ನನಗೆ ಅಧಿವೇಶನಕ್ಕಿಂತ ಪಂಚರತ್ನ ರಥಯಾತ್ರೆಯೇ ಮುಖ್ಯ: ಕುಮಾರಸ್ವಾಮಿ ಸ್ಪಷ್ಟನೆ
ಮಂಡ್ಯ, ಡಿಸೆಂಬರ್ 22 : ನನಗೆ ಅಧಿವೇಶನಕ್ಕಿಂತ ಪಂಚರತ್ನ ರಥಯಾತ್ರೆಯೇ ಮುಖ್ಯ. ಕಳೆದ ಮೂರು ದಿನಗಳ ಅಧಿವೇಶನದಲ್ಲಿ ಏನು ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮದ್ದೂರು ತಾಲೂಕು ಗೆಜ್ಜಲಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳ ಅಧಿವೇಶನದಲ್ಲಿ ನಾಡಿನ ಸಮಸ್ಯೆಗಳ ಕುರಿತು ಯಾವ ಚರ್ಚೆ ನಡೆದಿದೆ. ಇವತ್ತಿನ ಅಧಿವೇಶನಕ್ಕಿಂತಲೂ ಪಂಚರತ್ನ ರಥಯಾತ್ರೆ ನನಗೆ ಮುಖ್ಯವಾಗಿದ್ದು, 75 ವರ್ಷದಿಂದ ಈ ದೇಶದಲ್ಲಿ ಆಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ಪಂಚರತ್ನ ರಥಯಾತ್ರೆಯ ಮೂಲ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಇಷ್ಟು ವರ್ಷದಲ್ಲಿ ಎಷ್ಟು ವಿಧಾನಸಭಾ ಕಲಾಪ ನಡೆಸಿದ್ದೇವೆ. ಎಷ್ಟೇಲ್ಲಾ ಮಾತನಾಡಿದ್ದೇವೆ. ನಾವು ಮಾತನಾಡಿದ್ದೆಲ್ಲಾ ಜಾರಿಯಾಗಿದೆಯೇ..? ಸದನದಲ್ಲಿ ಮಾತನಾಡುವುದೇ ಬೇರೆ, ವಾಸ್ತವಾಂಶವೇ ಬೇರೆ ಎಂದರು.

ಸಮುದಾಯಗಳ ಬೇಡಿಕೆಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು
ಪಂಚಮಸಾಲಿ ಮೀಸಲಾತಿ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಚುನಾವಣಾ ಗಿಮಿಕ್ ಮಾಡಿಕೊಂಡು ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುವುದಿಲ್ಲ. ಆ ಕೆಲಸ ಈಗಿನ ಸರ್ಕಾರದಿಂದ ನಡೆಯುತ್ತಿದೆ. ಮೀಸಲಾತಿ ವಿಚಾರದಲ್ಲಿ ಕಾನೂನಾತ್ಮಕವಾಗಿ ಮತ್ತು ವೈಜ್ಞಾನಿಕವಾಗಿ ಆಲೋಚನೆ ಮಾಡಿ ಸಮುದಾಯಗಳ ಬೇಡಿಕೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದು ಸರ್ಕಾರದ ಕರ್ತವ್ಯವಾಗಬೇಕು. ಚುನಾವಣಾ ಉದ್ದೇಶದಿಂದ ತಾತ್ಕಾಲಿಕ ಪರಿಹಾರ ಸೂಚಿಸುವ ಕೆಲಸ ಮಾಡುವುದು ಸರಿಯಲ್ಲ. ವಾಸ್ತವಾಂಶಗಳ ಹಿನ್ನೆಲೆಯಲ್ಲಿ ಎಲ್ಲವೂ ತೀರ್ಮಾನವಾಗಬೇಕು. ಯಾವ ಯಾವ ಸಮಾಜಗಳಲ್ಲಿ ಏನೆಲ್ಲಾ ಪರಿಸ್ಥಿತಿಗಳಿವೆ ಎನ್ನುವುದನ್ನು ಅರಿತು ಶಾಶ್ವತವಾದ ಪರಿಹಾರ ಸೂಚಿಸಿದಾಗ ಜನರ ವಿಶ್ವಾಸ ಗಳಿಸಲು ಸಾಧ್ಯ ಎಂದು ತಿಳಿಸಿದರು.

ರೈತರ ಪರಿಸ್ಥಿತಿ ಏನೆಂಬುದು ಎಲ್ಲರಿಗೂ ಗೊತ್ತಿದೆ
ಪಂಚಮಸಾಲಿ ಸಮಾಜ ಕೃಷಿಯನ್ನೇ ನಂಬಿ ಬದುಕುತ್ತಿರುವ ಸಮಾಜ. ಅಲ್ಲೂ ಬಡತನವಿದೆ. ವೀರಶೈವ ಸಮಾಜದಲ್ಲೂ ಹಲವಾರು ಪಂಗಡಗಳಿದ್ದು, ಒಂದೊಂದು ಪಂಗಡ ಒಂದೊಂದು ವೃತ್ತಿ ಮಾಡುತ್ತಿದೆ. ಪಂಚಮಸಾಲಿ ಜನಾಂಗದವರು ಕೃಷಿಯನ್ನೇ ನಂಬಿರುವುದರಿಂದ ರೈತರ ಪರಿಸ್ಥಿತಿ ಏನೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ ಅವರು ಬೇಡಿಕೆ ಇಟ್ಟಿರುವುದರಲ್ಲಿ ತಪ್ಪಿಲ್ಲ ಎಂದರು.
ಐದು ವರ್ಷ ವಿಶ್ರಾಂತಿಯಲ್ಲಿದ್ದವರು ಈಗ ಒಕ್ಕಲಿಗ ಸಮಾಜದ ಬಗ್ಗೆ ಮಾತನಾಡುತ್ತಿದ್ದಾರೆ. ನನಗೆ ಒಕ್ಕಲಿಗ ಸಮಾಜದ ಬದುಕು ಗೊತ್ತಿಲ್ಲ. ಅವರು ಒಕ್ಕಲಿಗ ಸಮಾಜಕ್ಕೆ ನ್ಯಾಯ ಕೊಡಿಸಲು ಮುಂದಾಗಿದ್ದಾರೆ. ಅದೇನು ನ್ಯಾಯ ಕೊಡಿಸುತ್ತಾರೆ ಎಂಬುದನ್ನು ನಾವು ಹಿಂದೆ ನಿಂತು ನೋಡುತ್ತೇವೆ. ಅವರೇ ಮುಂದೆ ನಿಂತು ಹೋರಾಟ ಮಾಡಲಿ ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಕುಮಾರಸ್ವಾಮಿ ಪರೋಕ್ಷವಾಗಿ ತಿರುಗೇಟು ನೀಡಿದರು.

ಹೇಳಿಕೆಗಳನ್ನು ನೀಡಿದ ತಕ್ಷಣ ಕಾರ್ಯರೂಪಕ್ಕೆ ಬರುವುದಿಲ್ಲ
ಒಕ್ಕೂಟ ವ್ಯವಸ್ಥೆಯೊಳಗಿರುವ ರಾಜ್ಯ ಮತ್ತು ದೇಶದಲ್ಲಿ ಇರುವ ಭಾಷೆ ಮತ್ತು ಗಡಿ ಸಮಸ್ಯೆಗಳಿಗೆ ಶಾಂತಿಯುತವಾಗಿ ಪರಿಹಾರ ಕಂಡುಕೊಳ್ಳಬೇಕು. ಚೀನಾ ಮಾದರಿಯಲ್ಲಿ ಹೋರಾಟ ಮಾಡುತ್ತೇವೆಂಬ ಹೇಳಿಕೆ ಪ್ರಚೋದನಕಾರಿಯಾದದ್ದು, ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ವಾತಾವರಣ ಕಾಣಲಾಗುವುದಿಲ್ಲ. ರಾಜಕೀಯ ನಾಯಕರು ಹೇಳಿಕೆಗಳನ್ನು ನೀಡಿದ
ತಕ್ಷಣ ಅವುಗಳು ಯಾವು ಕಾರ್ಯರೂಪಕ್ಕೆ ಬರುವುದಿಲ್ಲ. ವೀರಾವೇಶದಲ್ಲಿ ಹೇಳಿಕೆಗಳನ್ನು ಕೊಡಬಹುದು. ಆದರೆ, ಇಂದಿನ ಪ್ರಜಾಪ್ರಭುತ್ವ ಮತ್ತು ಒಕ್ಕೂಟದ ವ್ಯವಸ್ಥೆಯಲ್ಲಿ ಈ ರೀತಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಪಂಚರತ್ನ ರಥಯಾತ್ರೆಗೆ ನಿಲ್ಲಿಸಲು ಕೇಶವಕೃಪಾದಲ್ಲಿ ಚರ್ಚೆ
ಪಂಚರತ್ನ ರಥಯಾತ್ರೆಗೆ ಭಾರಿ ಜನಬೆಂಬಲ ವ್ಯಕ್ತವಾಗುತ್ತಿರುವುದನ್ನು ಕಂಡು ಅದನ್ನು ನಿಲ್ಲಿಸಲು ಕೇಶವಕೃಪಾದಲ್ಲಿ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಕೊರೊನಾ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ಕೊಡಲು ನಾನು ಸಿದ್ಧನಿದ್ದೇನೆ. ಆದರೆ, ಕೊರೊನಾ ಭೂತವನ್ನು ಪಂಚರತ್ನ ರಥಯಾತ್ರೆ ಹತ್ತಿಕ್ಕುವುದಕ್ಕೆ ಹುನ್ನಾರ ನಡೆಸುವುದಾದರೆ ಅದು ಸಾಧ್ಯವಿಲ್ಲ. ಚೈನಾದಲ್ಲಿ ಕೊರೊನಾ ಆರ್ಭಟಿಸುತ್ತಿರುವುದು ಗೊತ್ತಿದೆ. ನಮ್ಮಲ್ಲೂ ಎರಡು ಮೂರು ಕಡೆ ಕೊರೊನಾ ಆರಂಭವಾಗಿದೆ ಎನ್ನುತ್ತಿದ್ದಾರೆ. ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅದನ್ನೇ ಅಸ್ತ್ರವಾಗಿಸಿಕೊಂಡು ರಥಯಾತ್ರೆ ಹತ್ತಿಕ್ಕುವುದಕ್ಕೆ ಬಳಸಿದರೆ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications