ಮಂಡ್ಯ; ಕೋವಿಡ್ ಕಾಲದಲ್ಲಿ ಸರ್ಕಾರಿ ನೌಕರರ ಮಾದರಿ ಕಾರ್ಯ
ಮಂಡ್ಯ, ಜೂನ್ 13; ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ನೌಕರರು ಮಾದರಿಯಾಗಿದ್ದಾರೆ. ಸುಮಾರು 4 ಲಕ್ಷ ರೂ. ಸಂಗ್ರಹ ಮಾಡಿ ಬಡವರಿಗೆ ಆಹಾರದ ಕಿಟ್ಗಳನ್ನು ಹಂಚಿಕೆ ಮಾಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಂಗೇಗೌಡ ನೇತೃತ್ವದಲ್ಲಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ನೌಕರರು ಹಾಗೂ ಇತರೆ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಆಹಾರ ಕಿಟ್ ವಿತರಿಸಲಾಗಿದೆ.
ಲಾಕ್ಡೌನ್ ಸಮಯದಲ್ಲಿ ಬಹಳಷ್ಟು ಜನರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಹಲವು ಸರ್ಕಾರಿ ಇಲಾಖೆ ಅಧಿಕಾರಿಗಳು ಹಾಗೂ ನೌಕರರು ಕೂಡ ಸಹಾಯ ಮಾಡುವ ಮನಸ್ಸು ಹೊಂದಿದ್ದಾರೆ.

ಬಡವರಿಗೆ ಸಹಾಯ ಮಾಡಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ನೌಕರರು ಮುಂದೆ ಬಂದರು. ಮೊದಲು ಕೆಲ ನೌಕರರು ಧನ ಸಹಾಯ ಮಾಡಿದರು. ಇದನ್ನು ನೋಡಿದ ಇತರರು ಕೂಡ ಹಣ ನೀಡಿದರು. ಒಟ್ಟು 4 ಲಕ್ಷ ರೂ. ಸಂಗ್ರಹವಾಯಿತು.
ಈ ಹಣದಿಂದ ಕೋವಿಡ್ ಸಂಕಷ್ಟದ ಸಮಯದಲ್ಲಿ ಕೆಲಸವಿಲ್ಲದೇ ನೊಂದ ಅಲೆಮಾರಿ ಜನರು, ಕಾಡಿನಂಚಿನ ಬುಡಕಟ್ಟು ಜನಾಂಗದವರು, ಒಳಚರಂಡಿ ಸ್ವಚ್ಛಗೊಳಿಸುವವರು, ಸಫಾಯಿ ಕರ್ಮಚಾರಿಗಳು, ಜೀತವಿಮುಕ್ತರು ಮುಂತಾದ ಅಶಕ್ತ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಗಿದೆ.
ಜಿಲ್ಲೆಯಾದ್ಯಂತ ಸುಮಾರು 900 ಪರಿಶಿಷ್ಟ ಜಾತಿ, ಅಲೆಮಾರಿ, ಬುಡಕಟ್ಟು ಸಫಾಯಿ ಕರ್ಮಚಾರಿ, ಜೀತವಿಮುಕ್ತರು ಇತ್ಯಾದಿ ಕುಟುಂಬಗಳನ್ನು ಅತ್ಯಂತ ಅಗತ್ಯವಾದ ಕುಟುಂಬಗಳೆಂದು ಪಟ್ಟಿ ಮಾಡಿದ್ದು ಅವರಿಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಆಹಾರ ಕಿಟ್ ಹಂಚುವ ಕೆಲಸ ಮಾಡಲಾಗುತ್ತಿದೆ.
ಕೋವಿಡ್ ಸಮಯದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿರುವುದರಿಂದ ಸಮಾಜ ಕಲ್ಯಾಣ ಇಲಾಖೆ ನೌಕರರು ಹಾಗೂ ಇತರೆ ದಾನಿಗಳಿಂದ ಸಂಗ್ರಹಿಸಿದ ಹಣದಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ, ಬಲ್ಲೇನಹಳ್ಳಿ ಹಾಗೂ ಸಬ್ಬನಕುಪ್ಪೆ, ಮಹದೇವಪುರ ಗ್ರಾಮಗಳ 50 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.












Click it and Unblock the Notifications