ಮಂಡ್ಯ; ಕೆಆರ್ಎಸ್ ಜಲಾಶಯಕ್ಕೆ ಸಂಸದೆ ಸುಮಲತಾ ಭೇಟಿ
ಮಂಡ್ಯ, ಜುಲೈ 14; ಕರ್ನಾಟಕದಲ್ಲಿ ಕೆಆರ್ಎಸ್ ಜಲಾಶಯದ ವಿಚಾರ ಭಾರೀ ಚರ್ಚೆಯಲ್ಲಿದೆ. ಡ್ಯಾಂ ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂದು ಮಂಡ್ಯ ಸಂಸದೆ ಆರೋಪಿಸಿದ್ದರು. ಇದರಿಂದ ಅಣೆಕಟ್ಟಿಗೆ ಅಪಾಯವಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಬುಧವಾರ ಸಂಸದೆ ಸುಮಲತಾ ಶ್ರೀರಂಗಪಟ್ಟಣದಲ್ಲಿರುವ ಕೆಆರ್ಎಸ್ ಜಲಾಶಯಕ್ಕೆ ಭೇಟಿ ನೀಡಿದರು. ಅಣೆಕಟ್ಟೆಯ ಪರಿಶೀಲನೆಯನ್ನು ನಡೆಸಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

ಇದಕ್ಕೂ ಮೊದಲು ಮೈಸೂರಿನಲ್ಲಿ ಮಾತನಾಡಿದ ಸುಮಲತಾ, "ಕೆಆರ್ಎಸ್ ಬಿರುಕು ಬಿಟ್ಟಿದೆ ಅಂತ ನಾನು ಹೇಳಿಲ್ಲ. ಬಿರುಕು ಬಿಟ್ಟಿದೆಯಾ? ಅಂತ ಸಭೆಯಲ್ಲಿ ಕೇಳಿದ್ದೇನೆ. ಬಿರುಕು ಬಿಡುತ್ತದೆ ಎಂಬ ಆತಂಕವನ್ನು ದಿಶಾ ಸಭೆಯಲ್ಲಿ ವ್ಯಕ್ತಪಡಿಸಿದ್ದೇನೆ" ಎಂದು ಹೇಳಿದ್ದಾರೆ.
"ಕೆಆರ್ಎಸ್ ಜಲಾಶಯ ಬಿರುಕು ಬಿಟ್ಟಿದೆ" ಎಂದು ಸಂಸದೆ ಸುಮಲತಾ ಹೇಳಿದ್ದಾರೆ ಎಂಬ ವಿಚಾರ ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೇ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಜೆಡಿಎಸ್ ನಾಯಕರು ಮತ್ತು ಸುಮಲತಾ ನಡುವೆ ಮಾತಿನ ಸಮರವೇ ನಡೆದಿತ್ತು.
ಕೆಆರ್ಎಸ್ ವಿಚಾರದಲ್ಲಿ ಆರಂಭವಾದ ಮಾತಿನ ಸಮರ ಅಂಬರೀಶ್ ಸಾವು, ಮಂಡ್ಯದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಕೆಆರ್ಎಸ್ ಸುತ್ತಲಿನ ಅಕ್ರಮ ಗಣಿಗಾರಿಕೆ ಸೇರಿದಂತೆ ಹಲವು ಆಯಾಮಗಳನ್ನು ಪಡೆದುಕೊಂಡಿತ್ತು.
ಕೆಆರ್ಎಸ್ ವಿಚಾರದಲ್ಲಿ ರಾಜ್ಯಾದ್ಯಂತ ಚರ್ಚೆಗಳು ನಡೆಯುವಾಗಲೇ ಸುಮಲತಾ ಡ್ಯಾಂಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಅಧಿಕಾರಿಗಳ ಜೊತೆ ಚರ್ಚೆಯನ್ನು ನಡೆಸಿದರು.
ಅಂದಹಾಗೆ ಕಾವೇರಿ ಕೊಳ್ಳದ ಪ್ರಮುಖ ಜಲಾಶಯ ಕೆಆರ್ಎಸ್. ಜುಲೈ 14ರ ಮಾಹಿತಿಯಂತೆ 38.04 ಮೀಟರ್ ಎತ್ತರದ ಜಲಾಶಯದಲ್ಲಿ 27.11 ಮೀಟರ್ ನೀರಿನ ಸಂಗ್ರಹವಿದೆ. 4029 ಕ್ಯುಸೆಕ್ ಒಳಹರಿವು, 1437 ಕ್ಯುಸೆಕ್ ಹೊರಹರಿವು ಇದೆ.
ಕೆಆರ್ಎಸ್ ಸುತ್ತ ಗಣಿಗಾರಿಕೆ ನಿಷೇಧ; ಮಂಡ್ಯದಲ್ಲಿ ಜುಲೈ 12ರಂದು ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ, "ಕೆಆರ್ಎಸ್ ಡ್ಯಾಂ ಸುತ್ತ ಕಲ್ಲುಗಣಿಗಾರಿಕೆಯನ್ನೇ ನಿಲ್ಲಿಸಬೇಕು. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಸಂಪೂರ್ಣ ಸ್ಥಗಿತಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ. ಡ್ಯಾಂ ಇರುವ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಮಾಡಲು ಅವಕಾಶವಿದೆ" ಎಂದು ಹೇಳಿದ್ದರು.
"ಅಣೆಕಟ್ಟಿನ ವಿಚಾರ ಸದ್ಯ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಗಣಿ ಪ್ರದೇಶದಲ್ಲಿ ಸ್ಪೋಟಕಗಳನ್ನು ಮಾಡುವುದರಿಂದ ಡ್ಯಾಂಗೆ ಡ್ಯಾಮೇಜ್ ಆಗುತ್ತದೆ ಎಂಬ ಕೂಗು ಬಹಳದಿನಗಳಿಂದ ಇದೆ. ಹೀಗಾಗಿ ಡ್ಯಾಂ ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆಯನ್ನೇ ಸ್ಥಗಿತಮಾಡುವುದು ಉತ್ತಮ" ಎಂದು ಅಭಿಪ್ರಾಯಪಟ್ಟಿದ್ದರು.












Click it and Unblock the Notifications