HD Kumaraswamy: ಹೆಚ್ ಡಿ ಕುಮಾರಸ್ವಾಮಿ ಅರೋಗ್ಯದಲ್ಲಿ ಏರುಪೇರು: ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ
ಮಂಡ್ಯ, ಮೇ05: ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದಾರೆ. ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ.ಯಾರು ಕೂಡ ಆತಂಕ ಪಡಬೇಕಾಗಿಲ್ಲ, ಆದರೆ ಎರಡು ವಾರಗಳ ಕಾಲ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಅವರ ಪರವಾಗಿ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಯಾರು ಕೂಡ ಆತಂಕ ಪಡುವ ಅಗತ್ಯ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ಮಂಡ್ಯ ಜಿಲ್ಲೆಯ ಬೆಟ್ಟಹಳ್ಳಿ ಗ್ರಾಮದಲ್ಲಿ ಸೋಮೇಶ್ವರಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಮತ್ತು ಶಿಖರ ಕಳಸ ಪ್ರತಿಷ್ಠಾಪನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ, ಕುಮಾರಣ್ಣ ಅರೋಗ್ಯ ಸರಿ ಇಲ್ಲ ಅಂತ ರಾಜ್ಯದಲ್ಲೆಡೆ ಚರ್ಚೆಗಳು ಶುರುವಾಗಿದೆ, ಸೋಮೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ನಿಂತು ಒಂದು ಮಾತನ್ನು ತಿಳಿಸುತ್ತೇನೆ. ಅವರ ತಂದೆ ತಾಯಿ ಆಶೀರ್ವಾದ, ಭಗವಂತನ ಕೃಪೆ, ಜೊತೆಯಲ್ಲಿ ನಿಮ್ಮೆಲ್ಲರ ಪ್ರೀತಿಯ ಹಾರೈಕೆಯಿಂದ ಸನ್ಮಾನ್ಯ ಕುಮಾರಣ್ಣ ಅವರು ಆರೋಗ್ಯವಾಗಿದ್ದಾರೆ. ಯಾವುದೇ ಆರೋಗ್ಯದ ಸಮಸ್ಯೆ ಇಲ್ಲ, ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಕುಮಾರಣ್ಣ ಅವರು 2ನೇ ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮೂರು ವಿದ್ಯುತ್ ಉತ್ಪಾದಕ ಘಟಕಗಳನ್ನು ಮತ್ತು ನೀರಾವರಿಗೆ 200 ಕೋಟಿಗೂ ಹೆಚ್ಚು ಅನುದಾನವನ್ನು ನೀಡಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಕುಮಾರಣ್ಣ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಎಂದು ಅವರು ತಿಳಿಸಿದರು. ನಂತರ ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮಲ್ಲನಾಯಕನ ಕಟ್ಟೆ ಗ್ರಾಮದಲ್ಲಿ ಕಬಡ್ಡಿ ಪಂದ್ಯದ ವೇಳೆ ವೀಕ್ಷಕರ ಗ್ಯಾಲರಿ ಕುಸಿದು ಬಿದ್ದು ಸಾವನ್ನಪ್ಪಿದ ಪಾಪಣ್ಣಚಾರಿ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿ ಧೈರ್ಯ ತುಂಬಿದರು.
ಇದೇ ವೇಳೆ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರು ದಿವ್ಯಸಾನ್ನಿಧ್ಯದಲ್ಲಿ ಮಾಜಿ ಸಚಿವರಾದ ಸಿ. ಎಸ್ ಪುಟ್ಟರಾಜು ಅವರು, ಮನ್ಮುಲ್ ಮಾಜಿ ಅಧ್ಯಕ್ಷರಾದ ರಾಮಚಂದ್ರು ಅವರು ಮುಖಂಡರಾದ ಶಂಕರೇಗೌಡ ಅವರು ಸೇರಿದಂತೆ ಅನೇಕ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸಿದ್ದರಾಮಯ್ಯನವರು ದೇಹವೊಂದು, ನಾಲಿಗೆ ಎರಡು: ಜೆಡಿಎಸ್
ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಜಾತಿ ಗಣತಿ ವಿಷಯದಲ್ಲಿ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಅವರಿಗೆ ಜೆಡಿಎಸ್ ತಿರುಗೇಟು ನೀಡಿದೆ. ನರೇಂದ್ರ ಮೋದಿ ಅವರ ನಿರ್ಣಯದ ಜಾತಿ ಗಣತಿಯನ್ನು ಜೆಡಿಎಸ್ ಸ್ವಾಗತಿಸಿದೆ. ಆದರೆ, ನಿಮ್ಮ ಜಾತಿಗಣತಿಯನ್ನು ಜೆಡಿಎಸ್ ವಿರೋಧಿಸಿಲ್ಲ, ನೆನಪಿರಲಿ. ನಿಮ್ಮ ಗಣತಿ ಕ್ರಮಬದ್ಧವಾಗಿಲ್ಲ ಎಂಬ ಕಾರಣಕ್ಕೆ ವಿರೋಧಿಸಿದೆ ಎಂದು ಸಿಎಂಗೆ ಟಾಂಗ್ ನೀಡಿದೆ.
ದೇವೇಗೌಡರ ಗರಡಿಯಲ್ಲೇ ಬೆಳೆದು ರಾಜಕೀಯ ಬದುಕು ಕಟ್ಟಿಕೊಂಡ ಸಿದ್ದರಾಮಯ್ಯನವರು ಇಬ್ಬಗೆಯ ನೀತಿ ಬಗ್ಗೆ ಆಣಿಮುತ್ತು ಉದುರಿಸಿದ್ದಾರೆ. ಆಣಿಮುತ್ತು ಉದುರಿಸುವ ಭರದಲ್ಲಿ ತಾವೇನು? ತಮ್ಮ ನಿಜಬಣ್ಣವೇನು ಎಂಬುದನ್ನು ಮತ್ತೊಮ್ಮೆ ಲೋಕಾರ್ಪಿತ ಮಾಡಿದ್ದಾರೆ. ಸಿದ್ದರಾಮಯ್ಯನವರು ಎಂದರೆ ಹಾಗೆಯೇ.. ದೇಹವೊಂದು, ನಾಲಿಗೆ ಎರಡು ಎಂದು ಜೆಡಿಎಸ್ ಕುಟುಕಿದೆ.
ದೇವೇಗೌಡರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅವರ ಬಗ್ಗೆ ಸಿದ್ದರಾಮಯ್ಯನವರು ಸಹಜ, ಸಕಾರಾತ್ಮಕ ಟೀಕೆ ಮಾಡಲಿ. ಬೇಡ ಎಂದವರು ಯಾರು? ಆದರೆ, ಅದೇ ನಿತ್ಯಕೃಷಿ ಎಂಬಂತೆ ನಿರಂತರವಾಗಿ ರಾಜಕೀಯ ಜನ್ಮಕೊಟ್ಟ ಮೇರು ನಾಯಕನ ಬಗ್ಗೆಯೇ ವಿಷಕಾರುವುದು ಎಷ್ಟು ಸರಿ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಸಿದ್ದರಾಮಯ್ಯನವರು ಜನತಾ ಪರಿವಾರದಲ್ಲಿದ್ದಾಗ ಇಂದಿರಾ ಗಾಂಧಿ ಅವರ ಬಗ್ಗೆ ಉದುರಿಸಿದ್ದ ಭಾರೀ ಭಾರೀ ಆಣಿಮುತ್ತುಗಳನ್ನು ಜೀರ್ಣಿಸಿಕೊಳ್ಳಲು ಕಾಂಗ್ರೆಸ್ ನಾಯಕರಿಂದ ಸಾಧ್ಯವಿದೆಯಾ? ಇಂದಿರಾ ಗಾಂಧಿ ಅವರು ನಮ್ಮ ನಡುವೆ ಇಲ್ಲ. ಹೀಗಾಗಿ ಅವರ ಬಗ್ಗೆ ಸಿದ್ದರಾಮಯ್ಯನವರು ಉದುರಿಸಿದ್ದ ಆಣಿಮುತ್ತುಗಳನ್ನು ಉಲ್ಲೇಖಿಸುವುದು ಅಪ್ರಸ್ತುತ ಎಂದು ಜೆಡಿಎಸ್ ಹೇಳಿದೆ. ಕೊನೆಪಕ್ಷ, ಹುದ್ದೆಯ ಶಿಷ್ಟಾಚಾರಕ್ಕಾದರೂ ಕಟ್ಟುಬಿದ್ದು ಸಿಎಂ ಅವರು ತಮ್ಮ ನಾಲಿಗೆಗೆ ಆಚಾರ ಕಲಿಸಿಕೊಳ್ಳದಿದ್ದರೆ ಅವರು ಹಿಂದೆ ಉದುರಿಸಿದ್ದ ಎಲ್ಲಾ ಆಣಿಮುತ್ತುಗಳನ್ನು ಹೆಕ್ಕಿಹೆಕ್ಕಿ ಇಡಲಾಗುವುದು ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.
ಜೆಡಿಎಸ್ ಪಕ್ಷವು ಮುಂದಿನ ಜನಗಣತಿಯಲ್ಲಿಯೇ ಜಾತಿ ಗಣತಿ ನಡೆಸುವ ಮೋದಿ ಅವರ ನಿರ್ಣಯವನ್ನು ಜೆಡಿಎಸ್ ಸ್ವಾಗತಿಸಿದೆ. ಹಾಗೆಂದು, ಸಿದ್ದರಾಮಯ್ಯನವರೇ.., ನಿಮ್ಮ ಜಾತಿಗಣತಿಯನ್ನು ಜೆಡಿಎಸ್ ವಿರೋಧಿಸಿಲ್ಲ, ನೆನಪಿರಲಿ. ಆದರೆ, ನಿಮ್ಮ ಗಣತಿ ಕ್ರಮಬದ್ಧವಾಗಿಲ್ಲ ಎಂಬ ಕಾರಣಕ್ಕೆ ವಿರೋಧಿಸಿದೆ. ಅದು ಸುಳ್ಳು ಅಂಕಿ-ಅಂಶಗಳ ಕಾಗಕ್ಕಗುಬ್ಬಕ್ಕನ ಕಥೆ ಎಂಬುದನ್ನು ಜನರಿಗೆ ತಿಳಿಸಿದೆ ಎಂದು ಜೆಡಿಎಸ್ ಸ್ಪಷ್ಟಪಡಿಸಿದೆ. ನಿಮ್ಮ ಗಣತಿಗಾರುಡಿ ಎಲ್ಲರಂತೆ ನಮಗೂ ಅರ್ಥವಾಗಿದೆ. ನಿಮ್ಮದೇ ಪಕ್ಷದ ಶಾಸಕರು, ಸಚಿವರು ನಿಮ್ಮ ಗಣತಿಯ ಬಾಲ-ಬುಡ ಹಿಡಿದು ಬೀದಿಬೀದಿಯಲ್ಲಿ ಅಲ್ಲಾಡಿಸುತ್ತಿದ್ದಾರೆ. ನಿಮ್ಮ ಸರಕಾರದ ಬುಡವನ್ನೂ ಸಹ.. ಏನಂತೀರಿ..? ಎಂದು ಪ್ರಶ್ನೆ ಮಾಡಿದೆ.












Click it and Unblock the Notifications