡಿದ ಎಲ್ಲರನ್ನೂ ನೆನಪಿಸಿಕೊಂಡು ಪ್ರತ್ಯೇಕವಾಗಿ ಧನ್ಯವಾದ ಹೇಳಿದ ಸುಮಲತಾ, ಎಲ್ಲ ಮತದಾರರಿಗೆ ಪಾದಾಬಿವಂದನೆಗಳು ಎಂದು ಸುಮಲತಾ ಭಾವುಕವಾಗಿ ಹೇಳಿದರು. ಕಾಂಗ್ರೆಸ್ ಬಿಟ್ಟು ಬಂದು ತಮ್ಮೊಂದಿಗೆ ನಿಂತ ಕಾರ್ಯಕರ್ತರು, ಮುಖಂಡರಿಗೆ ಸುಮಲತಾ ಅವರು ವಿಶೇಷವಾಗಿ ಧನ್ಯವಾದ ಹೇಳಿದರು.












Click it and Unblock the Notifications