ನಾವು ಯಾರಿಗೆ ಟಿಕೆಟ್ ನೀಡಿದರೂ ಕಾಂಗ್ರೆಸ್ಗೆ ಮತ ಹಾಕಿ: ಸಿದ್ದರಾಮಯ್ಯ
ಕೆ.ಆರ್.ಪೇಟೆ, ನ. 29: 'ನಾನು ಹೋದಲೆಲ್ಲಾ ನೀವು ಪ್ರೀತಿ, ಅಭಿಮಾನ ತೋರಿಸುತ್ತೀದ್ದೀರಿ. ನಿಮ್ಮ ಪ್ರೀತಿ ಮತ್ತು ಅಭಿಮಾನಗಳು ಮತವಾಗಿ ಪರಿವರ್ತನೆಯಾದರೆ ಮಾತ್ರ ನನಗೆ ಶಕ್ತಿ ಬರುತ್ತದೆ' ಎಂದು ಕೆ.ಆರ್.ಪೇಟೆಯಲ್ಲಿ ರಾಜ್ಯ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಪುರಸಭೆ ಪಕ್ಕದ ಮೈದಾನದಲ್ಲಿ ರಾಜ್ಯ ಕುರುಬರ ಸಂಘ, ಜಿಲ್ಲಾ ಮತ್ತು ತಾಲೂಕು ಕುರುಬರ ಸಂಘಗಳು ಸಂಯುಕ್ತವಾಗಿ ಆಯೋಜಿಸಿದ್ದ 535 ನೇ ಕನಕ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿದ್ದರಾಮಯ್ಯ ಮಾತನಾಡಿದ್ದಾರೆ.
ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆದಿದ್ದಾರೆ. ಜೊತೆಗೆ ಮುಂದಿನ ಚುನಾಚಣೆಯಲ್ಲಿ ಜಿಲ್ಲೆಯ ಎಲ್ಲಾ ಏಳಕ್ಕೆ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಅವಶ್ಯಕ ಎಂಬುದನ್ನು ಸಿದ್ದರಾಮಯ್ಯ ಒತ್ತಿ ಹೇಳಿದ್ದಾರೆ.

'ಅಭ್ಯರ್ಥಿ ಯಾರೇ ಆದರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ'
"ಯಾರೇ ಬಂದು ಸುಳ್ಳು ಭರವಸೆಗಳನ್ನು ನೀಡಿದರೂ ನೀವು ಅದನ್ನು ನಂಬಬೇಡಿ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ರಾಜ್ಯ ಉಳಿಯಲು ಸಾಧ್ಯ. ಮಂಡ್ಯ ಜಿಲ್ಲೆಯಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಎಲ್ಲಾ ಏಳಕ್ಕೆ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಬರಬೇಕು. ನಾವು ಯಾರಿಗೇ ಟಿಕೆಟ್ ನಿಡಿದರೂ ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು" ಎಂದಿದ್ದಾರೆ.
"ಕಾಂಗ್ರೆಸ್ ಗೆದ್ದರೆ ನನಗೆ ಶಕ್ತಿ ಬರುತ್ತದೆ. ಬಿಜೆಪಿ ಗೆದ್ದರೆ ಬಸವರಾಜ ಬೊಮ್ಮಾಯಿಗೆ ಶಕ್ತಿ ಬರುತ್ತದೆ, ಜೆಡಿಎಸ್ ಗೆದ್ದರೆ ಹೆಚ್.ಡಿ.ಕುಮಾರಸ್ವಾಮಿಗೆ ಶಕ್ತಿ ಬರುತ್ತದೆ. ಇದನ್ನು ಅರ್ಥಮಾಡಿಕೊಂಡು ಇಲ್ಲಿನ ಜನತೆ ಮುಂದಿನ ಚುನಾವಣೆಯಲ್ಲಿ ನಾನು ಹೇಳಿದ ಅಭ್ಯರ್ಥಿಗಳಿಗೆ ಮತ ಹಾಕಬೇಕು" ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಬಿಜೆಪಿಗರು ನೀಚರು ಮತ್ತು ಬಡವರ ವಿರೋಧಿಗಳು
ಕನಕ ಜಯಂತಿಯಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಬಿಜಿಪಿಗರು ನೀಚರು ಮತ್ತು ಬಡವರ ವಿರೋಧಿಗಳು. ಬಿಜೆಪಿಗರ ಮನೆ ಹಾಳಾಗ, ಇದುವರೆಗೂ ನಾಡಿನ ಬಡವರಿಗಾಗಿ ಒಂದೇ ಒಂದು ಮನೆ ಕಟ್ಟಿಸಿಕೊಡಲು ಇವರಿಂದ ಸಾಧ್ಯವಾಗಿಲ್ಲ ಎಂದು ಕಿಡಿಕಾರಿದ್ದಾರೆ.
"ಬಡವರಿಗೆ ಒಂದು ಸೂರು ಕಲ್ಪಿಸಿಕೊಡದ ಬಿಜೆಪಿಗರಿಗೆ ನಾಚಿಕೆಯಾಗಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ನಾಡಿನ ಬಡವರಿಗಾಗಿ 15 ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೆ. ಬಡವರ ಹೊಟ್ಟೆ ತುಂಬಿಸಲು ಕಡಿಮೆ ದರದಲ್ಲಿ ಊಟ ತಿಂಡಿ ನೀಡುವ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದೆ. ಶೋಷಿತರ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ತಿಂಗಳು 1500 ಶಿಷ್ಯ ವೇತನ ನೀಡುತ್ತಿದ್ದೆ. ಬಡವರ ಹೊಟ್ಟೆ ತುಂಬಿಸಲು ಪ್ರತಿ ಕುಟುಂಬಕ್ಕೂ ತಲಾ 7 ಕೆ.ಜಿ.ಉಚಿತ ಅಕ್ಕಿ ನೀಡುವ ಅನ್ನಯಬಾಗ್ಯ ಯೋಜನೆ ರೂಪಿಸಿದ್ದೆ" ಎಂದು ತಮ್ಮ ಸರ್ಕಾರದ ಅವಧಿಯಲ್ಲಿನ ಯೋಜನೆಗಳನ್ನು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.

ಮತ್ತೆ ಅಧಿಕಾರಕ್ಕೆರ ಬಂದರೆ ತಲಾ 10 ಕೆ.ಜಿ.ಅಕ್ಕಿ
ನಾನು ಅಧಿಕಾರ ಕಳೆದುಕೊಂಡ ಅನಂತರ ಬಡವರ ಪರವಾದ ಎಲ್ಲಾ ಯೋಜನೆಗಳನ್ನೂ ಬಿಜೆಪಿ ಸರ್ಕಾರ ನಿಲ್ಲಿಸಿದೆ. ನಾನು ನೀಡುತ್ತಿದ್ದ 7 ಕೆ.ಜಿ ಅಕ್ಕಿಯನ್ನು 5 ಕೆ.ಜಿ ಗೆ ಇಳಿಸಿದೆ. ನಾನು ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೂ ತಲಾ 10 ಕೆ.ಜಿ.ಅಕ್ಕಿ ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
"ಶ್ರೀಮಂತಿಕೆ, ಹುಟ್ಟು, ಅಧಿಕಾರದಿಂದ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ. ಯಾರೂ ಮನುಷತ್ವದ ಗುಣಗಳನ್ನು ಹೊಂದಿರುತ್ತಾರೋ ಅವರೇ ದೊಡ್ಡವರು. ಶಿಕ್ಷಣ, ಸಂಘಟನೆ ಮತ್ತು ಹೋರಟದ ಮೂಲಕ ಶೋಷಿತ ಸಮುದಾಯಗಳು ಮುಂದೆ ಬರಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟವಿಲ್ಲದೆ ಯಾವುದೇ ಶೋಷಿತ ವರ್ಗ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ" ಎಂದ ಸಿದ್ದರಾಮಯ್ಯ ದಾಸಶ್ರೇಷ್ಠ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರನ್ನು ಸ್ಮರಿಸಿದ್ದಾರೆ.

ಕನಕದಾಸರು ಮತ್ತು ರಾಯಣ್ಣನಂತವರು ನಮ್ಮ ಯುವಕರಿಗೆ ಆದರ್ಶ
"ಜಾತಿ ವ್ಯವಸ್ಥೆಯ ವಿರುದ್ದ ಸಿಡಿದೆದ್ದ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಕುಲ ಕುಲ ಎನ್ನುವವರ ಕುಲದ ನೆಲೆಯನ್ನೇ ಪ್ರಶ್ನಿಸಿದರು. ರಾಯಣ್ಣ ಇಂದಿನ ಬಿಜೆಪಿಗರಂತೆ ಡೋಂಗಿ ದೇಶಭಕ್ತರಲ್ಲ. ನಾಡಿನ ಸ್ವಾತ್ಯಂತ್ರ್ಯಕ್ಕಾಗಿ ಹೋರಡಿ ಬ್ರಿಟೀಷರಿಂದ ನೇಣುಗಂಬಕ್ಕೇರಿದವರು" ಎಂದಿದ್ದಾರೆ.
"ಕನಕದಾಸರು ಮತ್ತು ರಾಯಣ್ಣನಂತವರು ನಮ್ಮ ಯುವಕರಿಗೆ ಆದರ್ಶವಾಗಬೇಕು ಎನ್ನುವ ಕಾರಣಕ್ಕಾಗಿ ಕನಕ ಜಯಂತಿಯನ್ನು ಆಚರಿಸಿ ಕನಕರ ಹುಟ್ಟೂರು ಬಾಡಾ ಗ್ರಾಮದ ಅಭಿವೃದ್ದಿಗೆ ನಾನು ನೆರವು ನೀಡಿದ್ದೇನೆ. ಸಂಗೋಳ್ಳಿ ರಾಯಣ್ಣರ ಹುಟ್ಟೂರು ಮತ್ತು ಅವರನ್ನು ಬ್ರಿಟೀಷರು ನೇಣು ಹಾಕಿದ ಜಾಗವನ್ನು 272 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ದಿ ಮಾಡಿಸಿದ್ದೇನೆ. ನಾವ್ಯಾರೂ ಅರ್ಜಿ ಹಾಕಿಕೊಂಡು ನಮಗೆ ಬೇಕಾದ ಜಾತಿಯಲ್ಲಿ ಹುಟ್ಟಿಲ್ಲ. ನಮ್ಮ ಹಿರಿಯರ ಜನ್ಯದಿಂದ ನಮಗೆ ಜಾತಿ ಬಂದಿದೆ. ಕನಕದಾಸರ, ಬಸವಣ್ಣನವರ, ಅಂಬೇಡ್ಕರ್ ಅವರ ಸಿದ್ದಾಂತಗಳನ್ನು ಅನುಸರಿಸಿ ನಾವೆಲ್ಲ ಮನುಷ್ಯರಾಗಿ ಬಾಳೋಣ" ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮೈಸೂರು ಕನಕಪೀಠದ ಶಿವಾನಂಪುರಿ ಸ್ವಾಮೀಜಿ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಹೆಚ್.ಸಿ.ಮಹದೇವಪ್ಪ. ಪಿ.ಎಂ.ನರೇಂದ್ರಸ್ವಾಮಿ, ಎನ್.ಚಲುವರಾಯಸ್ವಾಮಿ, ಹೆಬ್ಬಾಳದ ಶಾಸಕ ಭೈರತಿ ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ವೇಳೆ ಜಿಲ್ಲೆಯ ಕುರುಬ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳನ್ನು ಕುರಬರ ಸಂಘದ ವತಿಯಿಂದ ಅಭಿನಂಧಿಸಲಾಯಿತು.












Click it and Unblock the Notifications