ಅಂಬರೀಶ್ ಕ್ಷೇತ್ರದ ಕರಡಿಕೊಪ್ಪಲು ಗ್ರಾಮದ ಗೋಳು ಕೇಳುವವರಿಲ್ಲ!
ಮಂಡ್ಯ, ಫೆಬ್ರವರಿ 12: ಸಕ್ಕರೆ ನಾಡು ಮಂಡ್ಯದಲ್ಲಿ ರಾಜಕೀಯ ಜಿದ್ದಾಜಿದ್ದಿಗಳು ಮೊದಲಿನಿಂದಲೂ ನಡೆದುಕೊಂಡೇ ಬಂದಿವೆ. ಜಿಲ್ಲೆಯ ಅಭಿವೃದ್ಧಿ ಕುರಿತಂತೆ ನಾಯಕರು ತಮ್ಮದೇ ಆದ ದೊಡ್ಡಪಟ್ಟಿಯನ್ನೇ ನೀಡುತ್ತಾರೆ. ಆದರೆ ಜಿಲ್ಲೆಯಲ್ಲಿ ಇನ್ನೂ ಕೂಡ ಮೂಲಭೂತ ಸೌಲಭ್ಯವಿಲ್ಲದೆ ನಲುಗುತ್ತಿರುವ ಹಲವು ಹಳ್ಳಿಗಳಿದ್ದು, ಅವುಗಳಲ್ಲಿ ಮಂಡ್ಯ ನಗರಕ್ಕೆ ಸುಮಾರು 15 ಕಿ.ಮೀ. ದೂರವಿರುವ ನಟ ಅಂಬರೀಶ್ ಅವರ ಕ್ಷೇತ್ರಕ್ಕೆ ಸೇರಿದ ಕರಡಿಕೊಪ್ಪಲು ಒಂದಾಗಿದೆ.
ಆಧುನೀಕತೆ, ತಾಂತ್ರಿಕತೆ ಬೆಳೆದಂತೆಲ್ಲಾ ಗ್ರಾಮ, ನಾಡು, ದೇಶವೂ ಅಭಿವೃದ್ಧಿಪಥದತ್ತ ಸಾಗುತ್ತದೆ. ಎಲ್ಲಾ ಗ್ರಾಮಗಳಿಗೂ ಮೂಲ ಸೌಲಭ್ಯ ಕಲ್ಪಿಸಲಾಗುತ್ತದೆ. ಆದರೆ, 21ನೇ ಶತಮಾನದಲ್ಲೂ ಈ ಗ್ರಾಮಕ್ಕೆ ಮೂಲ ಸೌಲಭ್ಯಗಳಿಲ್ಲ.
ಈಗಾಗಲೇ ಚುನಾವಣೆ ಬಂದಿದ್ದು ಅಭಿವೃದ್ಧಿಯ ಮಂತ್ರ ಜಪಿಸುವ, ಸುಳ್ಳುಭರವಸೆ ನೀಡಿ ಮತಗಿಟ್ಟಿಸಿಕೊಂಡ ಜನಪ್ರತಿನಿಧಿಗಳು ಒಮ್ಮೆ ಇತ್ತ ಬಂದರೆ ಜನರ ಕಷ್ಟ ಗೊತ್ತಾಗುತ್ತದೆ. ಆದರೆ ದುರ್ದೈವ ಎಂದರೆ ಚುನಾವಣೆ ಬಂದಾಗ ಬರುವ ರಾಜಕೀಯ ಮುಖಂಡರು ಮತ್ತೆ ಇತ್ತ ಸುಳಿಯುವುದಿಲ್ಲ. ಈ ಗ್ರಾಮಕ್ಕೊಂದು ಸುತ್ತು ಹೊಡೆದರೆ ಇಲ್ಲಿನ ಜನಕ್ಕೆ ಅಗತ್ಯ ಸೌಲಭ್ಯಗಳಾದ. ರಸ್ತೆ, ಚರಂಡಿ, ಸಾರಿಗೆ ಸೌಕರ್ಯ ದೊರಕಿಲ್ಲ ಎಂಬುದು ಕಣ್ಣಿಗೆ ರಾಚುತ್ತದೆ. ಶಾಲಾ - ಕಾಲೇಜಿಗೆ ವಿದ್ಯಾರ್ಥಿಗಳು ಸುಮಾರು 3 ಕಿ.ಮೀ. ದೂರದವರೆಗೂ ನಡೆದುಕೊಂಡು ಹೋಬೇಕಾಗಿದೆ.

ಬಡವರ ಗ್ರಾಮ
ಗ್ರಾಮದ ಜನರ ಕಸುಬು ವ್ಯವಸಾಯ. ಇದನ್ನು ನಂಬಿಕೊಂಡು ಜನ ಜೀವನ ಸಾಗಿಸುತ್ತಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಬರ ತಟ್ಟಿದ ಪರಿಣಾಮ ಕೆಲವರು ಪಟ್ಟಣದತ್ತ ಮುಖ ಮಾಡಿದ್ದರೆ, ಕೆಲವರು ಕೂಲಿ ಮಾಡಿಕೊಂಡು, ಮತ್ತೆ ಕೆಲವರು ಕೋಳಿ, ಕುರಿ, ಹಸು ಸಾಕಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಗ್ರಾಮಕ್ಕೆ ಡಾಂಬರು ರಸ್ತೆ ಇಲ್ಲದ ಕಾರಣ ಬೇಸಿಗೆಯಲ್ಲಿ ಧೂಳುಮಯವಾದರೆ, ಮಳೆ ಬಂತೆಂದರೆ ಕೆಸರು ತುಂಬಿಕೊಳ್ಳುತ್ತದೆ. ಬಹಳಷ್ಟು ಗ್ರಾಮಗಳು ಎಲ್ಲ ರೀತಿಯ ಸೌಲಭ್ಯ ಪಡೆದುಕೊಂಡು ಅಭಿವೃದ್ಧಿಯತ್ತ ಸಾಗಿವೆ. ಆದರೆ ಅದ್ಯಾಕೋ ಗೊತ್ತಿಲ್ಲ ಕರಡಿಕೊಪ್ಪಲಿನತ್ತ ಯಾರೂ ಗಮನಹರಿಸಿದಂತೆ ಕಂಡು ಬರುತ್ತಿಲ್ಲ.

ಅಂಬರೀಶ್ ಕ್ಷೇತ್ರ
ಕರಡಿಕೊಪ್ಪಲು ಗ್ರಾಮ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ಈ ಕ್ಷೇತ್ರವನ್ನು ಅಂಬರೀಶ್ ಅವರು ಪ್ರತಿನಿಧಿಸುತ್ತಿದ್ದಾರೆ. ಆದರೆ ಅವರಿಗೆ ಈ ಗ್ರಾಮ ಎಲ್ಲಿದೆ ಎಂಬುದೇ ಗೊತ್ತಿಲ್ಲವೇನೋ? ಇನ್ನಾದರೂ ಈ ಗ್ರಾಮದತ್ತ ರಾಜಕೀಯ ಪಕ್ಷದ ಮುಖಂಡರು ಗಮನಹರಿಸುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications