ಸಿದ್ದು ವಿರುದ್ಧ ದೂರು ನೀಡಿದ ಆರ್ಟಿಐ ಕಾರ್ಯಕರ್ತ
ಮಂಡ್ಯ, ಜನವರಿ 11 : ಆರ್ಟಿಐ ಕಾರ್ಯಕರ್ತ ಕೆ.ಆರ್. ರವೀಂದ್ರ ಎಂಬುವರು ಪಾಂಡವಪುರ ತಾಲೂಕು ಬೇಬಿ ಬೆಟ್ಟದ ಕಾವಲು ಸರ್ವೆ ನಂ.1ರಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಆರೋಪಿಸಿದ್ದಾರೆ.
ಮಂಡ್ಯ ಜಿಲ್ಲಾ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ 8 ಮಂದಿ ವಿರುದ್ಧ ಭಾರತೀಯ ದಂಡ ಸಂಹಿತೆಯ 200ರ ಅಡಿ ಖಾಸಗಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಸಿದ್ದರಾಮಯ್ಯ ಸೇರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೆ.ಎಂ. ನಾಗಭೂಷಣ್, ಸಂಸದ ಸಿ.ಎಸ್. ಪುಟ್ಟರಾಜು, ನಾಗಮ್ಮ ಪುಟ್ಟರಾಜು, ವರಲಕ್ಷ್ಮಿ ಸಿ.ಎಸ್. ತಿಬ್ಬೇಗೌಡ, ಸಿ. ಶಿವಕುಮಾರ್, ಸಿ. ಅಶೋಕ್, ಬಿ.ಎಂ. ನಟರಾಜು ಅವರ ಹೆಸರನ್ನು ಸೇರಿಸಲಾಗಿದೆ.

ಬೇಬಿ ಬೆಟ್ಟದ ಕಾವಲು ಸರ್ವೆ ನಂ.1ರಲ್ಲಿರುವ 1623.07 ಎಕರೆ ಜಮೀನು ಮೈಸೂರು ಸಂಸ್ಥಾನದ ಮಹಾರಾಜರಿಗೆ ಸೇರಿದ್ದಾಗಿದೆ. 1968-69ರಿಂದ ಸದರಿ ಆರ್ಟಿಸಿಯಲ್ಲಿ 601.02 ಹೆಕ್ಟೇರ್ ಜಮೀನು ಇದ್ದು, ಮಣ್ಣಿನ ನಮೂನೆ ಕೆಂಪು ಎಂದು ದಾಖಲಾಗಿದೆ ಎಂಬುದು ಅವರ ವಾದ.
ಆರ್ಟಿಸಿ ಕಲಂ 6ರಲ್ಲಿ ಪಟ್ಟಾ ಎಂದು ಕೈ ಬರವಣಿಗೆಯಲ್ಲಿ ಬರೆದಿರುವುದನ್ನು ಅಳಿಸಿ, ಈ ದಾಖಲೆಯನ್ನು ಸರ್ಕಾರಿ ಎಂದು ಬರೆಯಲಾಗಿದೆ. ಪಟ್ಟಾ ಮತ್ತು ಸರ್ಕಾರಿ ಎಂದು ಎರಡು ರೀತಿಯಲ್ಲಿ ದಾಖಲಿಸಿ ಬಿ ವರ್ಗಕ್ಕೆ ಸೇರಿಸಿ 4ರಿಂದ 8ನೇ ಆರೋಪಿಗಳಾದ ನಾಗಮ್ಮ ಪುಟ್ಟರಾಜು, ವರಲಕ್ಷ್ಮಿ ಸಿ.ಎಸ್. ತಿಬ್ಬೇಗೌಡ, ಸಿ. ಶಿವಕುಮಾರ್, ಸಿ. ಅಶೋಕ್, ಬಿ.ಎಂ. ನಟರಾಜು ಅವರಿಗೆ ಕಲ್ಲು ಗಣಿಗಾರಿಕೆ ನಡೆಸಲು ಗುತ್ತಿಗೆ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಜಮೀನು ಮೈಸೂರು ಮಹಾರಾಜರು ಅಮೃತ್ ಮಹಲ್ ಕಾವಲ್ ತಳಿ ರಾಸುಗಳ ಅಭಿವೃದ್ಧಿಪಡಿಸಲು ಉಪಯೋಗಿಸುತ್ತಿದ್ದ ಹುಲ್ಲುಗಾವಲು ಪ್ರದೇಶವಾಗಿತ್ತು. 3ರಿಂದ 8ನೇ ಆರೋಪಿಗಳು ತಮ್ಮ ಪ್ರಭಾವ ಬಳಸಿ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ, ಅಧಿಕಾರಿಗಳಿಂದ ಲೈಸೆನ್ಸ್ ಪಡೆದು ಕಲ್ಲುಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2010ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ತಮ್ಮ ಆಪ್ತರಾಗಿದ್ದ 8ನೇ ಆರೋಪಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಬಿ.ಎಂ. ನಟರಾಜು ಅವರ ಒಡೆತನದ ಯತಿನ್ ಸ್ಟೋನ್ ಕ್ರಷರ್ ಹಾಗೂ ಕಲ್ಲುಗಣಿಗಾರಿಕೆಯ ಪ್ರಾರಂಭೋತ್ಸವವನ್ನು ನೆರವೇರಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.












Click it and Unblock the Notifications