ಸಿದ್ದರಾಮಯ್ಯ ಭೇಟಿ ಮಾಡಿದ ನಿಖಿಲ್: ರಾಜಕೀಯ ಲೆಕ್ಕಾಚಾರ ಏನು?
ಬೆಂಗಳೂರು, ಏಪ್ರಿಲ್ 06: ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರನ್ನು ನಿನ್ನೆ ರಾತ್ರಿ ಮಂಡ್ಯದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭೇಟಿ ಆಗಿದ್ದಾರೆ. ಇಬ್ಬರೂ ಕೆಲವು ಕಾಲ ಮಂಡ್ಯ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಭೇಟಿಯ ಹಿಂದಿನ ರಾಜಕೀಯ ಉದ್ದೇಶವೇನು ಎಂಬುದು ಸುಲಭದ ಊಹೆಗೆ ನಿಲುಕುವಂತೆದ್ದೆ, ಮಂಡ್ಯದಲ್ಲಿ ದಿನೇ-ದಿನೇ ಸುಮಲತಾ ಅಂಬರೀಶ್ ಅವರು ಶಕ್ತಿ ವೃದ್ಧಿಸಿಕೊಳ್ಳುತ್ತಿದ್ದಾರೆ, ಇದು ನಿಖಿಲ್ ಕುಮಾರಸ್ವಾಮಿಗೆ ಆತಂಕ ತಂದಿದೆ, ಆ ಆತಂಕದಿಂದಲೇ ನಿಖಿಲ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಆಗಿದ್ದಾರೆ.
ಮಂಡ್ಯ ಜಿಲ್ಲೆಯ ಎಳೂ ವಿಧಾನಸಭೆ ಕ್ಷೇತ್ರಗಳು ಜೆಡಿಎಸ್ ತೆಕ್ಕೆಯಲ್ಲಿವೆ, ಆದರೂ ಸಹ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಸೂಕ್ತ ಬೆಂಬಲ ನೀಡದಿದ್ದಲ್ಲಿ ನಿಖಿಲ್ ಗೆ ಗೆಲುವು ಕಷ್ಟವಾಗಲಿದೆ, ಹಾಗಾಗಿ ಕ್ಷೇತ್ರದಲ್ಲಿ ತಮ್ಮದೇ ಆಡಳಿತ ಇದ್ದರೂ ಸಹ ಜೆಡಿಎಸ್ ಕಾಂಗ್ರೆಸ್ ಮುಖಂಡರ ಮುಂದೆ ಕೈಚಾಚುವ ಪರಿಸ್ಥಿತಿ ಬಂದಿದೆ.

ಡಿ.ಕೆ.ಶಿವಕುಮಾರ್ ಮಂಡ್ಯಕ್ಕೆ ಬಂದಾಗಿದೆ
ಕುಮಾರಸ್ವಾಮಿ ಅವರು ಈಗಾಗಲೇ ಡಿಕೆ.ಶಿವಕುಮಾರ್ ಅವರನ್ನು ಮಂಡ್ಯ ಅಖಾಡಕ್ಕೆ ಕರೆತಂದು ಭಾರಿ ಪ್ರಚಾರ ಸಭೆ ನಡೆಸಿದ್ದಾರೆ. ಅದಕ್ಕೂ ಮುನ್ನಾ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಮುಖಂಡರ ಜೊತೆ ಸಭೆ ಸಹ ನಡೆಸಿದ್ದರು, ಆದರೆ ಪರಿಸ್ಥಿತಿ ಸುಧಾರಿಸದೆ ಇನ್ನಷ್ಟು ಹದಗೆಟ್ಟಿತು, ಕಾಂಗ್ರೆಸ್ ಮುಖಂಡರು ಬಹಿರಂಗವಾಗಿಯೇ ಸುಮಲತಾ ಪರ ಬೆಂಬಲ ಘೋಷಿಸಿದರು.

ಸಿದ್ದರಾಮಯ್ಯ ಸಹಾಯ ಜೆಡಿಎಸ್ಗೆ ಬೇಕಿದೆ
ಹಾಗಾಗಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ನೇರ ಸಹಾಯವನ್ನು ಬಯಸುತ್ತಿದ್ದು, ಅದರ ಪ್ರಾರಂಭ ಹೆಜ್ಜೆಯಾಗಿಯೇ ನಿಖಿಲ್ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಮಂಡ್ಯಕ್ಕೆ ಪ್ರಚಾರಕ್ಕೆ ಕರೆಯುವ ಜೊತೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಮಾತನಾಡುವಂತೆಯೂ ನಿಖಿಲ್ ಮನವಿ ಮಾಡಿದ್ದಾರೆ.

ಚೆಲುವರಾಯಸ್ವಾಮಿ ಪ್ರಮುಖ ಅಡ್ಡಗಾಲು
ಮಂಡ್ಯದಲ್ಲಿ ನಿಖಿಲ್ ಗೆ ಪ್ರಬಲ ಅಡ್ಡಗಾಲಾಗಿರುವುದು ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ, ಇವರು ಸಿದ್ದರಾಮಯ್ಯ ಅವರ ಅನುಯಾಯಿ, ಚೆಲುವರಾಯಸ್ವಾಮಿಯನ್ನು ಜೆಡಿಎಸ್ನಿಂದ ಕಾಂಗ್ರೆಸ್ಗೆ ಕರೆತಂದು ಟಿಕೆಟ್ ಕೊಡಿಸಿದ್ದು ಇದೇ ಸಿದ್ದರಾಮಯ್ಯ, ಅದಕ್ಕಾಗಿಯೇ ಚೆಲುವರಾಯಸ್ವಾಮಿ ಅವರೊಂದಿಗೆ ಮಾತನಾಡಿ ಜೆಡಿಎಸ್ಗೆ ಬೆಂಬಲ ನೀಡುವಂತೆ ಸಿದ್ದರಾಮಯ್ಯ ಅವರನ್ನು ನಿಖಿಲ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಅನುಯಾಯಿಗಳೇ ಹೆಚ್ಚು
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋಲುಕಂಡಿದ್ದ ಕಾಂಗ್ರೆಸ್ ಮುಖಂಡರಲ್ಲಿ ಬಹುತೇಕರು ಸಿದ್ದರಾಮಯ್ಯ ಅನುಯಾಯಿಗಳೇ ಇದ್ದಾರೆ, ಹಾಗಾಗಿ ಸಿದ್ದರಾಮಯ್ಯ ಅವರನ್ನು ಮಂಡ್ಯ ಚುನಾವಣಾ ಕಣಕ್ಕೆ ಇಳಿಸಲು ಕುಮಾರಸ್ವಾಮಿ ಅವರ ಸೂಚನೆ ಮೇರೆಗೆಯೇ ನಿಖಿಲ್ ಅವರು ಸಿದ್ದರಾಮಯ್ಯ ಅವರ ಭೇಟಿ ಆಗಿದ್ದಾರೆ.

ನಿಖಿಲ್ ಪರ ರಾಹುಲ್ ಗಾಂಧಿ ಪ್ರಚಾರ
ಸಿದ್ದರಾಮಯ್ಯ ಅವರು ನಿಖಿಲ್ ಪರ ಪ್ರಚಾರ ಮಾಡಲು ಒಪ್ಪಿಕೊಂಡಿದ್ದು, ಸೋಮವಾರ ಅಥವಾ ಮಂಗಳವಾರ ಮಂಡ್ಯ, ಹಾಸನ, ಮೈಸೂರುಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಅಲ್ಲದೆ ನಿಖಿಲ್ ಕುಮಾರಸ್ವಾಮಿ ಪರವಾಗಿ ರಾಹುಲ್ ಗಾಂಧಿ ಅವರು ಸಹ ಮಂಡ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ.












Click it and Unblock the Notifications