ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸರಣಿ ಅಪಘಾತ:ಹೊತ್ತಿ ಉರಿದ ಕಾರು
ಮಂಡ್ಯ, ಅಕ್ಟೋಬರ್ 14: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರು ಸೇರಿದಂತೆ ಮೂರ್ನಾಲ್ಕು ಕಾರುಗಳು ನಜ್ಜು ಗುಜ್ಜಾಗಿ ಕಾರೊಂದು ಹೊತ್ತಿ ಉರಿದ ಘಟನೆ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಜರುಗಿದೆ.
ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ರಸ್ತೆ ಅಪಘಾತ ಸಂಭವಿಸಿದ್ದು ನಾಲ್ಕು ಕಾರುಗಳು ಜಖಂ ಗೊಂಡಿದ್ದರೆ, ಹೆದ್ದಾರಿಯಲ್ಲಿ ಕಾರೊಂದು ಧಗ ಧಗಿಸಿ ಉರಿದಿದೆ.
ಬೆಂಗಳೂರು ಕಡೆಯಿಂದ ಮೈಸೂರು ಕಡೆ ತೆರಳುವಾಗ ಹೆದ್ದಾರಿಯಲ್ಲಿ ಅತೀವೇಗವಾಗಿ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮುಂಬದಿ ಸಂಚರಿಸುತ್ತಿದ್ದ ನಾಲ್ಕು ಕಾರುಗಳು ಜಖಂ ಗೊಂಡಿವೆ.

ಕಾರಿನಲ್ಲಿ ಇದ್ದವರನ್ನ ಸ್ಥಳೀಯರು ಹಾಗೂ ಪೋಲೀಸರು ರಕ್ಷಣೆ ಮಾಡಿದ್ದು, ಕಾರಿಗೆ ಬೆಂಕಿ ಹೊತ್ತಿಕೊಳ್ಳುವ ವೇಳೆ ಕಿಟಕಿ ಗ್ಲಾಸ್ ಹೊಡೆದು ಸುಟ್ಟು ಹೋದ ಕಾರಿನಲ್ಲಿದ್ದವರನ್ನು ಸಹ ರಕ್ಷಿಸಲಾಗಿದೆ.
ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿರುವ ದಸರಾ ಪೂರ್ವ ಸಿದ್ಧತೆ ಮತ್ತು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಾರಿಗೂ ಡಿಕ್ಕಿ ಸಂಭವಿಸಿದೆ. ಘಟನೆಯಿಂದಾಗಿ ಎಸ್.ಪಿ ಯತೀಶ್ ಅವರು ತೆರಳುತ್ತಿದ್ದ ಕಾರು ಜಖಂಗೊಂಡ ಕಾರಣ ಅದನ್ನು ಅಲ್ಲೇ ಬಿಟ್ಟು ಬೇರೊಂದು ಕಾರಿನಲ್ಲಿ ಶ್ರೀರಂಗಪಟ್ಟಣಕ್ಕೆ ತೆರಳಿದರು. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಾಮನಗರದಲ್ಲಿ ಭೀಕರ ಅಪಘಾತ: ಮೂವರು ಸಾವು
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಗ್ರಾಮದ ಬಳಿ ಘಟನೆ ನಡೆದಿದೆ. ಬೆಂಗಳೂರಿನ ಪೀಣ್ಯ ಮೂಲದವರಾಗಿರುವ ರಾಜೇಶ್ (42) ಹಾಗೂ ಉಮಾ (35) ಹಾಗೂ ಮತ್ತೋರ್ವ ಮಹಿಳೆ ಮೃತ ದುರ್ದೈವಿಗಳು.
ಬೆಂಗಳೂರಿನಿಂದ ಮೈಸೂರು ಕಡೆ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಒಮಿನಿ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ವೇಗವಾಗಿ ಚಲಿಸುತ್ತಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಲಾರಿ ಹಿಂಬದಿಗೆ ಒಮಿನಿ ಕಾರು ಅಪ್ಪಳಿಸಿದೆ.
ಅಪಘಾತದ ಭೀಕರತೆಗೆ ಇಬ್ಬರು ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಉಳಿದವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಗುದ್ದಿದ ರಭಸಕ್ಕೆ ಒಮಿನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತ ಹಿನ್ನಲೆಯಲ್ಲಿ ಕೆಲಕಾಲ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ರಾಮನಗರ ಸಂಚಾರಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications