ಮಂಡ್ಯದಲ್ಲಿ ರಂಗೇರಿದ ಚುನಾವಣಾ ಅಖಾಡ: ಹಳೆ ನಾಯಕರ ಮುಂದೆ ಹೊಸಬರ ಶಕ್ತಿ ಪ್ರದರ್ಶನ
ಮಂಡ್ಯ, ಡಿಸೆಂಬರ್ 8: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಆರು ತಿಂಗಳು ಬಾಕಿ ಇರುವಾಗಲೇ ಮಂಡ್ಯ ಜಿಲ್ಲೆಯಲ್ಲಿ ಚುನಾವಣಾ ಅಖಾಡ ರಂಗೇರಿದೆ. ಜಿಲ್ಲಾ ರಾಜಕೀಯಕ್ಕೆ ಹೊಸಬರ ಪ್ರವೇಶ ಹಳೆಯ ನಾಯಕರಿಗೆ ನುಂಗಲಾಗದ ಬಿಸಿತುಪ್ಪವಾಗಿದೆ. ಕ್ಷೇತ್ರದಲ್ಲಿ ಹೊಸಬರ ಅಬ್ಬರ ಆರಂಭವಾಗಿದೆ.
ಜಿಲ್ಲೆಯಲ್ಲಿ ಹೊಸದಾಗಿ ರಾಜಕೀಯ ಪ್ರವೇಶಿಸುವವರು ಜನರ ವಿಶ್ವಾಸ ಗಳಿಸುವುದಕ್ಕೆ ಹೆಚ್ಚಿನ ಉತ್ಸಾಹ ತೋರಿದ್ದು, ಚುನಾವಣೆ ಇನ್ನೂ ಕೆಲ ತಿಂಗಳಿರುವಂತೆಯೇ ಚುನಾವಣಾ ತಾಲೀಮು ಆರಂಭಿಸಿದ್ದಾರೆ. ಸಮಾಜಸೇವೆ ಹೆಸರಿನಲ್ಲಿ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಕ್ಷೇತ್ರದೊಳಗೆ ರಾಜಕೀಯವಾಗಿ ಹೆಸರು ಮಾಡಲು ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಪ್ರಿಯತೆ ಪಡೆದುಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದು, ಹಿಂದಿನ ನಾಯಕರಂತೆ ಹೊಸಬರ ಭರಾಟೆ ಕೂಡ ಜೋರಾಗಿದೆ.

ಜಿಲ್ಲೆಯಲ್ಲಿ ಸಕ್ರೀಯರಾದ ರಾಜಕೀಯ ಪ್ರವೇಶಾಕಾಂಕ್ಷಿಗಳು
ವರ್ಷದಿಂದಲೇ ಸಕ್ರಿಯ ಚುನಾವಣಾ ಆಕಾಂಕ್ಷಿಗಳಾಗಿರುವ ಹೊಸಬರಲ್ಲಿ ಹಲವರು ಕಳೆದೊಂದು ವರ್ಷದಿಂದಲೇ ಕ್ಷೇತ್ರದೊಳಗೆ ಸಕ್ರಿಯರಾಗಲು ಆರಂಭಿಸಿದ್ದರು. ನಾನಾ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಾ ಕ್ಷೇತ್ರದೊಳಗೆ ಅಸ್ತಿತ್ವ ಕಂಡುಕೊಳ್ಳುವುದರೊಂದಿಗೆ ಜನರ ಬಳಿ ಗುರುತಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕಾರ್ಯಕ್ರಮಗಳಿಗೆ ಕೆಲವರು ಲಕ್ಷಾಂತರ ರೂಪಾಯಿ ಹಣವನ್ನು ಚೆಲ್ಲಿದರೆ, ಮತ್ತೆ ಕೆಲವರು ಒಂದು ಕೋಟಿ ರೂಪಾಯಿವರೆಗೆ ಹಣ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ರಾಜಕೀಯ ಪ್ರವೇಶಾಕಾಂಕ್ಷಿಗಳು ಹಣ ಖರ್ಚು ಮಾಡುವುದನ್ನು ಕಂಡು ಹಳೆಯ ನಾಯಕರಲ್ಲಿ ಆತಂಕ ಆರಂಭವಾಗಿದೆ ಎನ್ನುವ ಮಾತುಗಳು ಸಹ ಆರಂಭವಾಗಿದೆ.

ಹಳೆ ನಾಯಕರ ಮುಂದೆ ಹೊಸಬರ ಶಕ್ತಿ ಪ್ರದರ್ಶನ
ಇದೀಗ ಚುನಾವಣೆಗೆ ಇನ್ನೂ ಆರು ತಿಂಗಳಿದೆ. ಆಗಲೇ ಮದ್ದೂರು, ನಾಗಮಂಗಲ, ಮಂಡ್ಯ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ ಕ್ಷೇತ್ರಗಳಲ್ಲಿ ಬಿರುಸಿನ ಪೈಪೋಟಿ ನಡೆಯುತ್ತಿದೆ. ಮಳವಳ್ಳಿ ಹಾಗೂ ಪಾಂಡವಪುರ ಕ್ಷೇತ್ರಗಳಲ್ಲಿ ಹೆಚ್ಚಿನ ಹೊಸ ಮುಖಗಳಿಲ್ಲದ ಕಾರಣ ಅಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ.
ಆರೋಗ್ಯ ಮೇಳ, ಉದ್ಯೋಗ ಮೇಳ, ದೇವಸ್ಥಾನ ಜೀರ್ಣೋದ್ಧಾರ, ಮಳೆಯಿಂದ ಹಾನಿಗೊಳಗಾದವರಿಗೆ ಆರ್ಥಿಕ ನೆರವು, ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಧಾರ್ಮಿಕ ಯಾತ್ರೆ, ಋತುಮತಿಯಾದ ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ, ನೀರಿನ ಕ್ಯಾನ್ ವಿತರಣೆ, ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಹಬ್ಬ, ಗಣಪತಿ ಪ್ರತಿಷ್ಠಾಪನೆಗೆ ನೆರವು, ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಕ್ರೀಡಾ ಸಾಮಗ್ರಿಗಳ ವಿತರಣೆ ಸೇರಿದಂತೆ ಹಲವಾರು ರೀತಿಯ ಸೇವಾ ಕಾರ್ಯಗಳನ್ನು ಹೊಸ ಆಕಾಂಕ್ಷಿಗಳು ನಿರಂತರವಾಗಿ ನಡೆಸಿಕೊಂಡು ಬರುವುದರೊಂದಿಗೆ ಹಳಬರೆದುರು ತಮ್ಮ ಶಕ್ತಿ ಪ್ರದರ್ಶನ ನಡೆಸುತ್ತಿದ್ದಾರೆ.

ರಾಜಕೀಯ ಭವಿಷ್ಯದ ಬಗ್ಗೆ ಹಳೆ ನಾಯಕರ ಚಿಂತೆ
ಹೊಸ ಮುಖಗಳು ಕ್ಷೇತ್ರದೊಳಗೆ ಹೆಚ್ಚು ಸಕ್ರಿಯರಾಗುತ್ತಿರುವುದನ್ನು ಕಂಡ ಹಳೆಯ ರಾಜಕೀಯ ನಾಯಕರು, ಇದೀಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಕ್ಷೇತ್ರದೊಳಗೆ ಸಂಚರಿಸುವುದು, ಮುಖಂಡರ ಮನೆಗಳಿಗೆ ಭೇಟಿ ಕೊಟ್ಟು ಮಾತುಕತೆ ನಡೆಸುವುದು, ಪಂಚಾಯಿತಿವಾರು ಸಭೆ-ಸಮಾರಂಭಗಳನ್ನು ಆಯೋಜಿಸಿ ಔತಣ ಕೂಟಗಳನ್ನು ಏರ್ಪಡಿಸುವುದಕ್ಕೆ ಮುಂದಾಗಿದ್ದಾರೆ.
ಚುನಾವಣೆ ಸಮೀಪಿಸುವವರೆಗೆ ಕಾದುಕುಳಿತರೆ ಹೊಸ ಮುಖಗಳ ಅಬ್ಬರದ ನಡುವೆ ತಾವೆಲ್ಲಿ ಕಳೆದುಹೋಗುವೆವೋ ಎಂಬ ಭಯವೂ ಅವರನ್ನು ಕಾಡುತ್ತಿದೆ. ಹಣವಿರುವವರ ಕಡೆಗೆ ಮತದಾರರು ವಾಲಿದರೆ ಮುಂದೆ ತಮ್ಮ ರಾಜಕೀಯ ಭವಿಷ್ಯದ ಕತೆ ಏನು ಎಂಬ ಆತಂಕದಿಂದ ಅನೇಕ ನಾಯಕರು ಅಖಾಡ ಪ್ರವೇಶಿಸಿ ಜನರಿಗೆ ಹತ್ತಿರವಾಗುವುದಕ್ಕೆ ಕಾರ್ಯೋನ್ಮುಖರಾಗಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ರವೀಂದ್ರ ಶ್ರೀಕಂಠಯ್ಯ ಚುನಾವಣೆ ಸಿದ್ಧತೆ
ನಾಗಮಂಗಲದಲ್ಲಿ ಎನ್.ಚಲುವರಾಯಸ್ವಾಮಿ, ಎಲ್.ಆರ್.ಶಿವರಾಮೇಗೌಡ, ಮದ್ದೂರಿನಲ್ಲಿ ಡಿ.ಸಿ.ತಮ್ಮಣ್ಣ, ಮೇಲುಕೋಟೆಯಲ್ಲಿ ಸಿ.ಎಸ್.ಪುಟ್ಟರಾಜು, ಶ್ರೀರಂಗಪಟ್ಟಣದಲ್ಲಿ ರವೀಂದ್ರ ಶ್ರೀಕಂಠಯ್ಯ ಅವರನ್ನು ಹೊರತುಪಡಿಸಿದಂತೆ ಉಳಿದವರು ಇನ್ನೂ ಚುನಾವಣಾ ಕಾರ್ಯಚಟುವಟಿಕೆಯಲ್ಲಿ ಸಕ್ರಿಯರಾಗಲು ಮುಂದಾಗಿಲ್ಲ. ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಶಾಸಕ ಕೆ.ಸುರೇಶ್ಗೌಡ ಅವರಿನ್ನೂ ಈಗಲೇ ಚುನಾವಣಾ ಅಖಾಡ ಪ್ರವೇಶಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.












Click it and Unblock the Notifications