ಪೊಲೀಸ್ ಭಾಷೆಯಲ್ಲೇ ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಿದ ಎಸ್ ಐ
ಮಂಡ್ಯ, ಆಗಸ್ಟ್ 25: ಕಾಲೇಜಿಗೆ ಸಮವಸ್ತ್ರ ಧರಿಸದೆ ಬಂದು ಪ್ರಾಂಶುಪಾಲರ ಮಾತನ್ನೇ ಧಿಕ್ಕರಿಸಿ ತರಗತಿಯೊಳಗೆ ಪ್ರವೇಶ ಮಾಡಿದ್ದ ವಿದ್ಯಾರ್ಥಿಗಳಿಗೆ ಪಾಂಡವಪುರ ಸಬ್ಇನ್ ಸ್ಪೆಕ್ಟರ್ ಅಯ್ಯನಗೌಡ ಪೊಲೀಸ್ ಭಾಷೆಯಲ್ಲಿ ಬುದ್ಧಿವಾದ ಹೇಳಿದ ಘಟನೆ ನಡೆದಿದೆ.
ಪಾಂಡವಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮವಸ್ತ್ರ ಧರಿಸಿ ಕಾಲೇಜಿಗೆ ಬರುವಂತೆ ಈಗಾಗಲೇ ನಿಯಮ ಜಾರಿ ಮಾಡಿದ್ದು, ಕೆಲವು ವಿದ್ಯಾರ್ಥಿಗಳು ಇದನ್ನು ಪಾಲಿಸುತ್ತಿಲ್ಲ. ಬುಧವಾರ ಎಂದಿನಂತೆ ಪ್ರಾರ್ಥನೆ ಸಲ್ಲಿಸಿ ವಿದ್ಯಾರ್ಥಿಗಳು ತರಗತಿ ಪ್ರವೇಶಿಸಲು ಮುಂದಾದ ವೇಳೆ ಪ್ರಾಂಶುಪಾಲ ಪ್ರೊ.ಸಿದ್ದರಾಮು ಮತ್ತು ಉಪನ್ಯಾಸಕರು ಸಮವಸ್ತ್ರ ಧರಿಸದ ವಿದ್ಯಾರ್ಥಿಗಳು ತರಗತಿಗೆ ಪ್ರವೇಶ ಮಾಡಬಾರದು ಎಂದು ಹೇಳಿದ್ದಾರೆ.[ದರೋಡೆಕೋರರಿಂದ 6 ಲಕ್ಷ, 21 ಚಿನ್ನದ ಬಿಸ್ಕೆಟ್, ಎರಡು ಕಾರು ವಶ]
ಇದರಿಂದ ಕೆರಳಿದ ಕೆಲ ವಿದ್ಯಾರ್ಥಿಗಳು ಅವರ ಜತೆ ಮಾತಿನ ಚಕಮಕಿಗೆ ಇಳಿದಿದ್ದಲ್ಲದೆ, ಅವರ ಮಾತಿಗೆ ಸೊಪ್ಪು ಹಾಕದೆ ತರಗತಿಗೆ ಪ್ರವೇಶ ಮಾಡಿದ್ದಾರೆ. ವಿದ್ಯಾರ್ಥಿಗಳ ಈ ವರ್ತನೆಯಿಂದ ಬೇಸರಗೊಂಡ ಪ್ರಾಂಶುಪಾಲ ಪ್ರೊ.ಸಿದ್ದರಾಮು ಪೊಲೀಸ್ ಠಾಣೆಗೆ ಕರೆ ಮಾಡಿ ಹೇಳಿದ್ದಾರೆ.
ಕಾಲೇಜಿಗೆ ಸಿಬ್ಬಂದಿಯೊಂದಿಗೆ ಆಗಮಿಸಿದ ಎಸ್ಐ ಅಯ್ಯನಗೌಡ ಪ್ರತಿಯೊಂದು ತರಗತಿಗೂ ತೆರಳಿ, ಸಮವಸ್ತ್ರ ಧರಿಸದ ವಿದ್ಯಾರ್ಥಿಗಳನ್ನು ಕರೆದು, ಬುದ್ಧಿವಾದವನ್ನು ತಮ್ಮ ಪೊಲೀಸ್ ಭಾಷೆಯಲ್ಲಿ ಹೇಳಿದ್ದಾರೆ.[ರಾಜದ್ರೋಹದ ಆರೋಪ, ರಮ್ಯಾ ಉತ್ತರವೇನು?]
ಒಂದು ತಾಸಿಗೂ ಅಧಿಕ ಕಾಲ ವಿದ್ಯಾರ್ಥಿಗಳಿಗೆ ಈ ರೀತಿಯಲ್ಲಿಯೇ ಎಸ್ಐ ಅಯ್ಯನಗೌಡ ಬುದ್ಧಿವಾದ ಹೇಳಿ, ಜತೆಗೆ ಸಮವಸ್ತ್ರ ಇಲ್ಲದ ವಿದ್ಯಾರ್ಥಿಗಳಿಗೆ ಸಮಯ ನೀಡಿ, ಇದೇ ಚಾಳಿ ಮುಂದುವರೆಸಿದರೆ ತಮಗೆ ಕರೆ ಮಾಡಿ, ಅವರಿಗೆ ಬಿಸಿ ಮುಟ್ಟಿಸುತ್ತೇನೆ ಎಂದು ಪ್ರಾಂಶುಪಾಲರಿಗೆ ತಿಳಿಸಿದರು.[ಮಂಡ್ಯದಲ್ಲಿ ಮಾಜಿ ಸಂಸದೆ ರಮ್ಯಾ ಭಾವಚಿತ್ರ ದಹಿಸಿ ಆಕ್ರೋಶ]
ಆ.29ರಂದು ನ್ಯಾಕ್ ಪೀರ್ (ರಾಷ್ಟ್ರೀಯಯ ಮೌಲ್ಯಮಾಪನ ಸಂಸ್ಥೆ) ಕಮಿಟಿ ಕಾಲೇಜಿಗೆ ಭೇಟಿ ನೀಡುತ್ತಿದ್ದು, ಕಾಲೇಜಿನ ವಾತಾವರಣ ಸರಿ ಇಲ್ಲವಾದರೆ ಕಾಲೇಜಿಗೆ ಉತ್ತಮ ಅಂಕ ನೀಡುವುದಿಲ್ಲ, ಉತ್ತಮ ಅಂಕ ಬಂದರೆ ಕೇಂದ್ರದಿಂದ ಹಣ ಬರುತ್ತದೆ. ಇದರಿಂದ ಕಾಲೇಜಿನ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದರೆ ವಿದ್ಯಾರ್ಥಿಗಳು ಇದಕ್ಕೆ ಸಹಕರಿಸುತ್ತಿಲ್ಲ ಎಂದು ಕಾಲೇಜು ಪ್ರಾಂಶುಪಾಲರ ಅಳಲಾಗಿದೆ.